
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರ 20 ತಿಂಗಳ ಆಡಳಿತ ಕುರಿತು ‘ಭೂಮಿಪುತ್ರ' ಎಂಬ ಸಿನಿಮಾ ಮಾಡಲು ಸಿದ್ಧತೆ ಆರಂಭವಾಗಿರುವ ಬೆನ್ನಲ್ಲೇ ಇದಕ್ಕೆ ಪತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದ ಕುರಿತು ಸಿನಿಮಾ ನಿರ್ಮಾಣ ಮಾಡಲು ಸಿದ್ಧತೆ ಆರಂಭವಾಗಿದೆ.
ಈ ಸಿನಿಮಾ ಮಾಡುವ ವಿಚಾರ ಮಾತು ಕತೆಯ ಹಂತದಲ್ಲಿದ್ದು, ಇನ್ನೂ ಸ್ಪಷ್ಟಚಿತ್ರಣ ದೊರೆತಿಲ್ಲ. ಬಿಜೆಪಿ ನಾಯಕ, ಕಂಠೀರವ ಸ್ಟುಡಿಯೋದ ಮಾಜಿ ಅಧ್ಯಕ್ಷ ರುದ್ರೇಶ್ ಈ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದು, ಇವರೊಂದಿಗೆ ಚಿಕ್ಕ ಬಾಣಾವರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಮರಿಸ್ವಾಮಿ ಅವರು ನಿರ್ಮಾಣಕ್ಕೆ ಕೈಜೋಡಿಸಲಿದ್ದಾರೆ. ಸಿನಿಮಾಕ್ಕೆ ‘ನೇಗಿಲಯೋಗಿ' ಎಂದು ಚಿತ್ರಕ್ಕೆ ಹೆಸರಿಡುವ ಯೋಚನೆ ರುದ್ರೇಶ್ ಅವರಿಗಿದೆ.
ಅಂದಹಾಗೆ ರುದ್ರೇಶ್ ಅವರು 2008ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ‘ಯಡಿಯೂರಪ್ಪ ಅವರ ಪಾತ್ರಕ್ಕೆ ನಟ ಉಪೇಂದ್ರ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಉಪೇಂದ್ರ ಅವರಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಮತ್ತೊಮ್ಮೆ ಅವರೊಂದಿಗೆ ಚರ್ಚೆ ನಡೆಸಲಾಗುವುದು. ನಾಯಕನ ಪಾತ್ರ ಹೊರತುಪಡಿಸಿ ಇನ್ನುಳಿದವರ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದೂ ನಿರ್ಧಾರವಾಗಿಲ್ಲ' ಎಂದು ರುದ್ರೇಶ್ ‘ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಪಾತ್ರದಲ್ಲಿ ಶ್ರುತಿ, ಕೇಂದ್ರ ಸಚಿವ ಅನಂತಕುಮಾರ್ ಪಾತ್ರದಲ್ಲಿ ಕುಮಾರ್ ಬಂಗಾರಪ್ಪ ನಟಿಸುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.