
ಬೆಂಗಳೂರು(ಜುಲೈ 17): ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸೌಲಭ್ಯ ನೀಡಲು 2 ಕೋಟಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಜೈಲು ಅಧೀಕ್ಷಕ ಕೃಷ್ಣಕುಮಾರ್ ಅವರನ್ನ ಕೊನೆಗೂ ಎತ್ತಂಗಡಿ ಮಾಡಲಾಗಿದೆ. ಇಂದು ಬೆಳಗ್ಗೆ ಸರಕಾರ ನೀಡಿದ ವರ್ಗಾವಣೆ ಪಟ್ಟಿಯಲ್ಲಿ ಕೃಷ್ಣಕುಮಾರ್ ಅವರ ಹೆಸರಿಲ್ಲದೇ ಇದ್ದದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಸುವರ್ಣನ್ಯೂಸ್ ವಾಹಿನಿ ಈ ಕುರಿತು ವಿಶೇಷ ಸುದ್ದಿ ಪ್ರಸಾರ ಮಾಡಿ ಗಮನ ಸೆಳೆದಿತ್ತು. ಇದಾದ ಬೆನ್ನಲ್ಲೇ ಕೃಷ್ಣಕುಮಾರ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಆದರೆ, ಕೃಷ್ಣಕುಮಾರ್ ಅವರಿಗೆ ಇನ್ನೂ ಯಾವುದೇ ಹುದ್ದೆ ನೀಡಿಲ್ಲ.
ಇದೇ ವೇಳೆ, ಕೃಷ್ಣಕುಮಾರ್ ಅವರಿಂದ ತೆರವಾದ ಸ್ಥಾನಕ್ಕೆ ಮಹಿಳಾ ಅಧಿಕಾರಿಯೊಬ್ಬರನ್ನು ತರಲಾಗಿದೆ. ಆರ್.ಅನಿತಾ ಅವರು ಕೇಂದ್ರ ಕಾರಾಗೃಹದ ಪ್ರಭಾರ ಮುಖ್ಯ ಜೈಲು ಅಧೀಕ್ಷಕಿಯಾಗಿ ನಿಯೋಜನೆಯಾಗಿದ್ದಾರೆ.
ಯಾರಾರಿಗೆ ವರ್ಗಾವಣೆ ಭಾಗ್ಯ?
1) ಎಂಎನ್ ರೆಡ್ಡಿ: ಗುಪ್ತಚರ-ಡಿಜಿಪಿ ಸ್ಥಾನದಿಂದ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಡಿಜಿಪಿಯಾಗಿ ವರ್ಗಾವಣೆ.
2) ಎನ್.ಎಸ್.ಮೇಘರಿಕ್: ಎಸಿಬಿ-ಎಡಿಜಿಪಿಯಿಂದ ಬಂದೀಖಾನೆ ಎಡಿಜಿಪಿಯಾಗಿ ವರ್ಗಾವಣೆ
3) ಡಾ| ಎ.ಎಸ್.ಎನ್.ಮೂರ್ತಿ: ಸಂಚಾರ ಮತ್ತು ರಸ್ತೆ ಸುರಕ್ಷತೆಯ ಆಯುಕ್ತ ಹಾಗೂ ಎಡಿಜಿಪಿಯಿಂದ ಅರಣ್ಯ ವಿಭಾಗ ಎಡಿಜಿಪಿಯಾಗಿ ವರ್ಗ
4) ಅಮೃತ್ ಪೌಲ್: ಗುಪ್ತಚರ-ಐಜಿಪಿಯಿಂದ ಗುಪ್ತಚರ ಡಿಜಿಪಿಯಾಗಿ ವರ್ಗಾವಣೆ.
5) ಡಿ.ರೂಪಾ: ಬಂದೀಖಾನೆ-ಡಿಐಜಿಯಿಂದ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಡಿಐಜಿಯಾಗಿ ವರ್ಗಾವಣೆ.
6) ಎಚ್.ಎನ್.ಸತ್ಯನಾರಾಯಣ ರಾವ್: ಬಂದೀಖಾನೆ-ಡಿಜಿಪಿ ಸ್ಥಾನದಿಂದ ವರ್ಗಾವಣೆ. (ಯಾವ ಹುದ್ದೆ ಎಂದು ನಿರ್ದಿಷ್ಟಪಡಿಸಿಲ್ಲ.)
7) ಕೃಷ್ಣಕುಮಾರ್: ಕೇಂದ್ರ ಕಾರಾಗೃಹ ಜೈಲು ಅಧೀಕಕ್ಷ ಸ್ಥಾನದಿಂದ ವರ್ಗಾವಣೆ (ಯಾವ ಹುದ್ದೆಗೆ ಎಂಬುದು ನಿಗದಿಯಾಗಿಲ್ಲ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.