
ನವದೆಹಲಿ[ಅ.21]: ದೇಶದ ಪ್ರಮುಖ ತನಿಖಾ ಸಂಸ್ಥೆ ಸಿಬಿಐ ತನ್ನ ಸಂಸ್ಥೆಯ ನಂ.2 ಅಧಿಕಾರಿ ವಿಶೇಷ ನಿರ್ದೇಶಕರಾದ ರಾಕೇಶ್ ಅಸ್ತಾನ ವಿರುದ್ಧ ಲಂಚ ಪಡೆದ ಆರೋಪದಲ್ಲಿ ಕೇಸ್ ದಾಖಲಿಸಿದೆ.
ಕೇಂದ್ರೀಯ ತನಿಖಾ ದಳದ ಭ್ರಷ್ಟಾಚಾರ ವಿರೋಧಿ ಘಟಕ ವಿವಾದಾತ್ಮಕ ಮಾಂಸ ರಫ್ತುದಾರ ಮೋಹಿನ್ ಖುರೇಷಿ ಎಂಬುವವರಿಂದ 2 ಕೋಟಿ ರೂ. ಲಂಚ ಪಡೆದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅ.16 ರಂದು ಸಿಬಿಐ ಭ್ರಷ್ಟಾಚಾರ ವಿರೋಧಿ ಘಟಕ ಹಣ ಮಧ್ಯಸ್ಥಿಕೆಯ ಪ್ರಕರಣದಲ್ಲಿ ಮನೋಜ್ ಕುಮಾರ್ ಎಂಬಾತನನ್ನು ಬಂಧಿಸಿತ್ತು. ಮನೋಜ್ ತಪ್ಪೊಪ್ಪಿಗೆ ಹೇಳಿಕೆಯ ಮೇಲೆ ಅಸ್ತಾನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಅಸ್ತಾನ ಅವರು ಮೋಹಿನ್ ಖುರೇಷಿಯ ಪರವಾಗಿ ಅವರ ಬೆಂಬಲಿಗ ಮನೋಜ್ ಅವರಿಂದ ಲಂಚ ಸ್ವೀಕರಿಸಿದ್ದಾರೆ. ಖುರೇಷಿ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಅಸ್ತಾನ ಕೂಡ ಈಗಾಗಲೇ ಸಿಬಿಐನಿಂದ 6 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಸಿಬಿಐ ಮತ್ತೊಂದು ತನಿಖಾ ಸಂಸ್ಥೆ 'ರಾ' ದ ಹಿರಿಯ ಅಧಿಕಾರಿ ಸಮಂತ್ ಕುಮಾರ್ ಗೋಯಲ್ ವಿರುದ್ದವೂ ಸುಲಿಗೆ ಆರೋಪದ ಮೇಲೆ ಕೂಡ ಪ್ರಕರಣ ದಾಖಲಿಸಿದೆ.ಗೋಯಲ್ ಅವರು ಪಂಜಾಬ್ ಕೇಡರ್'ನ 1984ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದು, ಶೀಘ್ರದಲ್ಲೇ ಅವರ ವಿರುದ್ದವೂ ಎಫ್'ಐಆರ್ ದಾಖಲಿಸಲಿದೆ.
ವಿವಾದಾತ್ಮಕ ವ್ಯಕ್ತಿ
ರಾಕೇಶ್ ಅಸ್ತಾನ ಸಿಬಿಐನಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ. ಅವರನ್ನು ವಿಶೇಷ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನೇಮಿಸಿರುವುದರ ಸರ್ಕಾರೇತರ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಸರ್ಕಾರ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಎನ್ ಜಿಒ ಅರ್ಜಿಯನ್ನು ವಜಾಗೊಳಿಸಿತ್ತು.ಕಂಪನಿಯೊಂದಕ್ಕೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾದ ಡೈರಿಯಲ್ಲಿ ಆಸ್ತಾನ ಹೆಸರು ಉಲ್ಲೇಖಿಸಲಾಗಿದ್ದ ಹಿನ್ನಲೆಯಲ್ಲಿ ನೇಮಕಕ್ಕೆ ವಿರೋಧ ವ್ಯಕ್ತವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.