ಎಟಿಎಂ ಹಲ್ಲೆ ಪ್ರಕರಣ: ಮೂರು ವರ್ಷಗಳ ಬಳಿಕ ಸಿ ರಿಪೋರ್ಟ್ ಸಲ್ಲಿಕೆ; ಕೇಸ್ ಕ್ಲೋಸ್

By Suvarna Web DeskFirst Published Nov 17, 2016, 11:56 PM IST
Highlights

2013ರ ನವೆಂಬರ್ 19ರಂದು ಕಾರ್ಪೊರೇಶನ್ ಸರ್ಕಲ್'ನಲ್ಲಿದ್ದ ಎಟಿಎಂನೊಳಗೆ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮಧ್ಯ ವಯಸ್ಸಿನ ಈ ಮಹಿಳೆಯಿಂದ ಹಣಕ್ಕೆ ಬೇಡಿಕೆ ಇಟ್ಟ ಆರೋಪಿಯು ಮಚ್ಚಿನಿಂದ ಆಕೆಯ ತಲೆ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು.

ಬೆಂಗಳೂರು(ನ. 18): ಮೂರು ವರ್ಷಗಳ ಹಿಂದೆ ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಎಟಿಎಂ ಹಲ್ಲೆ ಪ್ರಕರಣ ಬಹುತೇಕ ಮುಕ್ತಾಯಗೊಂಡಂತಾಗಿದೆ. ಆರೋಪಿಯ ಸುಳಿವೇ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಇದರೊಂದಿಗೆ, ಕಾರ್ಪೊರೇಶನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್'ಗೆ ನ್ಯಾಯ ಸಿಗುವ ಸಾಧ್ಯತೆ ಇಲ್ಲದಂತಾಗಿದೆ.

2013ರ ನವೆಂಬರ್ 19ರಂದು ಕಾರ್ಪೊರೇಶನ್ ಸರ್ಕಲ್'ನಲ್ಲಿದ್ದ ಎಟಿಎಂನೊಳಗೆ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಮಧ್ಯ ವಯಸ್ಸಿನ ಈ ಮಹಿಳೆಯಿಂದ ಹಣಕ್ಕೆ ಬೇಡಿಕೆ ಇಟ್ಟ ಆರೋಪಿಯು ಮಚ್ಚಿನಿಂದ ಆಕೆಯ ತಲೆ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಟಿವಿಗಳಲ್ಲಿ ಈ ದೃಶ್ಯ ಹಲವು ದಿನ ಹೆಡ್'ಲೈನ್ ಆಗಿತ್ತು. ಸಿಸಿಟಿವಿಯಲ್ಲಿ ಆರೋಪಿಯು ಸ್ಪಷ್ಟವಾಗಿ ಕಂಡುಬಂದರೂ ಪೊಲೀಸರ ಕೈಗೆ ಮಾತ್ರ ಸಿಗಲಿಲ್ಲ. 300 ಅಧಿಕಾರಿಗಳಿದ್ದ 15 ಪೊಲೀಸ್ ತಂಡಗಳು ಆಂಧ್ರ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೂ ಹೋಗಿ ಶೋಧ ನಡೆಸಿದರೂ ಏನೂ ಪ್ರಯೋಜನವಾಗಲಿಲ್ಲ.

Latest Videos

ಇತ್ತ, ಹಲ್ಲೆಗೊಳಗಾಗಿದ್ದ ಜ್ಯೋತಿ ಉದಯ್ ಕೆಲ ತಿಂಗಳ ಬಳಿಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಚೇತರಿಸಿಕೊಂಡಿದ್ದಾರೆ.

ಸಿ ರಿಪೋರ್ಟ್ ಎಂದರೆ?
ಸಿ ರಿಪೋರ್ಟ್ ಎಂದರೆ, ತನಿಖೆಯನ್ನು ಮುಂದುವರೆಸಲು ಸದ್ಯಕ್ಕೆ ಯಾವುದೇ ದಾಖಲೆಗಳಿಲ್ಲ; ಮುಂದಿನ ದಿನಗಳಲ್ಲಿ  ಪೂರಕ  ದಾಖಲೆಗಳು ಲಭ್ಯವಾದಲ್ಲಿ ತನಿಖೆ ಮುಂದುವರೆಸಲಾಗುವುದೆಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸುವ ವರದಿ. ಸಿ ರಿಪೋರ್ಟ್ ಸಲ್ಲಿಸಿದಲ್ಲಿ ಪ್ರಕರಣ ಅಂತ್ಯಗೊಳ್ಳುವುದಿಲ್ಲ.

ಬಿ ರಿಪೋರ್ಟ್ ಎಂದರೆ, ಆರೋಪಿ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸುವ ವರದಿ. ಬಿ ರಿಪೋರ್ಟ್ ಸಲ್ಲಿಸುವುರಿಂದ ಪ್ರಕರಣ ಮುಕ್ತಾಯಗೊಂಡಿದೆ ಎಂದೇ ಅರ್ಥ

click me!