ದೆಹಲಿಯ ಉದ್ಯಮಿಯೊಬ್ಬರಿಗೆ ಹೈ-ಟೆಕ್ ಖದೀಮರು ವಂಚಿಸಿರುವ ರೀತಿ ಪೊಲೀಸರನ್ನು ಕೂಡಾ ನಿಬ್ಬೆರಗಾಗಿಸಿದೆ. ಡಿಜಿಟಲ್ ಕಳ್ಳರ ಕೈಚಳಕಕ್ಕೆ ಸಂಜಯ್ ಜೈನ್ ಎಂಬವರು 10 ಲಕ್ಷ ರೂ. ಕಳೆದುಕೊಂಡಿದ್ದಾರೆ.
ನವದೆಹಲಿ (ಫೆ.05): ತಂತ್ರಜ್ಞಾನವು ಅಭಿವೃಧ್ಧಿಯಾಗುತ್ತಿದ್ದಂತೆ ಖದೀಮರು ಕೂಡಾ ಹಣ ಲಪಟಾಯಿಸಲು ಹೊಸ ಹೊಸ ವಿಧಾನವನ್ನು ಕಂಡು ಹಿಡಿಯುತ್ತಿದ್ದಾರೆ.
ದೆಹಲಿಯ ಉದ್ಯಮಿಯೊಬ್ಬರಿಗೆ ಸೈಬರ್ ಖದೀಮರು ವಂಚಿಸಿರುವ ರೀತಿ ಪೊಲೀಸರನ್ನು ಕೂಡಾ ನಿಬ್ಬೆರಗಾಗಿಸಿದೆ. ಡಿಜಿಟಲ್ ಕಳ್ಳರ ಕೈಚಳಕಕ್ಕೆ ಸಂಜಯ್ ಜೈನ್ ಎಂಬವರು 10 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಖದೀಮರ ಕಾರ್ಯವಿಧಾನ:
ಮೊದಲು ಶ್ರೀಮಂತ ಕುಳಗಳನ್ನು ಹುಡುಕಿ ಅವರಿಗೆ ಉಚಿತ ಕ್ರೆಡಿಟ್ ಕಾರ್ಡ್ ಕೊಡಿಸುತ್ತಾರೆ. ಬಳಿಕ ಬೇರೆ ಬೇರೆ ಆಫರ್’ಗಳನ್ನು ಕೊಡುವ ನೆಪದಿಂದ ಅನಗತ್ಯವಾಗಿ ಕಾಲ್ ಮಾಡಲಾರಂಭಿಸುತ್ತಾರೆ. ಎಷ್ಟರ ಮಟ್ಟಿಗೆಯೆಂದರೆ, ಅನಗತ್ಯ ಕರೆಗಳನ್ನು ಬ್ಲಾಕ್ ಮಾಡುವಂತೆ ಫೋನ್ ಬಳಕೆದಾರನಿಗೆ ಅನಿವಾರ್ಯತೆ ಸೃಷ್ಟಿಸುತ್ತಾರೆ. ಅದೇ ಸಂದರ್ಭದಲ್ಲಿ ಖದೀಮರ ಇನ್ನೊಂದು ತಂಡ, ತಮ್ಮನ್ನು ಮೊಬೈಲ್ ಕಂಪನಿಯ ಸೆಕ್ಯೂರಿಟಿ ಅಧಿಕಾರಿಗಳೆಂದು ಪರಿಚಯಿಸುತ್ತಾರೆ. ಅನಗತ್ಯ ಕರೆಗಳನ್ನು ತಡೆಯಲು ನಿಮ್ಮ ಫೋನ್’ನಲ್ಲಿ ಕಂಪನಿಯ ಸಾಫ್ಟ್’ವೇರೊಂದನ್ನು ರನ್ ಮಾಡಿಸುತ್ತಾರೆ. ಅದರ ಬಳಿಕ ಒಂದೆರಡು ದಿನಗಳ ಮಟ್ಟಿಗೆ ಮೊಬೈಲ್ ಕೆಲಸ ಮಾಡುವುದಿಲ್ಲ. ಆ ಅವಧಿಯಲ್ಲೇ ನಿಮ್ಮ ಕ್ರೆಡಿಟ್ ಕಾರ್ಡ್’ಗಳ ಮೂಲಕ ಲಕ್ಷಾಂತರ ರೂ.ಗಳ ವ್ಯವಹಾರ ನಡೆಸುತ್ತಾರೆ.
ಪೊಲೀಸರು ದೂರನ್ನು ದಾಖಲಿಸಿ ತನಿಖೆಯನ್ನು ನಡೆಸುತ್ತಿದ್ದಾರೆ, ವಂಚಕರು ಸಿಮ್ ಕಾರ್ಡನ್ನು ಕ್ಲೋನ್ (ನಕಲಿಸಿ) ಮಾಡಿ, ಪಾಸ್'ವರ್ಡ್ ಹಾಗೂ ಇತರ ಮಾಹಿತಿಯನ್ನು ಪಡೆದಿರುವ ಸಾಧ್ಯತೆಗಳಿವೆಯೆಂದು ಶಂಕೆ ವ್ಯಕ್ತಪಡಿಸಿದ್ದಾರೆ.