ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ರಾಜ್ಯ ಸರ್ಕಾರ

First Published Jun 18, 2018, 1:58 PM IST
Highlights

ಆಡಳಿತಕ್ಕೆ ಬರುವ ಮುನ್ನ ವಿವಿಧ ಭರವಸೆ ನೀಡಿದ್ದ ಸರ್ಕಾರ ಇದೀಗ ಸಾಲಮನ್ನಾ ಮಾಡದೇ ಅವರನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು :  ಆಡಳಿತಕ್ಕೆ ಬರುವ ಮುನ್ನ ವಿವಿಧ ಭರವಸೆ ನೀಡಿದ್ದ ಸರ್ಕಾರ ಇದೀಗ ಸಾಲಮನ್ನಾ ಮಾಡದೇ ಅವರನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಹಿಂದಿನ ಸರ್ಕಾರ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಿದ್ದು,  ಅದಕ್ಕೆ ಇನ್ನೂ ನಾಲ್ಕೈದು ಸಾವಿರ ಕೋಟಿ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ, ಭಿತ್ತನೆ ಪ್ರಕ್ರಿಯೆಯೂ ಕೂಡ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. 

ನೂತನ ಬಜೆಟ್ ಮಂಡನೆವರೆಗೂ ಕಾಯುತ್ತೇವೆ. ಎಲ್ಲವನ್ನೂ ನಾವೂ ಸೂಕ್ಷ್ಮವಾಗಿ ನೋಡುತ್ತಿದ್ದೇನೆ. ನಮಗೆ ಅಧಿಕಾರದ ಬೆನ್ನು ಬೀಳುವ ಯಾವುದೇ ಆಸೆ ಇಲ್ಲ. ಮುಂದಿನ ಹೋರಾಟದ ರೂಪುರೇಷೆ ಹೇಗಿರಬೇಕು ಎಂಬ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ  ಬಜೆಟ್ ಗೂ ಮೊದಲು ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗಳನ್ನು ಒಮ್ಮೆ ಓದಿ ನೋಡಲಿ ಎಂದಿದ್ದಾರೆ. 

ಮುಖ್ಯಮಂತ್ರಿ ರೈತರ ಸಾಲಮನ್ನಾ ಮಾಡಲು ಪ್ರಧಾನಿ ಬಳಿ ಶೇ. 50 ರಷ್ಟು ಹಣವನ್ನು ಕೇಳಿದ್ದಾರೆ.  ತಮ್ಮ ಜವಾಬ್ದಾರಿ ಕೇಂದ್ರದ ಮೇಲೆ ಹೇರಲು ಹೊರಟಿದ್ದಾರೆ.  ಈ ಮೂಲಕ ರಾಜ್ಯ ಸರ್ಕಾರ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದೆ. ರೈತ ಸಂಘದ ಮುಖಂಡರ ಸಭೆ ವೇಳೆ ಹದಿನೈದು ದಿನಗಳೊಳಗೆ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಇದುವರೆಗೂ ಕೂಡ ಅಂತಹ ಯಾವುದೇ ಕೆಲಸ ಆಗಿಲ್ಲ ಎಂದು ವಿಧಾನ ಸೌಧದಲ್ಲಿ ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಹೇಳಿದರು. 

ಇನ್ನು ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡು ತಿಂಗಳು ಕಳೆದಿದೆ. ಸಿಎಂ ಪ್ರಣಾಳಿಕೆಯಲ್ಲಿ ಅನೇಕ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ.  ಈಗ ತಂದೆ ಮಗ ಇಬ್ಬರೂ ರೈತರ ಸಾಲಮನ್ನಾ ವಿಚಾರವಾಗಿ ಒಂದೊಂದು ಮಾತನಾಡುತ್ತಿದ್ದಾರೆ.  ಇದು ಸಮ್ಮಿಶ್ರ ಸರ್ಕಾರ, ಕಾಂಗ್ರೆಸ್ ಪಕ್ಷವನ್ನ ಕೇಳಬೇಕು ಎನ್ನುತ್ತಿದ್ದಾರೆ. 

ಒಂದು ಕಡೆ ಸಿದ್ದರಾಮಯ್ಯ ಹೊಸ ಬಜೆಟ್ ಮಂಡನೆ ಅಗತ್ಯವಿಲ್ಲ ಎಂದರೆ ಇನ್ನೊಂದು ಕಡೆ  ಅವರದ್ದೇ ಪಕ್ಷದ ಕೆಲ ನಾಯಕರು ಹೊಸ ಬಜೆಟ್ ಅಗತ್ಯವಿದೆ ಎನ್ನುತ್ತಿದ್ದಾರೆ.  ಸಮ್ಮಿಶ್ರ ಸರ್ಕಾರ ಈಗ ಗೊಂದಲದ ಗೂಡಾಗಿದೆ ಎಂದು ಸರ್ಕಾರದ ವಿರುದ್ಧ ಬಿಎಸ್ ವೈ ವಾಗ್ದಾಳಿ ನಡೆಸಿದ್ದಾರೆ. 

click me!