ನುಂಗಲು ಬಂದ ಹೆಬ್ಬಾವನ್ನೇ ಸೋಲಿಸಿ ಮಣ್ಣು ಮುಕ್ಕಿಸಿದ ಬಾಲಕ ವೈಶಾಖ್

By Internet DeskFirst Published Oct 6, 2016, 3:20 AM IST
Highlights
ಮಂಗಳೂರು(ಅ.06): ಈ ಬಾಲಕನ ಧೈರ್ಯಕ್ಕೆ ಯಾರಾದರೂ ತಲೆದೂಗಲೇಬೇಕು. ಯಮನಂತೆ ಬಂದು ತನ್ನನ್ನೇ ನುಂಗಿದ ಹೆಬ್ಬಾವಿನ ಜೊತೆ ಹೋರಾಡಿ ಬಾಲಕನೊಬ್ಬ ಬದುಕುಳಿದಿದ್ದಾನೆ. 

ದಕ್ಷಿಣ ಕನ್ನಡ ಜಿಲ್ಲೆಯ ಸಜಿಪ ಗ್ರಾಮದ ಪೋರ ವೈಶಾಖನ ಯಶೋಗಾಥೆ ಈಗ ಕರಾವಳಿಯಲ್ಲಿ ಮನೆ ಮಾತಾಗಿದೆ. ಶಾಲೆಯಿಂದ ಹಿಂತಿರುಗಿದ ನಂತರ ಪಕ್ಕದ ಮನೆಗೆ ಹೋಗಿದ್ದಾಗ ಹಠಾತ್ತಾಗಿ ಹೆಬ್ಬಾವು ದಾಳಿ ನಡೆಸಿತ್ತು. ದೇಹವನ್ನು ನುಂಗಲು ದಾಳಿ ನಡೆಸಿದಾಗಲೇ ಬಾಲಕ ಸೂಕ್ಷ್ಮಪ್ರಜ್ಞೆ ಮೆರೆದಿದ್ದಾನೆ.

ತಲೆಯನ್ನು ತಿನ್ನಲು ಹೆಬ್ಬಾವು ಹೊಂಚು ಹಾಕಿದ ಸಂದರ್ಭದಲ್ಲೇ ಅಲ್ಲೇ ಇದ್ದ ಟೈಲ್ಸ್​ ತುಂಡನ್ನು ಹೆಬ್ಬಾವಿನ ತಲೆ ಮತ್ತು ಕಣ್ಣಿಗೆ ಚುಚ್ಚಿದ್ದಾನೆ. ಪಟ್ಟನ್ನು ಸಡಿಲಿಸದ ಹೆಬ್ಬಾವಿಗೆ ಪದೇ ಪದೇ ಚುಚ್ಚಿದ ಕಾರಣ ಅದು ಕೊನೆಗೂ ಶರಣಾಗಿದೆ. ಹಾವಿನ ಹಿಡಿತ ತಪ್ಪುತ್ತಿದ್ದಂತೆಯೇ ವೈಶಾಖ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ.

ಇದೀಗ ಈ ಪೋರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

 

click me!