ನೆಹರು, ಖುಷ್ವಂತ್ ಸಿಂಗ್ ಮೆಚ್ಚಿದ್ದ ಕನ್ನಡಿಗನ ಪುಸ್ತಕ ಮಳಿಗೆ ಬಂದ್ !

By Suvarna Web DeskFirst Published Mar 1, 2018, 8:33 AM IST
Highlights

ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ, ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ಖ್ಯಾತ ಪತ್ರಕರ್ತ ಖುಷ್ವಂತ್ ಸಿಂಗ್ ಸೇರಿದಂತೆ ಇತರ ಗಣ್ಯರು ತಮ್ಮ ನೆಚ್ಚಿನ ಪುಸ್ತಕಗಳ ಖರೀದಿಗಾಗಿ ಭೇಟಿ ನೀಡುತ್ತಿದ್ದ, 70 ವರ್ಷಗಳ ಹಿಂದೆ ಕನ್ನಡಿಗ ಇಲ್ಲಿ ಸ್ಥಾಪನೆ ಮಾಡಿದ್ದ ಪ್ರಸಿದ್ಧ ಪುಸ್ತಕ ಮಳಿಗೆಯ ಸೇವೆ ಬುಧವಾರಕ್ಕೆ  ಅಂತ್ಯಗೊಂಡಿದೆ.

ಮುಂಬೈ (ಮಾ. 01): ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ, ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ಖ್ಯಾತ ಪತ್ರಕರ್ತ ಖುಷ್ವಂತ್ ಸಿಂಗ್ ಸೇರಿದಂತೆ ಇತರ ಗಣ್ಯರು ತಮ್ಮ ನೆಚ್ಚಿನ ಪುಸ್ತಕಗಳ ಖರೀದಿಗಾಗಿ ಭೇಟಿ ನೀಡುತ್ತಿದ್ದ, 70 ವರ್ಷಗಳ ಹಿಂದೆ ಕನ್ನಡಿಗ ಇಲ್ಲಿ ಸ್ಥಾಪನೆ ಮಾಡಿದ್ದ ಪ್ರಸಿದ್ಧ ಪುಸ್ತಕ ಮಳಿಗೆಯ ಸೇವೆ ಬುಧವಾರಕ್ಕೆ  ಅಂತ್ಯಗೊಂಡಿದೆ.

ಕರ್ನಾಟಕದ ಮಂಗಳೂರು ಮೂಲದ ತೆಕ್ಕಟ್ಟೆ ನಾರಾಯಣ ಶಾನುಭೋಗ್ ಅವರು 1948 ರಲ್ಲಿ ಮೊದಲಿಗೆ ಮುಂಬೈನ  ಕೊಲಾಬಾದಲ್ಲಿ ಸ್ಟ್ರಾಂಡ್ ಸಿನಿಮಾ ಹಾಲ್ ಬಳಿ ಸಣ್ಣ ಕಿಯೋಸ್ಕ್ ಸ್ಥಾಪಿಸಿದ್ದರು. ಬಳಿಕ ಇದು
ದಕ್ಷಿಣ ಮುಂಬೈಗೆ ಸ್ಥಳಾಂತರವಾಯಿತು. ಕೊನೆಗೆ ಸ್ಟ್ರಾಂಡ್ ಬುಕ್ ಪುಸ್ತಕ ಮಳಿಗೆಯಾಗಿ ಕಾರ್ಯ ನಿರ್ವಹಿಸಲು ಶುರು ಮಾಡಿತು. ಆದರೆ, ಇದರ ಸಂಸ್ಥಾಪಕ ಟಿ.ಎನ್. ಶಾನುಭೋಗ್ ಅವರ 9 ನೇ ಪುಣ್ಯತಿಥಿ
ಸಂದರ್ಭದಲ್ಲೇ ಪುಸ್ತಕ ಮಳಿಗೆಯನ್ನು ಮುಚ್ಚಲಾಗಿದೆ. ಮುಂಬೈನಷ್ಟೇ ಅಲ್ಲದೆ, ದೇಶದ ಇತರ ನಗರಗಳಲ್ಲಿಯೂ ಸ್ಟ್ರಾಂಡ್ ಪುಸ್ತಕ ಮಳಿಗೆಯ 5 ಶಾಖೆ ತೆರೆಯಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಓದುಗರ
ಅಭಿರುಚಿ ಬದಲಾಗುತ್ತಿದೆ. ಹಾಗಾಗಿ, ಪುಸ್ತಕ ಮಳಿಗೆ ನಿರ್ವಹಣೆಗೆ ಸಬ್ಸಿಡಿ ಮತ್ತು ಹೆಚ್ಚು ಹಣ ವ್ಯಯ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಖೆಗಳನ್ನು ಮುಚ್ಚಲಾಗಿದೆ ಎಂದು
ಪದ್ಮಶ್ರೀ ಪುರಸ್ಕೃತ ಟಿ.ಎನ್.ಶಾನುಭೋಗ್ ರ ಪುತ್ರಿ ವಿದ್ಯಾ ವೀರ್ಕರ್ ತಿಳಿಸಿದ್ದಾರೆ.

ಸ್ಟ್ರಾಂಡ್ ಬುಕ್ ಸ್ಟಾಲ್ ಪುಸ್ತಕ ಪ್ರಿಯರ ನೆಚ್ಚಿನ ತಾಣವಾಗಿತ್ತು. 2009 ರಲ್ಲಿ  ಶಾನುಭೋಗ್‌ರ ನಿಧನದ ಬಳಿಕ ಮತ್ತು ಇ- ಪುಸ್ತಕ, ಆನ್‌ಲೈನ್ ಪುಸ್ತಕ ಮಾರಾಟ ಮಳಿಗೆಗಳ ಭರಾಟೆಯಿಂದಾಗಿ ನಂತರದ ದಿನಗಳಲ್ಲಿ ಪುಸ್ತಕ ಮಳಿಗೆ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತ್ತು. 

click me!