
ಮುಂಬೈ (ಮಾ. 01): ಅಗಲಿದ ಪತ್ನಿಯನ್ನು ನೆನೆಸಿಕೊಂಡು ಪತಿ ಬೋನಿ ಕಪೂರ್ ವಿದಾಯ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ತಮ್ಮ ಪತ್ನಿಯನ್ನು ನೆನೆಸಿಕೊಂಡಿದ್ದು ಹೀಗೆ
ಕಪೂರ್ ವಿದಾಯದ ಪತ್ರ
ಆತ್ಮೀಯ ಗೆಳತಿ, ಪ್ರೀತಿಯ ಪತ್ನಿ, ಎರಡು ಮಕ್ಕಳ ತಾಯಿಯನ್ನು ಕಳೆದುಕೊಳ್ಳುವುದಿದೆಯಲ್ಲ, ಆ ನಷ್ಟವನ್ನು ಪದಗಳಲ್ಲಿ ಹೇಳುವುದು ಅಸಾಧ್ಯ. ಇಂಥ ಸಮಯದಲ್ಲಿ ನನ್ನ ಜೊತೆಗೆ ಕಲ್ಲಿನಂತೆ ನಿಂತ ನನ್ನ ಕುಟುಂಬ, ಗೆಳೆಯರು, ಹಿತೈಷಿಗಳು, ನನ್ನ ಶ್ರೀದೆವಿಯ ಅಪರಿಮಿತ ಅಭಿಮಾನಿಗಳಿಗೆ ನನ್ನ ಕೃತಜ್ಞತೆಗಳನ್ನು ಹೇಳಲೇಬೇಕು. ಇಂಥ ಸಂಕಷ್ಟದ ಸಮಯದಲ್ಲಿ ನನಗೆ, ಖುಷಿ ಹಾಗೂ ಜಾಹ್ನವಿಗೆ ಶಕ್ತಿಯಾಗಿ ನಿಂತಿದ್ದು ಅರ್ಜುನ್ ಹಾಗೂ ಅಂಶುಲಾ. ನಾವೆಲ್ಲಾ ಸೇರಿ ಒಂದು ಕುಟುಂಬವಾಗಿ ನಿಂತು ಈ ಸಂದರ್ಭವನ್ನು ಎದುರಿಸಲು ಪ್ರಯತ್ನಿಸಿದ್ದೇವೆ.
ಇಡೀ ಜಗತ್ತಿಗೆ ಶ್ರೀದೇವಿ ಚಾಂದಿನಿಯಾಗಿರಬಹುದು. ಒಬ್ಬ ಕಲಾವಿದೆಯಾಗಿ ಆಕೆ ಶ್ರೀದೇವಿಯೇ. ಆದರೆ ನನಗೆ ನನ್ನ ಪ್ರೀತಿ, ನನ್ನ ಗೆಳತಿ, ನನ್ನ ಮಕ್ಕಳ ತಾಯಿ, ನನ್ನ ಸಂಗಾತಿ. ನನ್ನ ಮಕ್ಕಳಿಗೆ ಅವರ ಬದುಕಿನಲ್ಲಿ ಶ್ರೀದೇವಿಯೇ ಎಲ್ಲವೂ ಆಗಿದ್ದಳು. ಆಕೆಯ ಸುತ್ತಲೇ ನಮ್ಮ ಕುಟುಂಬ ನಡೆಯುತ್ತಿತ್ತು. ಇದೀಗ ನನ್ನ ಪ್ರೀತಿಯ ಪತ್ನಿ, ಖುಷಿ ಹಾಗೂ ಜಾಹ್ನವಿಯ ತಾಯಿಗೆ ವಿದಾಯ ಹೇಳಿದ್ದೇವೆ. ದಯವಿಟ್ಟು ನಮ್ಮ ಖಾಸಗಿತನ ಗೌರವಿಸಿ. ನೀವು ಶ್ರೀ ಬಗ್ಗೆ ಮಾತನಾಡಬಯಸಿದ್ರೆ ನಿಮ್ಮೊಂದಿಗಿನ ವಿಶೇಷ ಘಟನೆಗಳನ್ನು ನೆನಪಿಸಿಕೊಳ್ಳಿ. ಒಬ್ಬ ನಟಿಯಾಗಿ ಆಕೆಯ ಸ್ಥಳವನ್ನು ಮತ್ಯಾರೂ ತುಂಬಲಾರರು. ಈ ಕಾರಣಕ್ಕಾಗಿ ಆಕೆಯ ಬಗ್ಗೆ ಪ್ರೀತಿ ಹಾಗೂ ಗೌರವವಿದೆ. ಆದರೆ ಕಲಾವಿದರ ಜೀವನದಲ್ಲಿ ಎಂದೂ ತೆರೆ ಸರಿಯುವುದಿಲ್ಲ ಏಕೆಂದರೆ ರಜತ ಪರದೆಯ ಮೇಲೆ ಅವರು ಸದಾ ಜೀವಂತ
ಈ ಸಂದರ್ಭದಲ್ಲಿ ನನ್ನ ಹೆಣ್ಣುಮಕ್ಕಳನ್ನು ಕಾಪಾಡಿಕೊಳ್ಳುವುದು ಹಾಗೂ ಶ್ರೀ ಇಲ್ಲದೆ ಮುಂದಕ್ಕೆ ಸಾಗುವ ದಾರಿಯನ್ನು ಕಂಡುಕೊಳ್ಳುವುದೇ ನನ್ನ ಕಾಳಜಿ. ಆಕೆ ನಮ್ಮ ಪ್ರಾಣ, ನಮ್ಮ ಶಕ್ತಿ, ನಮ್ಮ ನಗುವಿಗೆ ಮೂಲ ಕಾರಣವಾಗಿದ್ದಳು. ಆಕೆಯನ್ನು ಅಪರಿಮಿತವಾಗಿ ನಾವು ಪ್ರೀತಿಸುತ್ತೇವೆ.
ಓ ನನ್ನ ಪ್ರಾಣವೇ... ನಿನ್ನ ಆತ್ಮಕ್ಕೆ ಶಾಂತಿ ದೊರಕಲಿ... ನಮ್ಮ ಜೀವನ ಮುಂದೆಂದೂ ಹಿಂದಿನ ರೀತಿ ಆಗಲು ಸಾಧ್ಯವಿಲ್ಲ
ಇಂತಿ ನಿಮ್ಮವ
ಬೋನಿ ಕಪೂರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.