2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಖಚಿತ

First Published May 27, 2018, 11:15 AM IST
Highlights

2019 ರ ಲೋಕಸಭೆ ಚುನಾವಣೆ ‘ಮೋದಿ ವರ್ಸಸ್ ಮೋದಿ ಹಟಾವೋ ಬ್ರಿಗೇಡ್’ ಚುನಾವಣೆಯಾಗಲಿದೆ ಎಂದು ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆ ಚುನಾವಣೆ ಯಲ್ಲಿ ಬಿಜೆಪಿ ಗೆಲ್ಲುವುದು ಸವಾಲಿನ ಕೆಲಸವೇ ಅಲ್ಲ, ಅದು ನಿಶ್ಚಿತ ಎಂದು ಹೇಳಿದ್ದಾರೆ. 

ನವದೆಹಲಿ: 2019 ರ ಲೋಕಸಭೆ ಚುನಾವಣೆ ‘ಮೋದಿ ವರ್ಸಸ್ ಮೋದಿ ಹಟಾವೋ ಬ್ರಿಗೇಡ್’ ಚುನಾವಣೆಯಾಗಲಿದೆ ಎಂದು ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆ ಚುನಾವಣೆ ಯಲ್ಲಿ ಬಿಜೆಪಿ ಗೆಲ್ಲುವುದು ಸವಾಲಿನ ಕೆಲಸವೇ ಅಲ್ಲ, ಅದು ನಿಶ್ಚಿತ ಎಂದು ಹೇಳಿದ್ದಾರೆ. 

ಕೇಂದ್ರ ಸರ್ಕಾರಕ್ಕೆ 4 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅಮಿತ್ ಶಾ, ವಿರೋಧ ಪಕ್ಷದವರ ಬಳಿ ಕೇವಲ ಒಂದು ಅಜೆಂಡಾ ಇದೆ. ಅದು ಮೋದಿಯವರನ್ನು ಕೆಳಗಿಳಿಸುವುದು. 2019 ರ ಚುನಾವಣೆವರೆಗೂ ಅವರು ಇದೇ ಪ್ರಯತ್ನ ಮಾಡುತ್ತಾರೆ. 

ವಿರೋಧ ಪಕ್ಷಗಳು ಎಷ್ಟೇ ಒಗ್ಗಟ್ಟಾದರೂ ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಬಂಡೆಗಲ್ಲಿನಂತೆ ನಿಂತಿದ್ದಾರೆ.  ಟುಂಬ ರಾಜಕಾರಣ, ಜಾತೀಯತೆ ಹಾಗೂ ಓಲೈಕೆ ರಾಜಕಾರಣ ಮಾಡುತ್ತಿರುವವರ ವಿರುದ್ಧ ನರೇಂದ್ರ ಮೋದಿಯವರ ‘ಕೆಲಸ ಮಾಡುವ ರಾಜಕಾರಣ’ ಗೆಲ್ಲುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟರು. 

ರಾಹುಲ್ ಗಾಂಧಿ ತಮ್ಮನ್ನು ತಾವೇ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಂಡಿರಬಹುದು. ಆದರೆ, ಅವರಿಗೆ ಇತರ ಪಕ್ಷಗಳ ನಾಯಕರಿಂದ ಬೆಂಬಲ ಸಿಗುವುದು ಹಾಗಿರಲಿ, ಅವರದೇ ಪಕ್ಷದ ನಾಯಕರಿಂದಲೂ ಬೆಂಬಲ ಸಿಕ್ಕಿಲ್ಲ. ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಕಾಂಗ್ರೆಸಿಗರ ಜೊತೆ ನಾವು ಅಂಕಿಅಂಶಗಳು ಹಾಗೂ ಸಾಧನೆಗಳ ಪಟ್ಟಿಯನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದೂ ಸವಾಲು ಹಾಕಿದ್ದಾರೆ.

ಪ್ರಧಾನಿ ಮೋದಿ ಅವರು ಅತ್ಯಂತ ಜನಪ್ರಿಯ ಹಾಗೂ ಅತಿಹೆಚ್ಚು ಕೆಲಸ ಮಾಡುವ ಪ್ರಧಾನಿಯಾಗಿದ್ದಾರೆ. ಅವರಲ್ಲಿ ಅನಂತ ಶಕ್ತಿಯಿದೆ. ಯುಪಿಎ ಸರ್ಕಾರದ ದುರಾಡಳಿತವನ್ನು ಕೊನೆಗೊಳಿಸಿ ಬಡವರ ಪರ ಕೆಲಸ ಮಾಡುವ, ಆರ್ಥಿಕತೆಯನ್ನು ಮೇಲೆತ್ತುವ ಹಾಗೂ ದೇಶದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪರಿಣಾಮಕಾರಿ ಆಡಳಿತವನ್ನು ಅವರು ನೀಡಿದ್ದಾರೆ ಎಂದು ಹೇಳಿದರು.
 
ಕರ್ನಾಟಕ ಚುನಾವಣೆ ಪ್ರಸ್ತಾಪ: ಕೇಂದ್ರ ಸರ್ಕಾರದ ಸಾಧನೆಯ ಬಗ್ಗೆ ಮಾತನಾಡುವಾಗ ಅಮಿತ್ ಶಾ ಎರಡು ಬಾರಿ ಕರ್ನಾಟಕದ ವಿಷಯ ಪ್ರಸ್ತಾಪ ಮಾಡಿದರು. ‘ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆದ್ದಿದೆ. ಇದು ದಕ್ಷಿಣ ಭಾರತದಲ್ಲಿ ಬಿಜೆಪಿಯ ವಿಸ್ತರಣೆಗೆ ಒಳ್ಳೆಯ ಶಕುನ’ ಎಂದು ಹೇಳಿದರು.

‘ರಾಹುಲ್ ಗಾಂಧಿ ಕರ್ನಾಟಕದ ಚುನಾವಣಾ ಪ್ರಚಾರದ ವೇಳೆ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಅಗತ್ಯ ಸಂಖ್ಯೆಯ ಸೀಟುಗಳು ದೊರೆತರೆ ತಾವು ಪ್ರಧಾನಿಯಾಗಬಹುದು ಎಂದು ಹೇಳಿದ್ದಾರೆ. ಆದರೆ, ಯಾವೊಬ್ಬ ಕಾಂಗ್ರೆಸ್ ನಾಯಕನೂ ಆ ಹೇಳಿಕೆಯನ್ನು ಇಲ್ಲಿಯವರೆಗೆ ಬೆಂಬಲಿಸಿ ಮಾತನಾಡಿಲಿಲ್ಲ. ಶರದ್ ಪವಾರ್, ಮಮತಾ ಬ್ಯಾನರ್ಜಿ ಅಥವಾ ಅಖಿಲೇಶ್ ಯಾದವ್‌ರಂತಹ ನಾಯಕರೂ ಅವರನ್ನು ಬೆಂಬಲಿಸಿಲ್ಲ’ ಎಂದು ಕಾಲೆಳೆದರು.

click me!