ರಾಜ್ಯ ಬಿಜೆಪಿಗೆ ಮತ್ತೊಂದು ಶಾಕ್?

By Web DeskFirst Published Sep 12, 2018, 10:13 AM IST
Highlights

ಗೆಲ್ಲುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಇದೀಗ ನಿರಾಸೆ ಮೂಡಿದೆ. ವಿಧಾನಪರಿಷತ್‌ನ ಖಾಲಿ ಸ್ಥಾನಗಳಿಗೆ ಉಪಚುನಾವಣೆ ನಿಗದಿಯಾಗಿದ್ದು, 3 ಸ್ಥಾನಗಳು ಆಡಳಿತಾರೂಢ ಮೈತ್ರಿಗಳ ಪಕ್ಷದ ಪಾಲಾಗುವ ಸಾಧ್ಯತೆ ಗೋಚರಿಸಿದೆ. ಈ ನಿಟ್ಟಿನಲ್ಲಿ ಹಾಲಿ ಇರುವ ನಿಯಮದ ಬಗ್ಗೆ ಚುನಾವಣಾಧಿಕಾರಿಗಳಿಗೆ ವಿಪಕ್ಷ ಬಿಜೆಪಿ ದೂರು ನೀಡಲು ಮುಂದಾಗಿದೆ.

ಬೆಂಗಳೂರು :  ವಿಧಾನಪರಿಷತ್‌ನ ಖಾಲಿ ಸ್ಥಾನಗಳಿಗೆ ಉಪಚುನಾವಣೆ ನಿಗದಿಯಾದ ಬೆನ್ನಲ್ಲೇ ಎಲ್ಲಾ ಮೂರು ಸ್ಥಾನಗಳು ಆಡಳಿತಾರೂಢ ಮೈತ್ರಿಗಳ ಪಕ್ಷದ ಪಾಲಾಗುವ ಸಾಧ್ಯತೆ ಗೋಚರಿಸಿದ್ದು, ಹಾಲಿ ಇರುವ ನಿಯಮದ ಬಗ್ಗೆ ಚುನಾವಣಾಧಿಕಾರಿಗಳಿಗೆ ವಿಪಕ್ಷ ಬಿಜೆಪಿ ದೂರು ನೀಡಲು ಮುಂದಾಗಿದೆ.

ಒಮ್ಮೆಗೆ ಮೂರು ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಿಸಿದ ಆಯೋಗವು, ಒಂದೇ ದಿನ ಚುನಾವಣೆ ನಡೆಸಲಿದೆ. ಇದರಿಂದ ಸಹಜವಾಗಿ ಅಗತ್ಯ ಶಾಸಕರ ಬಲ ಹೊಂದಿರುವ ಮೈತ್ರಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ತನ್ನ ಶಾಸಕರ ಬಲದಿಂದ ಒಂದು ಸ್ಥಾನವನ್ನಾದರೂ ಗೆಲ್ಲುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಮೂರು ಅಭ್ಯರ್ಥಿಗಳಿಗೂ ಪ್ರತ್ಯೇಕವಾಗಿ ಮತದಾನದ ಬದಲಿಗೆ ಒಬ್ಬ ಶಾಸಕ, ಒಬ್ಬರಿಗೆ ಮಾತ್ರ ಮತಹಕ್ಕು ಚಲಾವಣೆಗೆ ಅವಕಾಶ ಕೊಡಬೇಕು. ಆಗ ಮೂರು ಸ್ಥಾನಗಳು ಮೈತ್ರಿ ಪಕ್ಷದ ಪಾಲಾಗುವುದಿಲ್ಲ. ಆದರೆ ಈ ನಿಯಮ ಬದಲಾವಣೆ ಅಷ್ಟುಸುಲಭವಾಗಿಲ್ಲ ಎಂದು ಮೂಲಗಳು ಹೇಳಿವೆ.

ವಿಧಾನಸಭೆಯಿಂದ ವಿಧಾನಪರಿಷತ್‌ ಆಯ್ಕೆಗೆ ಈ ಚುನಾವಣೆ ನಡೆಯುತ್ತಿದೆ. ಈ ತಾಂತ್ರಿಕ ‘ಸಮಸ್ಯೆ’ ನಿವಾರಣೆಗೆ ಕೋರಿ ಚುನಾವಣೆ ಅಧಿಕಾರಿಗಳಿಗೆ ಬಿಜೆಪಿ ಕೋರಿಕೆ ಸಲ್ಲಿಸಲಿದೆ. ಇತ್ತ ತನ್ನ ಬುಟ್ಟಿಗೆ ಸುಲಭವಾಗಿ ಪರಿಷತ್‌ ಸದಸ್ಯ ಸ್ಥಾನಗಳು ಬಿದ್ದಿದ್ದರೂ ಈಗಿನ ರಾಜಕೀಯ ಮೇಲಾಟದಲ್ಲಿ ಹುರಿಯಾಳುಗಳ ಒಮ್ಮತದ ಆಯ್ಕೆಯೂ ಮಿತ್ರ ಪಕ್ಷಗಳಿಗೆ ಸವಾಲು ಉಂಟುಮಾಡಬಹುದು.

ಸದ್ಯ ಕಾಂಗ್ರೆಸ್‌ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಜೊತೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ಬರಬೇಕಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಬಂದ ನಂತರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಈ ಬಗ್ಗೆ ಮೂರೂ ಪಕ್ಷಗಳಲ್ಲಿ ಇನ್ನು ಮೇಲಷ್ಟೇ ಚರ್ಚೆ ನಡೆಯಬೇಕಿದೆ.

click me!