ಮಹಾಮೈತ್ರಿಕೂಟದಿಂದ ಹೊರಬಂದರೆ ನಾವು ನಿಮ್ಮ ಬೆನ್ನಿಗೆ ನಿಲ್ತೀವಿ; ನಿತೀಶ್'ಗೆ ಬಿಜೆಪಿ ಅಭಯ

Published : Jul 10, 2017, 08:57 PM ISTUpdated : Apr 11, 2018, 12:47 PM IST
ಮಹಾಮೈತ್ರಿಕೂಟದಿಂದ ಹೊರಬಂದರೆ ನಾವು ನಿಮ್ಮ ಬೆನ್ನಿಗೆ ನಿಲ್ತೀವಿ; ನಿತೀಶ್'ಗೆ ಬಿಜೆಪಿ ಅಭಯ

ಸಾರಾಂಶ

ಇದೇ ಶುಕ್ರವಾರದಂದು ಲಾಲೂ ಪ್ರಸಾದ್ ಯಾದವ್ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿತ್ತು. ಈ ವಿಚಾರದಲ್ಲಿ ಜೆಡಿಯು ಪಕ್ಷ ಮೌನ ವಹಿಸಿದ್ದು ಆರ್'ಜೆಡಿ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಕೇಂದ್ರ ಸರಕಾರದೊಂದಿಗೆ ನಿತೀಶ್ ಕುಮಾರ್ ಶಾಮೀಲಾಗಿ ತಮ್ಮ ವಿರುದ್ಧ ಪಿತೂರಿ ಮಾಡಿರಬಹುದೆಂಬುದು ಲಾಲೂ ಶಂಕೆ.

ಪಾಟ್ನಾ(ಜುಲೈ 10): ಸಿಎಂ ನಿತೀಶ್ ಕುಮಾರ್ ಮತ್ತು ಮಾಜಿ ಸಿಎಂ ಲಾಲೂ ಮಧ್ಯೆ ವಿರಸ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಹಾರದ ಮಹಾಘಟಬಂಧನದಲ್ಲಿ ಬಿರುಕು ದೊಡ್ಡದಾಗುತ್ತಿದೆ. ಮೈತ್ರಿಕೂಟವು ಯಾವಾಗ ಬೇಕಾದರೂ ಮುರಿದುಬಿದ್ದು ಸರಕಾರ ಪತನವಾಗುವ ಸಾಧ್ಯತೆ ಇದೆ. ನಿತೀಶ್ ಕುಮಾರ್'ಗೆ ನೀಡಿದ್ದ ಬೆಂಬಲವನ್ನು ಆರ್'ಜೆಡಿ ಹಿಂಪಡೆಯುವ ಸಂಭವವೂ ಇದೆ. ಈ ಹಿನ್ನೆಲೆಯಲ್ಲಿ ಬಿಹಾರದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿಯು ಮುಖ್ಯಮಂತ್ರಿಯ ನೆರವಿಗೆ ಮುಂದಾಗುವುದಾಗಿ ಹೇಳಿದೆ. ಜೆಡಿಯು ಪಕ್ಷವು ಮೈತ್ರಿಕೂಟದಿಂದ ಹೊರಬಂದರೆ ಅದಕ್ಕೆ ಬಿಜೆಪಿ ಹೊರಗಿನ ಬೆಂಬಲ ನೀಡುತ್ತದೆ ಎಂದು ಬಿಜೆಪಿ ಮುಖಂಡ ನಿತ್ಯಾನಂದ್ ರಾಯ್ ಹೇಳಿದ್ದಾರೆ.

ಇದೇ ಶುಕ್ರವಾರದಂದು ಲಾಲೂ ಪ್ರಸಾದ್ ಯಾದವ್ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿತ್ತು. ಈ ವಿಚಾರದಲ್ಲಿ ಜೆಡಿಯು ಪಕ್ಷ ಮೌನ ವಹಿಸಿದ್ದು ಆರ್'ಜೆಡಿ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಕೇಂದ್ರ ಸರಕಾರದೊಂದಿಗೆ ನಿತೀಶ್ ಕುಮಾರ್ ಶಾಮೀಲಾಗಿ ತಮ್ಮ ವಿರುದ್ಧ ಪಿತೂರಿ ಮಾಡಿರಬಹುದೆಂಬುದು ಲಾಲೂ ಶಂಕೆ. ಲಾಲೂ ಪುತ್ರ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಸಿಬಿಐ ಭ್ರಷ್ಟಾಚಾರದ ಆರೋಪ ಮಾಡಿದೆ. ತೇಜಸ್ವಿ ಯಾದವ್ ತಲೆದಂಡಕ್ಕೆ ಬಿಹಾರದಾದ್ಯಂತ ಒತ್ತಾಯ ಕೇಳಿಬರುತ್ತಿದೆ. ಆದರೆ, ಆರ್'ಜೆಡಿ ಪಕ್ಷವು ತೇಜಸ್ವಿಯವರನ್ನು ಕೆಳಗಿಳಿಸಲು ಸುತಾರಾಂ ಒಪ್ಪುತ್ತಿಲ್ಲ. ಇಂದು ಲಾಲೂ ಯಾದವ್ ಅವರು ತಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ನಾಳೆ, ಮಂಗಳವಾರದಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಭ್ರಷ್ಟಾಚಾರ ಪ್ರಕರಣ ಮತ್ತು ಸಿಬಿಐ ದಾಳಿ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ, ನಿತೀಶ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು. ಇದರೊಂದಿಗೆ ಸರಕಾರ ಪತನವಾಗುವ ಸಾಧ್ಯತೆ ಇದೆ.

ಇನ್ನು, ನಿತೀಶ್ ಮತ್ತು ಬಿಜೆಪಿ ನಡುವಿನ ಮಿತ್ರತ್ವ ಇಂದು ನಿನ್ನೆಯದಲ್ಲ. ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗುವ ಮುಂಚೆ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ ಅಧಿಕಾರ ರಚಿಸಿತ್ತು. ಮೋದಿ ಬಗೆಗಿನ ವಿರೋಧದಿಂದಾಗಿ ನಿತೀಶ್ ಅವರು ಬಿಜೆಪಿಯ ಸಖ್ಯವನ್ನೇ ಮುರಿದುಕೊಂಡಿದ್ದರು. ಆ ಬಳಿಕವಷ್ಟೇ ಅವರು ಬಿಹಾರ ಚುನಾವಣೆ ಬಳಿಕ ಆರ್'ಜೆಡಿ, ಕಾಂಗ್ರೆಸ್ ಪಕ್ಷಗಳೊಂದಿಗೆ ಕೈಜೋಡಿಸಿ ಮಹಾಮೈತ್ರಿಕೂಟ ರಚಿಸಿ ಸಿಎಂ ಆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ; ತಿರುಪತಿ ಪ್ರಯಾಣ ರದ್ದು, ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್ ಕುಟುಂಬ ತಕ್ಷಣ ವಾಪಸ್!
ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?