‘ಸರ್ಕಾರ ರಚನೆಗೆ ಸಿದ್ಧವಾದ ಬಿಜೆಪಿ’

By Web DeskFirst Published Jul 22, 2019, 7:54 AM IST
Highlights

ರಾಜ್ಯದಲ್ಲಿ ಪ್ರಹಸನ ಮುಂದುವರಿದಿದೆ. ಮೈತ್ರಿ ಪಾಳಯ ವಿಶ್ವಾಸ ಮತ ಯಾಚನೆಗೆ ಮುಂದಾದರೂ ಕೂಡ ದಿನಗಳು ಮುಂದೆ ಹೋಗುತ್ತಲೇ ಇವೆ. ಆದರೆ ಇತ್ತ ಬಿಜೆಪಿ ಪಾಳಯ ಸರ್ಕಾರ ರಚನೆಗೆ ಸಿದ್ಧವಾಗಿದೆ. 

ಬೆಂಗಳೂರು [ಜು.22]: ಮೈತ್ರಿ ಸರ್ಕಾರದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಉದ್ಭವಿಸುತ್ತಲೇ ಇವೆ. ಉಭಯ ಪಕ್ಷದ ಶಾಸಕರು ತಮ್ಮ ಸರ್ಕಾರ ಹಾಗೂ ನಾಯಕರಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸರ್ಕಾರ ಜನರ ಪಾಲಿಗೆ ಇದ್ದರೂ, ಇಲ್ಲದಿದ್ದರೂ ಒಂದೇ ಆಗಿದೆ. ಪ್ರಸ್ತುತ ರಾಜ್ಯ ರಾಜಕಾರಣದ ಗೊಂದಲಗಳಿಗೆ ಅಂತ್ಯ ಹಾಡಲು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಗತ್ಯವಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

ಸಮ್ಮಿಶ್ರ ಸರ್ಕಾರ ಪತನವಾದರೆ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಸರ್ಕಾರ ರಚನೆ ಮಾಡಲು ಸಿದ್ಧವಾಗಿದೆ. ಆದರೆ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ವಾಡಿಕೆಯಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿ ತಿಂಗಳು ಕೇಂದ್ರ ಗೃಹ ಇಲಾಖೆ ಹಾಗೂ ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸುತ್ತಾರೆ. ಅದರಂತೆ ರಾಜ್ಯದ ವಿದ್ಯಮಾನಗಳ ಕುರಿತು ವರದಿ ಸಲ್ಲಿಸಿರಬಹುದು. ಈ ಬಗ್ಗೆ ನನಗೆ ಯಾವುದೇ ಮಾಹಿತಿಗಳಿಲ್ಲ. ಆದರೆ, ವರದಿ ನೀಡಿದ ತಕ್ಷಣವೇ ರಾಷ್ಟ್ರಪತಿ ಆಡಳಿತ ಜಾರಿಯಾಗಲಿದೆ ಎಂದು ಭಾವಿಸಬಾರದು ಎಂದರು.

ರಾಜ್ಯಗಳ ವಿಷಯದಲ್ಲಿ ಕೇಂದ್ರವು ಅನಗತ್ಯವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದರೆ ಮಾತ್ರ ಕಾನೂನು ಪ್ರಕಾರವೇ ಕ್ರಮ ತೆಗೆದುಕೊಳ್ಳಲಿದೆ ಎಂದ ಅವರು, ಸೋಮವಾರ ರಾಜ್ಯದ ವಿದ್ಯಮಾನಗಳಿಗೆ ಮುಕ್ತಿ ದೊರೆಯಲಿದೆ. ವಿಶ್ವಾಸ ಮತಯಾಚನೆ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರೆ ಸರ್ಕಾರಕ್ಕೆ ಸೋಲು ಕಟ್ಟಿಟ್ಟಬುತ್ತಿ ಎಂದು ತಿಳಿಸಿದರು.

click me!