
ಬೆಂಗಳೂರು (ಸೆ. 25): ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ‘ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ, ಹಲವು ಅತೃಪ್ತ ಶಾಸಕರು ಪ್ರತಿಪಕ್ಷ ಬಿಜೆಪಿ ಜತೆ ಕೈಜೋಡಿಸಲಿದ್ದಾರೆ, ಆಪರೇಷನ್ ಕಮಲದ ಮೂಲಕ ಶಾಸಕರನ್ನು ಸೆಳೆದು ಪರ್ಯಾಯ ಸರ್ಕಾರ ರಚಿಸಲು ಬಿಜೆಪಿ ಹುನ್ನಾರ ನಡೆಸಿದೆ’ ಎಂಬ ಸುದ್ದಿಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಂತಾಗಿದೆ.
ಪರಿಣಾಮ ಮುಖ್ಯಮಂತ್ರಿ ಕುಮಾರಸ್ವಾಮಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಮತ್ತೆ ಕೆಲವು ದಿನ ಬಳಿಕ ಇಂಥದ್ದೇ ಸನ್ನಿವೇಶ ನಿರ್ಮಾಣವಾದರೂ ಅಚ್ಚರಿಗೊಳ್ಳಬೇಕಾಗಿಲ್ಲ.
ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ಪೈಕಿ ಜೆಡಿಎಸ್ಗೆ ಹೋಲಿಸಿದರೆ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ ಹೆಚ್ಚು ಕಾಣಿಸಿಕೊಂಡಿತ್ತು. ವಿವಿಧ ಕಾರಣಗಳಿಗಾಗಿ ಅತೃಪ್ತಗೊಂಡಿದ್ದ ಕಾಂಗ್ರೆಸ್ ಶಾಸಕರನ್ನು ಆ ಪಕ್ಷದ ನಾಯಕರು ಸಮಾಧಾನಪಡಿಸುವಲ್ಲಿ ಸದ್ಯಕ್ಕೆ ಯಶಸ್ವಿಯಾಗಿದ್ದಾರೆ. ಅದರ ಜೆಡಿಎಸ್ ವರಿಷ್ಠರು ತಮ್ಮ ಪಕ್ಷದ ಶಾಸಕರನ್ನು ಹಾಸನಕ್ಕೆ ಕರೆದೊಯ್ದು ಶಾಸಕಾಂಗ ಪಕ್ಷದ ಸಭೆ ಮಾಡಿ ಒಗ್ಗಟ್ಟಾಗಿ ಇರುವಂತೆ ಸೂಚಿಸಿದ್ದಾರೆ. ಯಾವುದೇ ಆಮಿಷಕ್ಕೆ ಬಲಿಯಾಗದಂತೆ ಎಚ್ಚರಿಕೆ ಯನ್ನೂ ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಲ್ಲಿಯ ಅಸಮಾಧಾನದ ಲಾಭ ಪಡೆದುಕೊಳ್ಳಲು ವಿಫಲ ಯತ್ನ ನಡೆಸಿದ ಬಿಜೆಪಿ ನಾಯಕರಿಗೆ ಮುಖಭಂಗ ಉಂಟಾದಂತಾಗಿದೆ. ಅತೃಪ್ತ ಶಾಸಕರನ್ನು ವಿವಿಧ ಆಮಿಷಗಳಿಂದ ಸೆಳೆಯಲು ಸಾಕಷ್ಟು ಪ್ರಯತ್ನ ನಡೆಸಿದರೂ ಅದು ಯಶಸ್ಸು ಕಾಣಲಿಲ್ಲ. ರಾಜಿನಾಮೆ ನೀಡಿ ಬಿಜೆಪಿಗೆ ಬರುವುದಾಗಿ ಭರವಸೆ ನೀಡಿದ್ದರು ಎನ್ನಲಾದ ಬೆರಳೆಣಿಕೆಯಷ್ಟು ಶಾಸಕರು ನಂತರ ಹಿಂದೆ ಸರಿದರು.
ಅಲ್ಲದೆ, ಬಿಜೆಪಿಯ ತಂತ್ರಕ್ಕೆ ತಿರುಗೇಟು ನೀಡುವ ಸಂಬಂಧ ಕಾಂಗ್ರೆಸ್ ಮತ್ತು ಜೆಡಿ ಎಸ್ ನಾಯಕರು ಆ ಪಕ್ಷದ ಶಾಸಕರನ್ನು ಸೆಳೆಯಲು ಪ್ರತಿತಂತ್ರ ರೂಪಿಸತೊಡಗಿ ದರು. ಪರಿಣಾಮ, ಭಾನುವಾರದಿಂದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದ ಬಿಜೆಪಿ ನಾಯಕರು ಮೌನಕ್ಕೆ ಶರಣಾದರು. ಅಲ್ಲಿಗೆ, ಆಪರೇಷನ್ ಕಮಲ ತಣ್ಣಗಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.