
ಬೆಂಗಳೂರು(ಸೆ. 07): ಶೃಂಗೇರಿ ಶಾಸಕ ಹಾಗೂ ಬಿಜೆಪಿ ನಾಯಕ ಡಿಎನ್ ಜೀವರಾಜ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಗೌರಿ ಲಂಕೇಶ್ ಅವರು ಚೆಡ್ಡಿಗಳ ಮಾರಣಹೋಮ ಎಂದು ಬರೆಯದೇ ಇದ್ದಿದ್ದರೆ ಇವತ್ತು ಬದುಕುತ್ತಿದ್ದರು ಎಂದು ಹೇಳಿರುವ ಅವರ ಭಾಷಣದ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ಅವರು ಇಂತಹ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಗೌರಿ ಲಂಕೇಶ್ ಹತ್ಯೆಗೆ ಅವರು ಆ ರೀತಿ ಬರೆದದ್ದೇ ಕಾರಣ. ಅವರ ಹತ್ಯೆಯಲ್ಲಿ ಬಿಜೆಪಿ ಕೈವಾಡ ಇರುವುದು ಸ್ಪಷ್ಟ ಎಂಬ ಆರೋಪಗಳು ಕೇಳಿಬರುತ್ತಿವೆ. ಸಂಘಪರಿವಾರದ ಕಾರ್ಯಕರ್ತರ ಹತ್ಯೆಯಾದಾಗ ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ "ಚೆಡ್ಡಿಗಳ ಮಾರಣಹೋಮ" ಎಂದು ಬಣ್ಣಿಸಿದ್ದರೆನ್ನಲಾಗಿದೆ. ಆ ವಿಚಾರವಾಗಿ ಜೀವರಾಜ್ ಮಾತನಾಡಿದ್ದರು.
ಆ ಭಾಷಣದಲ್ಲಿ ಜೀವರಾಜ್ ಹೇಳಿದ್ದೇನು?
"ಈ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ 11 ಜನ ಬಿಜೆಪಿ ಮತ್ತು ಸಂಘಪರಿವಾರ ಸದಸ್ಯರ ಹತ್ಯೆ ಮಾಡಿದ್ರಲ್ಲ... ಯಾಕೆ ಮಾಡಿದ್ರಿ?"
"ಗೌರಿ ಲಂಕೇಶ್ ಅವತ್ತು ಅವರ ಪತ್ರಿಕೆಯಲ್ಲಿ "ಇದು ಚೆಡ್ಡಿಗಳ ಮಾರಣಹೋಮ" ಅಂತ ಬರೆಯದೇ ಇದ್ದಿದ್ದರೆ ಇವತ್ತು ಗೌರಿ ಲಂಕೇಶ್ ಉಳಿಯುತ್ತಿದ್ದರಲ್ವಾ?"
"(ಬಿಜೆಪಿ ಸರಕಾರದಲ್ಲಿ) ಕಲಬುರ್ಗಿ ಹತ್ಯೆಯಾಗಿತ್ತಾ..? ಗೌರಿ ಲಂಕೇಶ್ ಹತ್ಯೆಯಾಗಿತ್ತಾ? ಆವತ್ತು ಬಿಜೆಪಿ ಎಲ್ಲಾ ರಕ್ಷಣೆ ಕೊಟ್ಟಿತ್ತು."
"ಗೌರಿ ಲಂಕೇಶ್ ಹತ್ಯೆಯನ್ನು ನಾನು ಖಂಡಿಸ್ತೀನಿ. ಅವರಿಗೂ ಬದುಕುವ ಹಕ್ಕು ಇತ್ತು. ಅವರ ಹತ್ಯೆಯಾದ ಕೇಸನ್ನು ಸಿಬಿಐಗೆ ಕೊಡಬೇಕು. ಹಾಗೆಯೇ, ಈ ಎಲ್ಲಾ ಹಿಂದೂಗಳ ಹತ್ಯೆಯಾಗಿರುವುದನ್ನೂ ಸಿಬಿಐಗೆ ಕೊಡಬೇಕು ಅಂತ ಒತ್ತಾಯ ಮಾಡುತ್ತೇನೆ."
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.