
ಬೆಂಗಳೂರು : ನೆರೆ ರಾಜ್ಯ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಯೋಧರ ಮೇಲೆ ನಕ್ಸಲರು ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಅಲ್ಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರವು ವಿಶೇಷ ತಂಡ ರಚಿಸಿ ನಕಲ್ಸರ ಅಟ್ಟಹಾಸವನ್ನು ನಿರ್ನಾಮ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ ‘ನಾನು ಕೂಡ ನಕ್ಸಲ್’ ಭಿತ್ತಿಪತ್ರಗಳನ್ನು ಕೊರಳಿಗೆ ಹಾಕಿಕೊಂಡು ಪ್ರತಿಭಟಿಸಿದ ಬುದ್ಧಿಜೀವಿಗಳು ಯೋಧರ ಸಾವುಗಳ ಬಗ್ಗೆ ಅವರ ನಿಲುವು ಏನೆಂಬುದನ್ನು ಸಮಾಜಕ್ಕೆ ಸ್ಪಷ್ಟಪಡಿಸಬೇಕು. ಅವರ ಮನೆಯಲ್ಲಿಯೇ ಇಂತಹ ಕೃತ್ಯಗಳು ನಡೆದಿದ್ದರೆ ಏನು ಮಾಡುತ್ತಿದ್ದರು? ಪ್ರಜಾಪ್ರಭುತ್ವದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಅಸಹಕಾರ ಮತ್ತು ಭೀತಿ ಹುಟ್ಟಿಸುವ ಕಮ್ಯುನಿಸ್ಟ್ ಪ್ರೇರಿತ ಸಿದ್ಧಾಂತವನ್ನು ಭಾರತ ವಿರೋಧಿಸುತ್ತದೆ. ಚೀನಾದ ಕಮ್ಯುನಿಸ್ಟ್ ನೀತಿಯಲ್ಲಿ ನಂಬಿಕೆ ಇರುವ ಕೆಲವು ಬುದ್ಧಿಜೀವಿಗಳು ನಕ್ಸಲ್ ಸಿದ್ಧಾಂತ ಇರುವ ಚೀನಾ ಮತ್ತು ಇತರ ರಾಷ್ಟ್ರಗಳಿಗೆ ವಲಸೆ ಹೋಗಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿ 16 ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೆ ನಕ್ಸಲರು ದಾಳಿ ಮಾಡಿದ್ದು, 15 ಕಮಾಂಡೋಗಳು ಹುತಾತ್ಮರಾಗಿದ್ದಾರೆ. ಪ್ರಜಾಪ್ರಭುತ್ವವಿರೋಧಿ ನಿಲುವನ್ನು ಹೊಂದಿರುವ ನಕ್ಸಲ್ವಾದಿಗಳು ಶಸ್ತ್ರಸಜ್ಜಿತ ಪಡೆಯ ಮೇಲೆ ದಾಳಿ ನಡೆಸಿದೆ. ಇದು ಖಂಡನೀಯ. ನಕ್ಸಲರು ನಡೆಸಿರುವ ಎರಡನೇ ಕುಕೃತ್ಯ ಇದಾಗಿದೆ. ಇದಕ್ಕೂ ಮುನ್ನ ಕುರ್ಕೇಡಾದ ಹೆದ್ದಾರಿ ನಿರ್ಮಾಣ ಸ್ಥಳದಲ್ಲಿ 27 ಸರ್ಕಾರಿ ವಾಹನಗಳಿಗೆ ನಕ್ಸಲರು ಬೆಂಕಿ ಇಟ್ಟಿದ್ದರು. ನಕಲ್ಸರ ಅಟ್ಟಹಾಸ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.