
ಔರಾದ್ : ರಾಜ್ಯದ ಹಲವು ಭಾಗಗಳಲ್ಲಿ ಮುಂಗಾರು ಅಬ್ಬರಿಸುತ್ತಿದ್ದರೂ ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ. ಭೀಕರ ಬರಗಾಲ ಎದುರಿಸುತ್ತಿರುವ ಇಲ್ಲಿನ ಜನರು ತೆರೆದ ಬಾವಿಗಳಲ್ಲಿ ನೀರು ಎತ್ತಲು ಗುದ್ದಾಡುವಂತಾಗಿದೆ. ಸಾವಿನ ಭಯವನ್ನೂ ತೊರೆದು ಬಾವಿಯಲ್ಲಿ ಸರ್ಕಸ್ ಮಾಡಿ ನೀರು ಪಡೆಯುವಂತಾಗಿದೆ.
ಈ ಭಾಗದ ಹೆಚ್ಚಿನ ಭಾಗಗಳಲ್ಲಿ ನೀರು ತಳ ತಲುಪಿದೆ. ತಾಲೂಕಿನ ಚಿಮ್ಮೇಗಾಂವ್ ತಾಂಡಾದಲ್ಲಿ ನೀರಿನ ಸಮಸ್ಯೆ ಹೇಳ ತೀರದಾಗಿದೆ. ಹೀಗಾಗಿ ನೀರು ಇರುವ ಬಾವಿಗಳಿಗೆ ಕಿ.ಮೀ.ಗಟ್ಟಲೆ ನಡೆದು ಹೋಗುತ್ತಿದ್ದಾರೆ. ಅಬಾಲವೃದ್ಧರೆನ್ನದೇ ಜನರು ಹಗ್ಗಗಳನ್ನು ಬಾವಿಗಿಳಿಸಿ, ಇತರರೊಂದಿಗೆ ಸೆಣಸಾಡಿ ನೀರು ಪಡೆಯಬೇಕಾಗಿದೆ. ಈ ನಡುವೆ ನೀರು ಎಲ್ಲಿ ಖಾಲಿಯಾಗುತ್ತೋ ಎಂಬ ಆತಂಕದಿಂದ ಕೆಲವು ಯುವಕರು ಬಾವಿಯೊಳಗೆ ನಿಂತು ತಮ್ಮ ಕುಟುಂಬದವರಿಗೆ ಸಹಾಯ ಮಾಡುವುದು ಸರ್ವೇಸಾಮಾನ್ಯವಾಗಿದೆ.
ತಾಲೂಕಿನ ದಾಪಕಾ, ಕಮಲನಗರ, ಚಿಂತಾಕಿ, ಸಂತಪೂರ ಹೋಬಳಿಗಳಲ್ಲೂ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಕೆಲವು ಬಾವಿಗಳಂತೂ 55ರಿಂದ 100 ಅಡಿಗೂ ಅಧಿಕ ಆಳವಿದ್ದು ಒಂದು ಹಂತದ ಬಳಿಕ ಮೋಟಾರು ಪಂಪುಗಳಿಗೂ ನೀರು ಮೇಲೆತ್ತುವ ಸಾಮರ್ಥ್ಯ ಇರುವುದಿಲ್ಲ. ಪರಿಸ್ಥಿತಿ ಇಷ್ಟುಶೋಚನೀಯವಾಗಿದ್ದರೂ ಅಧಿಕಾರಿಗಳು ಹಾಗೂ ಜನಪ್ರನಿಧಿಗಳು ತಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ನಿರ್ಲಕ್ಷ್ಯ ತೋರುತಿದ್ದಾರೆ ಎಂಬುದು ನಾಗರಿಕರ ಅಳಲು.
ರಾಜ್ಯದ ಹೆಚ್ಚಿನ ಪ್ರದೇಶಗಳು ಮುಂಗಾರು ಪೂರ್ವ ಮಳೆಯಲ್ಲಿ ತೊಯ್ದರೂ ಈಗಾಗಲೇ ಮುಂಗಾರು ಪ್ರವೇಶಿಸಿದ್ದರೂ ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಮಾತ್ರ ಜೀವಜಲಕ್ಕಾಗಿ ಪರದಾಟ ಮುಂದುವರಿದಿದೆ. ನೀರಿನ ಬರವನ್ನು ಎದುರಿಸುತ್ತಿರುವ ಇಲ್ಲಿನ ಕೆಲ ಪ್ರದೇಶಗಳ ಜನರು ಹತ್ತಾರು ಕಿ.ಮೀ. ನಡೆಯಬೇಕಾದ ಪರಿಸ್ಥಿತಿ ಇದೆ. ಅಷ್ಟುದೂರ ನಡೆದು ಆಳದ ಬಾವಿಗಿಳಿದರೂ ನೀರು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಯಾವುದೇ ಖಾತ್ರಿ ಇರುವುದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.