
ಬೆಂಗಳೂರು: ಅನಾರೋಗ್ಯಕ್ಕೀಡಾಗಿದ್ದ ಪುತ್ರಿಯ ಸಾವು, ಇದ್ದೊಬ್ಬ ಮಗ ಜೈಲು ಸೇರಿದ್ದರಿಂದ ನೊಂದ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿಯ ವಲಗೇರಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ವಲಗೇರಹಳ್ಳಿ ನಿವಾಸಿ ವಿನೋದಮ್ಮ (45) ಆತ್ಮಹತ್ಯೆ ಮಾಡಿಕೊಂಡವರು. ವಿನೋದಮ್ಮ ಅವರ ಪತಿ ವೆಂಕಟೇಶ್ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನಿದ್ದಾನೆ. ಗಾರ್ಮೆಂಟ್ಸ್ ಕೆಲಸ ಮಾಡಿ ವಿನೋದಮ್ಮ ಜೀವನ ಸಾಗಿಸುತ್ತಿದ್ದರು.
ಆರು ತಿಂಗಳ ಹಿಂದೆ ಅನಾರೋಗ್ಯದಿಂದ ಹಿರಿಯ ಮಗಳು ಮೃತಪಟ್ಟಿದ್ದರು. ಇದ್ದೊಬ್ಬ ಮಗ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಕಿರಿಯ ಮಗಳಿಗೆ ವಿವಾಹವಾಗಿದ್ದು, ಪತಿ ಜತೆ ಮಾರುತಿ ನಗರದಲ್ಲಿ ವಾಸವಿದ್ದರು. ಈ ಎಲ್ಲಾ ಕಾರಣಗಳಿಂದ ವಿನೋದಮ್ಮ ಸಾಕಷ್ಟು ನೊಂದಿದ್ದರು. ಭಾನುವಾರ ರಾತ್ರಿ ಕಿರಿಯ ಮಗಳ ಮನೆಗೆ ತೆರಳಿದ್ದರು. ಈ ವೇಳೆ ಮಗಳ ಮುಂದೆ ಮಗ ಜೈಲು ಸೇರಿದ್ದು, ಮಗಳು ಸಾವನ್ನಪ್ಪಿದ್ದರ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದರು.
ತಾಯಿಯನ್ನು ಸಮಾಧಾನ ಪಡಿಸಿದ್ದ ಮಗಳು ವಿನೋದಮ್ಮ ಅವರನ್ನು ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ಬಿಟ್ಟು ತಮ್ಮ ಮನೆಗೆ ಬಂದಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ತಾಯಿ ಏನು ಮಾಡುತ್ತಿದ್ದಾರೆ ಎಂದು ಕೇಳಲು ಪುತ್ರಿ ಕರೆ ಮಾಡಿದ್ದು, ವಿನೋದಮ್ಮ ಸ್ವೀಕರಿಸಿಲ್ಲ. ಆತಂಕದಿಂದ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.