ಪಣಜಿ: ನಕಲಿ ‘ಗೋರಕ್ಷಕ’ರ ಕಾಟದಿಂದ ಕರ್ನಾಟಕದ ಬೀಫ್ ವರ್ತಕರು ಮಾಂಸದ ಸರಬರಾಜು ನಿಲ್ಲಿಸಿರುವುದರಿಂದ ಗೋವಾದಲ್ಲಿ ಬೀಫ್ ಕೊರತೆ ಉಂಟಾಗಿದೆಯೆಂದು ವರದಿಯಾಗಿದೆ. ಗೋವಾ ಸರ್ಕಾರ ಸಮಸ್ಯೆಯನ್ನು ಪರಿಹರಿಸುವವರೆಗೂ ಮಾಂಸವನ್ನು ಪೂರೈಸದಿರಲು ವರ್ತಕರು ನಿರ್ಧರಿಸಿದ್ದಾರೆನ್ನಲಾಗಿದ್ದು, ಇನ್ನೂ ಕೆಲದಿನಗಳವರೆಗೆ ಕೊರತೆ ಮುಂದುವರಿಯಬಹುದು ಎನ್ನಲಾಗಿದೆ.
ಸ್ವಯಂಘೋಷಿತ ಗೋರಕ್ಷಕರು ಗೋಮಾಂಸ ಸಾಗಾಟಗಾರರಿಗೆ ಕಿರುಕುಳ ನೀಡುತ್ತಿದ್ದು, ಸರ್ಕಾರ ಕ್ರಮ ಕೈಗೊಳ್ಳುವವರೆಗೆ ಮಾಂಸ ಪೂರೈಸದಿರಲು ವರ್ತಕರು ನಿರ್ಧರಿಸಿದ್ದಾರೆಂದು ಗೋವಾ ಅಧಿಕಾರಿಗಳು ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಮಹಾರಾಷ್ಟ್ರ ಬೀಫ್ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ಬಳಿಕ, ಗೋವಾಕ್ಕೆ ಕರ್ನಾಟಕದ ಬೆಳಗಾವಿಯಿಂದ ಬಹುತೇಕ ಮಾಂಸ ಪೂರೈಕೆಯಾಗುತ್ತದೆ.
ಸಮಸ್ಯೆ ಬಗೆಹರಿಯುವವರೆಗೆ ಯಾವುದೇ ಕಾರಣಕ್ಕೂ ಮಾಂಸ ಪೂರೈಸುವುದಿಲ್ಲವೆಂದು ಕರ್ನಾಟಕದ ವರ್ತಕರು ಹೇಳಿದ್ದಾರೆ, ಎಂದು ಗೋವಾ ಮಾಂಸ ವರ್ತಕರ ಸಂಘದ ಅಧ್ಯಕ್ಷ ಮನ್ನಾ ಬೇಪಾರಿ ಹೇಳಿದ್ದಾರೆ
ಈ ಬಗ್ಗೆ ಪೊಲೀಸರೊಂದಿಗೆ ಚರ್ಚಿಸುವುದಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಭರವಸೆ ನೀಡಿದ್ದಾರೆಂದು ಅವರು ಹೇಳಿದ್ದಾರೆ.
ಪ್ರತಿ ದಿನ 25 ಟನ್ ಮಾಂಸವನ್ನು ಬೆಳಗಾವಿಯಿಂದ ತರಿಸಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ. ಗೋಮಾಂಸದ ಕೊರತೆಯಿಂದ ಕೋಳಿ ಹಾಗೂ ಕುರಿಮಾಂಸದ ಬೆಲೆಗಳು ಏರಿವೆ, ಎಂದು ಅವರು ತಿಳಿಸಿದ್ದಾರೆ.