
ಬೆಂಗಳೂರು(ಏ.16): ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ (ಎಸ್ಎಎಸ್) ಅಡಿ ಕಟ್ಟಡದ ವಿಸ್ತೀರ್ಣದ ಬಗ್ಗೆ ತಪ್ಪು ಮಾಹಿತಿ ನೀಡಿ ತೆರಿಗೆ ವಂಚಿಸುತ್ತಿರುವ ಮಾಲೀಕರ ವಂಚನೆ ಬಹಿರಂಗಗೊಳಿಸಲು ‘ಡ್ರೋನ್' ಕ್ಯಾಮೆರಾ ನೆರವು ಪಡೆಯುವುದಾಗಿ ಮೇಯರ್ ಜಿ. ಪದ್ಮಾವತಿ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಟ್ಟಡ ಮಾಲೀಕರು ತಮ್ಮ ಆಸ್ತಿ ವಿಸ್ತೀರ್ಣವನ್ನು ತಾವೇ ಘೋಷಿಸಿಕೊಂಡು ಅದಕ್ಕೆ ತಕ್ಕಂತೆ ಆಸ್ತಿ ತೆರಿಗೆ ಪಾವತಿಸಲು ಈ ಮೊದಲು ಎಸ್ಎಎಸ್ ಅಡಿ ಅವಕಾಶ ಮಾಡಿಕೊಡಲಾಗಿದೆ. ಆದರೆ, ಬಹುತೇಕ ಕಟ್ಟಡದ ಮಾಲೀಕರು ಕಟ್ಟಡದ ವಿಸ್ತೀರ್ಣದ ಬಗ್ಗೆ ತಪ್ಪು ಮಾಹಿತಿ ಘೋಷಿಸಿಕೊಂಡಿದ್ದು ವಾಸ್ತವವಾಗಿ ಪಾವತಿಸಬೇಕಾಗಿರುವುದಕ್ಕಿಂತ ಕಡಿಮೆ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಇದರಿಂದ ಪಾಲಿಕೆ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಹಿನ್ನಡೆ ಉಂಟಾಗಿದ್ದು, ಆಸ್ತಿ ತೆರಿಗೆ ವಂಚಿಸುತ್ತಿರುವವರ ಪತ್ತೆಗೆ ಡ್ರೋನ್ ಕ್ಯಾಮರಾ ನೆರವು ಪಡೆದು ಕಟ್ಟಡ ಸಮೀಕ್ಷೆ ನಡೆಸಲು ಚಿಂತನೆ ನಡೆದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಇದೇ ವೇಳೆ ಕಟ್ಟಡ ಸಮೀಕ್ಷೆ ನಡೆಸಿ 3-ಡಿ ಮ್ಯಾಪಿಂಗ್ ಮಾಡಲಾಗುವುದು. ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಸ್ಮಾರ್ಟ್ ಸಿಟಿ ಪ್ರಸ್ತಾವನೆಯಲ್ಲೂ ಈ ಅಂಶ ಉಲ್ಲೇಖಿಸಲಾಗಿದೆ. ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ 19 ಲಕ್ಷ ಆಸ್ತಿಗಳನ್ನು ಗುರುತಿಸಿದ್ದು, ಇವುಗಳಲ್ಲಿ 13ರಿಂದ 14 ಲಕ್ಷ ಕಟ್ಟಡಗಳು ಮಾತ್ರ ತೆರಿಗೆ ವ್ಯಾಪ್ತಿಯಲ್ಲಿವೆ. ಅಲ್ಲದೆ ಇವುಗಳಲ್ಲೂ ಸಾವಿರಾರು ಕಟ್ಟಡಗಳು ವಿಸ್ತೀರ್ಣದ ಬಗ್ಗೆ ತಪ್ಪು ಮಾಹಿತಿ ನೀಡಿ ತೆರಿಗೆ ವಂಚಿಸುತ್ತಿವೆ. ಹೀಗಾಗಿ ಡ್ರೋನ್ ಹಾಗೂ 3-ಡಿ ಮ್ಯಾಪಿಂಗ್ಗೆ ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ ಎಂದರು.
ಅನುಷ್ಠಾನ ಅಸಾಧ್ಯ
ಕಟ್ಟಡಗಳ ವಿಸ್ತೀರ್ಣ ಪರಿಶೀಲನೆಗೆ ಡ್ರೋನ್ ಬಳಕೆ ಪ್ರಸ್ತಾಪದ ಬಗ್ಗೆ ಪಾಲಿಕೆ ಹಿರಿಯ ಅಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಡ್ರೋನ್ ಬಳಕೆಯಿಂದ ಕಟ್ಟಡ ವಿಸ್ತೀರ್ಣ ಸಮೀಕ್ಷೆ ಸಾಧ್ಯವಿಲ್ಲ. ಇದೊಂದು ಕಾರ್ಯ ರೂಪಕ್ಕೆ ತರಲಾಗದ ಅನಗತ್ಯ ಪ್ರಸ್ತಾವನೆ ಎಂದು ತಳ್ಳಿ ಹಾಕಿದ್ದಾರೆ.
ಒಂದು ವೇಳೆ ಕಟ್ಟಡದ ವಿಸ್ತೀರ್ಣ ತಿಳಿದರೂ ಬಿಬಿಎಂಪಿಯು ಕಟ್ಟಡದ ವಿಸ್ತೀರ್ಣದ ಮೇಲೆ ಮಾತ್ರ ತೆರಿಗೆ ವಿಧಿಸುವುದಿಲ್ಲ. ಆ ಕಟ್ಟಡ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ ಎಂಬುದೂ ಸಹ ಮುಖ್ಯ. ಕಟ್ಟಡ ಪಾರ್ಕಿಂಗ್, ವಸತಿ, ವಾಣಿಜ್ಯ ಹೀಗೆ ಯಾವುದಕ್ಕೆ ಬಳಕೆಯಾಗುತ್ತಿದ್ದರೆ ಅದರ ಆಧಾರದ ಮೇಲೆ ತೆರಿಗೆ ನಿಗದಿಯಾಗುತ್ತದೆ. ಅಲ್ಲದೆ ಡ್ರೋನ್ ಮೂಲಕ ಸಮೀಕ್ಷೆ ನಡೆಸಿದರೆ ಒಂದೆರಡು ಕಟ್ಟಡಗಳ ಚಿತ್ರೀಕರಣಕ್ಕೆ ಡ್ರೋಣ್ ಕ್ಯಾಮರಾದ ಬ್ಯಾಟರಿ ಖಾಲಿಯಾಗುತ್ತದೆ. ಜತೆಗೆ ದುಬಾರಿ ವೆಚ್ಚವೂ ಆಗಲಿದೆ. ಹೀಗಾಗಿ ಲಕ್ಷಾಂತರ ಕಟ್ಟಡಗಳಿಗೆ ಡ್ರೋನ್ ಮೂಲಕ ಸಮೀಕ್ಷೆ ನಡೆಸುವುದು ಅಸಾಧ್ಯ. ಇದರ ಬದಲಿಗೆ ‘ಟೋಟಲ್ ಸ್ಟೇಷನ್ ಸರ್ವೆ' ನಡೆಸಿದರೆ ಮಾತ್ರ ಪ್ರಯೋಜನ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.