ನವದೆಹಲಿ (ಅ.03): ಉನ್ನತ ಅಧಿಕಾರಿ ಬಿ.ಕೆ ಬನ್ಸಾಲ್ ಹಾಗೂ ಅವರ ಪುತ್ರ ಯೋಗೇಶ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದು ಯೋಗೇಶ್ ಸುಮಾರು 2.4 ಕೋಟಿ ಕಪ್ಪುಹಣ ಹೊಂದಿದ್ದರು ಎಂದು ತೆರಿಗೆ ಅಧಿಕಾರಿಗಳು ಇಂದು ಬಹಿರಂಗಪಡಿಸಿದ್ದಾರೆ.
ಬನ್ಸಾಲ್ ಪತ್ನಿ ಮತ್ತು ಪುತ್ರಿ ಇಬ್ಬರೂ ಜುಲೈನಲ್ಲಿ ನೇಣಿಗೆ ಶರಣಾಗಿದ್ದರು. ಅದಾದ ಕೆಲ ದಿನಗಳ ಬಳಿಕ ಔಷಧೀಯ ಕಂಪನಿಯೊಂದರಿಂದ ಬನ್ಸಾಲ್ ಲಂಚ ಪಡೆದಿದ್ದರು ಎನ್ನುವ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿತ್ತು.
ಬನ್ಸಾಲ್ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವುದು ತನಿಖಾಧಿಕಾರಿಗಳನ್ನು ದಿಗಿಲುಗೊಳಿಸಿದ್ದು, ಸಿಬಿಐನವರು ನಿಜವಾಗಿಯೂ ಬನ್ಸಾಲ್ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದರಾ ಅನ್ನೋದನ್ನ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಯೋಗೇಶ್ ಬನ್ಸಾಲ್ ಕಪ್ಪುಹಣವನ್ನು ತೆರಿಗೆ ಅಧಿಕಾರಿಗಳ ಬಳಿ ಬಹಿರಂಗಪಡಿಸದೇ ಇದ್ದದ್ದೇ ಆತ್ಮಹತ್ಯೆಗೆ ಕಾರಣವಾಯಿತಾ ಎಂದು ಸಿಬಿಐ ಅನುಮಾನ ವ್ಯಕ್ತಪಡಿಸಿದೆ.