
ಬೆಂಗಳೂರು(ಫೆ. 09): ನಗರ ಹಾಗೂ ಹೊರವಲಯದಲ್ಲಿ 8,930 ರೌಡಿಶೀಟರ್'ಗಳಿದ್ದು, ಈ ಪೈಕಿ ಸುಮಾರು 2,700 ಜನರು ರಿಯಲ್ ಎಸ್ಟೇಟ್ ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಈಗ ರೌಡಿಶೀಟರ್'ಗಳ ಆದಾಯದ ಮೂಲದ ಪತ್ತೆ ಹಚ್ಚಲಾಗುತ್ತಿದ್ದು, ಅವರ ಅಸಲಿ ಮುಖವಾಡ ಕಳಚಿಬೀಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರ ಗುಡುಗು:
ಇತ್ತೀಚೆಗೆ ರಾಜಧಾನಿಯನ್ನೇ ಬೆಚ್ಚಿಬೀಳಿಸಿದ ಹಾಡಹಗಲೇ ನಡುರಸ್ತೆಯಲ್ಲಿ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಶೂಟೌಟ್ ಪ್ರಕರಣದ ಬಳಿಕ ಎಚ್ಚೆತ್ತಿರುವ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಈಗ ರೌಡಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಪಾತಕಿಗಳ ವಿರುದ್ಧ ಕಠಿಣ ಜಾರಿಗೊಳಿಸಲು ಆದೇಶಿಸಿದ್ದಾರೆ.
ಈ ಸೂಚನೆ ಹಿನ್ನೆಲೆಯಲ್ಲಿ ಆರ್ಥಿಕ ಮೂಲಗಳು ಹಾಗೂ ಪ್ರಸುತ್ತ ಜೀವ ಶೈಲಿನ ಸೇರಿದಂತೆ ರೌಡಿಶೀಟರ್'ಗಳ ಸಮಗ್ರ ಮಾಹಿತಿ ಕಲೆ ಹಾಕಲು ಸ್ಥಳೀಯ ಪೊಲೀಸರು ಮುಂದಾಗಿದ್ದು, ಈ ವರದಿ ಬಳಿಕ ರೌಡಿಶೀಟರ್ಗಳ ಮೇಲೆ ಗೂಂಡಾ ಕಾಯ್ದೆ ಪ್ರಯೋಗಿಸಿ ಬಂಧನಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ'ಕ್ಕೆ ಹೇಳಿವೆ.
ಈ ನಡುವೆ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವವರ ವಿರುದ್ಧ ನಿರ್ದಾಕ್ಷ್ಯಿಣವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿ ಭೂ ವ್ಯವಹಾರ ಹಾಗೂ ಕಸ ವಿಲೇವಾರಿಯಲ್ಲಿ ಕೆಲವು ರೌಡಿಶೀಟರ್'ಗಳು ಅಕ್ರಮದಲ್ಲಿ ತೊಡಗಿದ್ದು, ಈಚಿನ ದಿನಗಳಲ್ಲಿ ಕಸ ಮಾಫಿಯಾ ವಿಸ್ತಾರವಾಗಿ ಬೆಳೆಯುತ್ತಿರುವ ಕುರಿತು ಆತಂಕಕಾರಿ ಮಾಹಿತಿ ಬಂದಿದೆ. ಈ ಸಂಬಂಧ ಹೆಚ್ಚಿನ ವಿವರ ಸಂಗ್ರಹಿಸಲಾಗುತ್ತಿದ್ದು, ನಗರದಲ್ಲಿ ಭೂಮಿ ಮತ್ತು ಕಸ ಸೇರಿದಂತೆ ಯಾವುದೇ ರೀತಿಯ ಮಾಫಿಯಾಗಳು ತಲೆ ಎತ್ತಲು ಬಿಡುವುದಿಲ್ಲ ಎಂದು ಹೆಚ್ಚುವರಿ ಆಯುಕ್ತರು ಗುಡುಗಿದರು.
ಈ ಮಾಫಿಯಾಗಳ ಹೋರಾಟಕ್ಕೆ ಸಾರ್ವಜನಿಕರ ಸಹಕಾರ ಕೋರಿರುವ ಹೆಚ್ಚುವರಿ ಆಯುಕ್ತರು, ಸ್ಥಳೀಯವಾಗಿ ಗುಪ್ತವಾಗಿ ನಡೆಯುವ ಕಾನೂನು ಬಾಹಿರ ಕೃತ್ಯಗಳ ಕುರಿತು ಮಾಹಿತಿ ಇದ್ದರೆ ಮುಕ್ತವಾಗಿ ನೀಡುವಂತೆ ಜನರಿಗೆ ಅವರು ವಿನಂತಿಸಿದರು. ಹೀಗೆ ಮಾಹಿತಿ ಕೊಡುವವರ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಉಂಟಾಗದಂತೆ ಸೂಕ್ತ ಭದ್ರತೆ ಕೊಡುವುದಾಗಿಯೂ ಹೇಮಂತ್ ನಿಂಬಾಳ್ಕರ್ ಭರವಸೆ ನೀಡಿದರು.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.