
ಬೆಂಗಳೂರು(ಏ.15): ರಾಜಧಾನಿಯಲ್ಲಿ ಮಾಜಿ ರೌಡಿಯೊಬ್ಬನ ಮನೆ ಮೇಲೆ ಶುಕ್ರವಾರ ಹಠಾತ್ ದಾಳಿ ನಡೆಸಿರುವ ಪೊಲೀಸರು, ರದ್ದಾದ 500, 1000 ರು. ಹಳೆ ನೋಟಿನ ಗಣಿಯನ್ನೇ ಅಗೆದಿದ್ದಾರೆ. ಪೊಲೀಸ್ ದಾಳಿಯಲ್ಲಿ ಬರೋಬ್ಬರಿ 14.80 ಕೋಟಿ ರು. ಮೊತ್ತದ ಹಳೆ ನೋಟು ಸಿಕ್ಕಿದೆ. ಮಾಜಿ ಕಾರ್ಪೊರೇಟರ್ ಕೂಡ ಆಗಿರುವ ರೌಡಿಶೀಟರ್ ನಾಗರಾಜ ಅಲಿಯಾಸ್ ನಾಗನ ಮನೆ ಮೇಲೆ ನಡೆದ ದಾಳಿಯಲ್ಲಿ ಪತ್ತೆಯಾದ ಈ ‘ಕ್ಯಾಶ್ಬಾಂಬ್' ರಾಜ್ಯವಷ್ಟೇ ಅಲ್ಲ, ದೇಶವನ್ನೇ ನಿಬ್ಬೆರಗಾಗಿಸಿದೆ.
ಉದ್ಯಮಿಯೊಬ್ಬರನ್ನು ಅಪಹರಿಸಿ ಹಳೆಯ 500, 1000 ಮುಖ ಬೆಲೆಯ . 50 ಲಕ್ಷ ಹಣ ದರೋಡೆ ಮಾಡಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿರುವ ರೌಡಿಶೀಟರ್, ಮಾಜಿ ಪಾಲಿಕೆ ಸದಸ್ಯ ನಾಗರಾಜ ಅಲಿಯಾಸ್ ನಾಗನ ಮನೆ ಮೇಲೆ ಬೆಂಗಳೂರು ಪೂರ್ವ ವಿಭಾಗದ ಹೇಮಂತ್ ನಿಂಬಾಳ್ಕರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಮನೆಯ ಬೆಡ್ರೂಂನಲ್ಲಿ ಇಟ್ಟಿಗೆಯ ಮಂಚ ನಿರ್ಮಿಸಿ ಅದರಲ್ಲಿ ಅವಿತಿಟ್ಟಿದ್ದ . 14.80 ಕೋಟಿ ನಗದು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದೆ.
ಆದರೆ, ಖಾಕಿಯ ಪಡೆಯ ದಾಳಿಯ ಮುನ್ಸೂಚನೆಯ ಬಗ್ಗೆ ಮಾಹಿತಿ ಅರಿತಿದ್ದ ಆರೋಪಿ ನಾಗರಾಜ ರಾತ್ರೋರಾತ್ರಿ ಮನೆಯಿಂದ ಪರಾರಿ ಯಾಗಿದ್ದು, ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ನಿಂಬಾಳ್ಕರ್ ಹೇಳಿದ್ದಾರೆ.
ಇಷ್ಟೊಂದು ಭಾರಿ ಪ್ರಮಾಣದ ಹಣ ಈತನ ಬಳಿ ಪತ್ತೆ ಆಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದು, ಈ ಹಣದ ಮೂಲ ಯಾರದು? 500, 1000 ರು. ಮೌಲ್ಯದ ಹಳೇ ನೋಟು ವಿನಿಮಯ ಮಾಡಿಕೊಳ್ಳುವ ಅವಧಿ ಮಾಚ್ರ್ 30ಕ್ಕೇ ಮುಗಿದರೂ ಈತ ಏಕೆ ಇಷ್ಟುಹಣ ಇಟ್ಟು ಕೊಂಡಿದ್ದ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
1)ಶ್ರೀರಾಮಪುರದ ನಾಗನ ಮನೆ 5 ಅಂತಸ್ತಿನದ್ದು. ಅದರ ಸುತ್ತ 4-5 ಸ್ವಂತ ಕಟ್ಟಡಗಳ ಕೋಟೆ. ಪ್ರತಿ ಕಟ್ಟಡದ ಬಾಗಿಲಿಗೆ ಸರಳಿನ ರಕ್ಷಣೆ, 38 ಸಿಸಿಟೀವಿಗಳ ಕಣ್ಗಾವಲು. 1.1 ಕೋಟಿ ವೆಚ್ಚದಲ್ಲಿ 2 ಹೋಮ್ ಥಿಯೇಟರ್ ಸೇರಿ ವೈಭವೋಪೇತ ಬಂಗಲೆ.
2)ನೋಟು ಅಮಾನ್ಯ ಬಳಿಕ ರಾಜ್ಯದ ವಿವಿಧೆಡೆ ನಡೆದಿದ್ದ ಕಪ್ಪುಹಣ ಬಿಳಿ ದಂಧೆಯಲ್ಲಿ ನಾಗ ಕೂಡ ಪಾಲ್ಗೊಂಡಿದ್ದ ಎನ್ನಲಾಗಿದೆ. ಮೊದಲು ಕಮಿಷನ್ಗೆ ನೋಟು ಬದಲಿಸುತ್ತಿದ್ದ ನಾಗ, ಬಳಿಕ ತನ್ನ ‘ಗ್ರಾಹಕ'ರಿಂದಲೇ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.
3)ನಾಗನನ್ನು ಹುಡುಕಲು ಬಂದ ಪೊಲೀಸರಿಗೆ ಆತನ ಪತ್ನಿ ಆವಾಜ್ ಹಾಕಿದ ಘಟನೆಯೂ ನಡೆದಿದೆ. ‘ನಾನೇನು ನಾಗ ನನ್ನು ನನ್ನ ತೊಡೆಯಲ್ಲಿ ಇಟ್ಟುಕೊಂಡಿದ್ದೀನಾ? ನೀವೇ ಹುಡುಕಿ ಕೊಳ್ಳಿ' ಎಂದು ನಾಗನ ಪತ್ನಿ ಲಕ್ಷ್ಮಿ ದಬಾಯಿಸಿದ್ದಾಳೆ.
4)ನಾಗರಾಜ ಅಲಿಯಾಸ್ ನಾಗ ತಮಿಳುನಾಡಿನ ಧರ್ಮಪುರಿ ಜಿಲ್ಲೆಯವನು. ಈತ 80ರ ದಶಕದಲ್ಲೇ ಭೂಗತ ಲೋಕಕ್ಕೆ ಕಾಲಿಟ್ಟಿದ್ದ. ಸಣ್ಣಪುಟ್ಟಅಪರಾಧ ಕೃತ್ಯಗಳಿಂದ ಕೊಲೆ, ದರೋಡೆಯಂತಹ ಕೃತ್ಯಗಳಲ್ಲಿ ತೊಡಗಿದ್ದ. 20ನೇ ವಯಸ್ಸಿನಲ್ಲೆ ರೌಡಿ ಪಟ್ಟಿಯಲ್ಲಿ ಸೇರ್ಪಡೆ ಗೊಂಡಿದ್ದ. ನಾಡ ಬಾಂಬ್ನ್ನು ಕಿಸೆಯಲ್ಲಿಟ್ಟುಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದ. ಹಣ ಕೊಡದಿದ್ದರೆ ನಾಡಬಾಂಬ್ ಎಸೆಯುತ್ತಿದ್ದ. ಹೀಗಾಗಿ ‘ಬಾಂಬ್ ನಾಗ' ಎಂದು ಕುಖ್ಯಾತ ಪಡೆದಿದ್ದ.
ಇನ್ನು ನಾಗನ ವಿರುದ್ಧ ದೂರಿದ್ದ ಉದ್ಯಮಿ ನಾಗರಭಾವಿಯ ಎನ್.ಉಮೇಶ್ (45) ‘ಬ್ಲ್ಯಾಕ್ ಆ್ಯಂಡ್ ವೈಟ್' ದಂಧೆಯಲ್ಲಿ ಏ.1 ರಂದು ಕೇಂದ್ರ ಅಪರಾಧ ವಿಭಾ ಗದ (ಸಿಸಿಬಿ) ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಈ ದಾಳಿ ವೇಳೆಯಲ್ಲೇ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿಅಳಿಯ ಪ್ರವೀಣ್ ಕುಮಾರ್ ಬಂಧಿತರಾಗಿದ್ದರು. ಹೀಗಾಗಿ ಈ ಪ್ರಕರಣಕ್ಕೂ ಪ್ರವೀಣ್ ಬಂಧನ ಪ್ರಕರಣಕ್ಕೂ ನಂಟಿದೆಯೇ ಎಂಬ ಶಂಕೆಯೂ ಮೂಡಿದೆ.
ಸತತ 12 ಗಂಟೆ ಕಾರ್ಯಾಚರಣೆ
ಸತತ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮೂರು ಬಾಕ್ಸ್ ಹಣ ಮತ್ತು 12 ಬಾಕ್ಸ್ಗಳಲ್ಲಿ ಭೂ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ದಾಳಿ ವೇಳೆ ನಾಗನ ಸಹಚರರಾದ ಮಣಿ ಮತ್ತು ಅಪ್ಪಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ನಾಗನ ವಿರುದ್ಧ ಮತ್ತೆ ‘ರೌಡಿಪಟ್ಟಿ' ತೆರೆಯಲಾಗಿದೆ. ಇದೇ ವೇಳೆ ನಾಗನ ಇಬ್ಬರು ಮಕ್ಕಳ ಮೇಲೂ ರೌಡಿಪಟ್ಟಿತೆರೆಯಲಾಗಿದೆ. ಪರಾರಿಯಾಗಿರುವ ನಾಗನ ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ.
‘ ಬ್ಲ್ಯಾಕ್ ಆ್ಯಂಡ್ ವೈಟ್' ದಂಧೆ!
ಮಾ.18 ರಂದು ಉದ್ಯಮಿ ಉಮೇಶ್ ಹಾಗೂ ಸ್ನೇಹಿತರಾದ ಕಿಶೋರ್ ಕುಮಾರ್, ಗಣೇಶ್ ಎಚ್ಬಿಆರ್ ಲೇಔಟ್ ಸಮೀಪ ನಿವೇಶನಗಳನ್ನು ನೋಡಿಕೊಂಡು ಕಾರಿನಲ್ಲಿ ವಾಪಸ್ ತೆರಳುತ್ತಿದ್ದರು. ಇದೇ ವೇಳೆ ಉಮೇಶ್ ಕಾರಿನಲ್ಲಿ 50 ಲಕ್ಷ ಹಳೇ ನೋಟುಗಳಿದ್ದವು. ಮಾರ್ಗ ಮಧ್ಯೆ ನಿರ್ಜನ ಪ್ರದೇಶವೊಂದರಲ್ಲಿ ಇವರನ್ನು ಅಡ್ಡಹಾಕಿದ ರೌಡಿಶೀಟರ್ ನಾಗರಾಜನ ಸಹಚರರು ಮಾರಕಾಸ್ತ್ರಗಳಿಂದ ಬೆದರಿಸಿ ಮೂವರನ್ನು ಅದೇ ಕಾರಿನಲ್ಲಿ ಶ್ರೀರಾಂಪುರದ ನಾಗನ ನಿವಾಸಕ್ಕೆ ಕರೆ ತಂದಿದ್ದರು. ಬಳಿಕ ಉದ್ಯಮಿ ಉಮೇಶ್ ಹಾಗೂ ಸ್ನೇಹಿತ ಕಿಶೋರ್ಗೆ ಪ್ರಾಣ ಬೆದರಿಕೆ ಹಾಕಿ ಅವರ ಬಳಿಯಿದ್ದ . 50 ಲಕ್ಷ ಹಾಗೂ ಅವರ ಬಳಿ ಇದ್ದ ಚಿನ್ನಾಭರಣ ದೋಚಿದ್ದರು.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ನಾಗ ಹಾಗೂ ಆತನ ಸಹಚರರು ಬೆದರಿಕೆ ಒಡ್ಡಿದ್ದರು ಎಂದು ಉಮೇಶ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಏ.7 ರಂದು ಉಮೇಶ್ ದೂರು ದಾಖಲಿಸಿದ್ದರು. ನಾಗನ ಬಗ್ಗೆ ತಿಳಿದಿದ್ದ ಹೆಣ್ಣೂರು ಪೊಲೀಸರು ಆತನ ಚಲನವಲನದ ಬಗ್ಗೆ ನಿಗಾ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಆಯುಕ್ತ ನಿಂಬಾಳ್ಕರ್ ಆರೋಪಿಗಳ ಬಂಧನಕ್ಕೆ ತಂಡವೊಂದನ್ನು ರಚಿಸಿದ್ದರು. ಮಫ್ತಿಯಲ್ಲಿ ಪೊಲೀಸರು ಶ್ರೀರಾಂಪುರದಲ್ಲಿರುವ ನಾಗನ ನಿವಾಸದ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ರೌಡಿ ನಾಗ ‘ಬ್ಲ್ಯಾಕ್ ಆ್ಯಂಡ್ ವೈಟ್' ದಂಧೆಯಲ್ಲಿ ತೊಡಗಿರುವುದು ಪತ್ತೆಯಾಗಿತ್ತು.
ಹೀಗಾಗಿ ರೌಡಿ ನಾಗನ ಮನೆ ಶೋಧಕ್ಕೆ ಪೊಲೀಸರು ನ್ಯಾಯಾಲಯದಿಂದ ವಾರೆಂಟ್ ಪಡೆದು ಶುಕ್ರವಾರ ಬೆಳಗ್ಗೆ 5.30 ಗಂಟೆ ಸುಮಾರಿಗೆ ಈಶಾನ್ಯ ವಿಭಾಗದ ಡಿಸಿಪಿ ಅಜಯ್ ಹಿಲೋರಿ ಹಾಗೂ ಹೆಣ್ಣೂರು ಇನ್ಸ್ಪೆಕ್ಟರ್ ನೇತೃತ್ವದಲ್ಲಿ 50ಕ್ಕೂ ಪೊಲೀಸರ ತಂಡ ನಾಗನ ಮನೆ ಮತ್ತು ಕಚೇರಿ ಮೇಲೆ ಏಕಾಏಕಿ ದಾಳಿ ನಡೆಸಿತ್ತು. ದಾಳಿ ವೇಳೆ ಆರೋಪಿ ಮನೆಯಲ್ಲಿ ಇರಲಿಲ್ಲ. ಪೊಲೀಸರ ದಾಳಿ ಅರಿತು ಆರೋಪಿ ಮೊದಲೇ ಮನೆಯಿಂದ ಪರಾರಿಯಾಗಿದ್ದ ಎಂದು ನಿಂಬಾಳ್ಕರ್ ಹೇಳಿದ್ದಾರೆ. ಆರೋಪಿ ಮನೆ ಮತ್ತು ಕಚೇರಿಯಲ್ಲಿ ಅಪಾರ ಪ್ರಮಾಣ ಭೂ ದಾಖಲೆಗಳು ಪತ್ತೆಯಾಗಿದ್ದು, ಇವುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.