
ಬೆಂಗಳೂರು(ಡಿ.09): ಬೆಂಗಳೂರು ಉತ್ತರ ತಾಲೂಕಲ್ಲಿ ಸೈಟ್ ಕೊಂಡಿದ್ದೀರಾ? ಎಚ್ಚರ ಇರಲಿ. ಯಾಕೆಂದರೆ, ಭಾರೀ ಅಕ್ರಮ ನಡೆದಿರುವುದನ್ನು ಸರ್ಕಾರವೇ ಪತ್ತೆ ಹಚ್ಚಿದೆ. ಸುಮಾರು 6 ಸಾವಿರ ಜನರಿಗೆ ಸೈಟ್ ಕೊಟ್ಟು 400 ಕೋಟಿ ವಂಚನೆ ಆಗಿರುವುದು ಸಮಿತಿ ಸಭೆಯಲ್ಲಿ ಸಾಬೀತಾಗಿದೆ. ಈ ಕುರಿತ ವರದಿ ಇಲ್ಲಿದೆ.
ಬೆಂಗಳೂರು ಉತ್ತರ ತಾಲ್ಲೂಕು ಎಂದರೆ ಯಲಹಂಕ ಹಾಗೂ ದೇವನಹಳ್ಳಿ ಸುತ್ತಲಿನ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ನಿಯಮಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಾಕೆಂದರೆ ಲೇಔಟ್'ಗಳ ನಿರ್ಮಾಣಕ್ಕೆ ನಮೂನೆ-9 ಮತ್ತು ನಮೂನೆ-11ಬಿ ಹೊರಡಿಸಿ ತದನಂತರ ರದ್ದು ಮಾಡುವ ಅಕ್ರಮ ಕಂಡು ಬಂದಿದೆ. ಈ ಸಂಬಂಧ ಸುಮಾರು 6 ಸಾವಿರ ಜನರಿಗೆ ಒಟ್ಟು ಸುಮಾರು 400 ಕೋಟಿ ರೂಪಾಯಿ ವಂಚನೆ ಆಗಿದೆ. ಸರ್ಕಾರ ನೇಮಿಸಿದ್ದ ನಿವೃತ್ತ IAS ಅಧಿಕಾರಿ ಆರ್ ಬಿ ಆಗವಾನಿ ನೇತೃತ್ವ ತನಿಖಾ ಸಮಿತಿ ವರದಿ ನೀಡಿದೆ. ಇದರಲ್ಲಿ ಲ್ಯಾಂಡ್ ಡೆವಲಪರ್ಸ್ ಮತ್ತು ಉಪ ನೊಂದಣಾಧಿಕಾರಿಗಳು ಜಂಟಿಯಾಗಿ ನಿವೇಶನ ಖರೀದಿದಾರರನ್ನು ವಂಚಿಸಿರುವುದು ಸ್ಪಷ್ಟವಾಗಿದೆ.
ಹಸಿರು ವಲಯದಲ್ಲಿ ಹಾಗೂ ಕೃಷಿ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆಗಳು ನಡೆಯುತ್ತಿವೆ. ಈ ವಿಚಾರ ಗಮನಕ್ಕೆ ಬಂದರೂ ಉದ್ದೇಶಪೂರ್ವಕವಾಗಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಅಲ್ಲದೇ, ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣರಾಗಿದ್ದಾರೆ. ಎಲ್ಲಾ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ.
1. ಖಾತೆಗಳನ್ನು ಹೊರಡಿಸಿ ರದ್ದುಪಡಿಸಿರುವ ಕುರಿತು ಸಮಿತಿಯ ವರದಿಯು ಶಿಫಾರಸು ಮಾಡಿರುವಂತೆ ಕ್ರಮಿನಲ್ ಮೊಕದ್ದಮೆ ದಾಖಲು ಮಾಡಲು ಕ್ರಮ ಕೈಗೊಳ್ಳುವುದು
2. ವರದಿಯಲ್ಲಿರುವ ಸಿಬ್ಬಂದಿ/ಅಧಿಕಾರಿಗಳನ್ನು ಅಮಾನತ್ತಿನಲ್ಲಿರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು
3. ಉತ್ತರ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಪ್ರಕರಣದಲ್ಲಿ ಸರ್ಕಾರದ ಸುತ್ತೋಲೆಗಳಂತೆ ಜವಾಬ್ದಾರರು. ಕಾರ್ಯನಿರ್ವಹಣಾಧಿಕಾರಿ ಶ್ರೀ ಎಸ್ ಆರ್ ಬಾಬು ಅಮಾನತ್ತಿನಲ್ಲಿರಿಸಿ ಶಿಸ್ತು ಕ್ರಮ/ವಿಚಾರಣೆ ಪ್ರಾರಂಭಿಸಲಾಗಿದೆ
4. ಸಾರ್ವಜನಿಕರಿಗೆ ತೊಂದರೆ, ಮೋಸ ಹಾಗೂ ಅನಾನುಕೂಲತೆಗಳ ಕುರಿತು ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಗೋಪಾಲಕೃಷ್ಣಗೌಡ, ನಿವೃತ್ತ ಕಾರ್ಯದರ್ಶಿ ಗುಂಜಿಗಾವಿ, ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಇನ್ನೊಬ್ಬರು ಸದಸ್ಯರನ್ನು ಒಳಗೊಂಡ 3 ಜನರ ಸಮಿತಿಯೊಂದನ್ನು ನೇಮಿಸಿ, ಸಮಿತಿ ಶಿಫಾರಸು ಪಡೆಯುವುದು
5. ದೂರಗಳ ಹಿನ್ನೆಲೆಯಲ್ಲಿ ವರದಿಯಲ್ಲಿ ಪ್ರಸ್ತಾಪಿಸಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ 11ಬಿ ಖಾತೆ ಹೊರಡಿಸುವುದನ್ನು ತಡೆಹಿಡಿಯಲಾಗಿದೆ.
6. ಈ ಪ್ರಕರಣದ ಕುರಿತು ವಿಚಾರಣೆ ನಡೆಸಲು ಕೋಲಾರ ಜಿಲ್ಲಾ ಪಂಚಾಯಿತಿಯ CEO ಶ್ರೀಮತಿ ಕಾವೇರಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತರಾದ ಶ್ರೀ ಎ ಕೆ ಚಿಟಗುಪ್ಪಿಯವರನ್ನು ವಿಚಾರಣಾ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಈಗಾಗಲೇ ಅಕ್ರಮ ಎಸಗಿರುವವರ ಮೇಲೇ ಸಚಿವರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆದರೆ ಮುಂದೆಯೂ ಇಂತಹ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಸಚಿವರು ಕ್ರಮಕೈಗೊಳ್ಳಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.