ಲಗ್ನಪತ್ರಿಕೆಯಲ್ಲಿ ವೀರಶೈವ ಲಿಂಗಾಯತ ಜಾಗೃತಿ

First Published Apr 24, 2018, 10:37 AM IST
Highlights

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲೆಡೆ ಚುನಾವಣಾ ಕಾವು ಜೋರಾಗಿಯೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಕುಟುಂಬವೊಂದರ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮತದಾನದ ಕುರಿತು ಸಂದೇಶ ಹಾಗೂ ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಸಾಮರಸ್ಯದ ಸಂದೇಶ ಮುದ್ರಿಸುವ ಮೂಲಕ ಜೋಡಿಯೊಂದು ಜಾಗೃತಿಗೆ ಮುಂದಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲೆಡೆ ಚುನಾವಣಾ ಕಾವು ಜೋರಾಗಿಯೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಕುಟುಂಬವೊಂದರ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮತದಾನದ ಕುರಿತು ಸಂದೇಶ ಹಾಗೂ ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಸಾಮರಸ್ಯದ ಸಂದೇಶ ಮುದ್ರಿಸುವ ಮೂಲಕ ಜೋಡಿಯೊಂದು ಜಾಗೃತಿಗೆ ಮುಂದಾಗಿದೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ್ ಅಣ್ಣಾರಾವ್ ಪಾಟೀಲ್ ಅವರ ಕುಟುಂಬದ ವರ ಸದಾಶಿವ ಹಾಗೂ ವಧು ಕವಿತಾ ಜೋಡಿ ವಿವಾಹದ ಆಮಂತ್ರಣ ಪತ್ರಿಕೆಯಲ್ಲೇ ಈ ರೀತಿ ವಿಭಿನ್ನ ಜಾಗೃತಿ ಮೂಡಿಸಲಾಗಿದೆ. ಸದ್ಯ ಮತದಾನಕ್ಕಾಗಿ ಚುನಾವಣಾ ಆಯೋಗ ನಾನಾ ರೀತಿಯ ಪ್ರಚಾರ ನಡೆಸಿದರೂ ಪ್ರತಿಬಾರಿ ನಿರೀಕ್ಷಿತ ಮತದಾನ ನಡೆಯುತ್ತಿಲ್ಲ. ಇದನ್ನು ಮನಗಂಡು ಕುಟುಂಬಸ್ಥರು ಇಂತಹ ಪ್ರಯೋಗಕ್ಕೆ ಮುಂದಾಗಿದ್ದು, ಆಮಂತ್ರಣ ಪತ್ರದ ಜೊತೆಗೆ ಮತದಾನದ ಜಾಗೃತಿ ಮೂಡಿಸುವ ಅತ್ಯಾಕರ್ಷಕ ವಿನ್ಯಾಸದ ಸುಮಾರು 2 ಸಾವಿರ ಕಾರ್ಡ್‌'ಗಳನ್ನು ಮುದ್ರಿಸಿ ಆಮಂತ್ರಣ ಪತ್ರಿಕೆ ಒಳಗಿಟ್ಟು ತಮ್ಮ ಬಂಧು-ಬಳಗ ಸ್ನೇಹಿತರಿಗೆ ಹಂಚುವ ಮೂಲಕ ಅಳಿಲು ಸೇವೆ ಮಾಡಿದ್ದಾರೆ.

ಇಂದೇ ವಿವಾಹ: ಏ.24ರಂದು ಜೇವರ್ಗಿಯ ಭೂತಪುರ ಕಲ್ಯಾಣ ಮಂಟಪದಲ್ಲಿ ನರಿಬೋಳ್ ಅಣ್ಣಾರಾವ್ ಪಾಟೀಲ್ ಕುಟುಂಬದ ಮದುವೆ ಸಮಾರಂಭ ನಡೆಯಲಿದ್ದು, ಅಣ್ಣಾರಾವ್ ಅವರ ಪುತ್ರ, ಅಡತ್ ವರ್ತಕ ಸದಾಶಿವ ಹಾಗೂ ಕವಿತಾ ಹಸೆಮಣೆ ಏರಲಿದ್ದಾರೆ.

ತಪ್ದೆ ಮತದಾನ ಮಾಡ್ರಿ: ಸದಾಶಿವ-ಕವಿತಾ ಅವರ ‘ಮತದಾನದಲ್ಲಿ ತಪ್ಪದೆ ಪಾಲ್ಗೊಲ್ಳಿ, ಪ್ರಾಮಾಣಿಕರಿಗೆ, ನಿಷ್ಠಾವಂತರಿಗೆ, ಕ್ರಿಯಾಶೀಲರಾಗಿರುವ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ. ಒಂದುವೇಳೆ ಕಣದಲ್ಲಿರುವವರ ಪೈಕಿ ಯಾರೂ ಅಭ್ಯರ್ಥಿ ನಿಮಗೆ ಸೂಕ್ತವಲ್ಲ ಎಸಿಸಿದರೆ ‘ನೋಟಾ’ ಬಟನ್ ಒತ್ತಿ ನಿಮ್ಮ ಆಯ್ಕೆ ತಿಳಿಸಿರಿ. ಮತದಾನ ಕೇಂದ್ರಕ್ಕೆ ಮೇ 12ರಂದು ನಾವೂ ಬರುತ್ತೇವೆ, ನೀವು ಎಲ್ಲರೂ ತಪ್ಪದೆ ಬನ್ನಿ, ಮತ ಚಲಾಯಿಸಿ’ ಎಂಬ ಸಂದೇಶ ಸಾಗಿದ್ದಾರೆ. ಇದೇ ಪತ್ರದಲ್ಲಿ ವಿಭೂತಿ ಧರಿಸಿ ವೀರಶೈವರಾದೆವು, ಲಿಂಗ ಧರಿಸಿ ಲಿಂಗಾಯಿತರಾದೆವು, ವಿಭೂತಿ-ಲಿಂಗ ಧರಿಸಿ ವೀರಶೈವ-ಲಿಂಗಾಯಿತರಾದೆವು, ವೀರಶೈವ- ಲಿಂಗಾಯಿತ ಒಂದೇ ಎಂಬ ಸಂದೇಶವನ್ನೂ ಮುದ್ರಿಸಿದ್ದಾರೆ.

click me!