
ಕಲಬುರಗಿ: ಜೇವರ್ಗಿ ತಾಲೂಕಿನ ಆಂದೋಲ ಪೀಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿಗಳ ಮೇಲೆ ಇಲ್ಲಸಲ್ಲದ ಮೊಕದ್ದಮೆ ದಾಖಲಿಸಿ, ಅವರನ್ನು ಬಂಧಿಸುವ ಹುನ್ನಾರ ನಡೆಯುತ್ತಿರುವುದು ಖಂಡನೀಯ ಎಂದು ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಆಂದೋಲ ಶ್ರೀಗಳನ್ನು ಬಂಧಿಸಲು ನಡೆಯುತ್ತಿರುವ ಹುನ್ನಾರವನ್ನು ಖಂಡಿಸಿ ಹಮ್ಮಿಕೊಂಡಿದ್ದ ಸಂತರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶ ಭಕ್ತ ಹಾಗೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಶ್ರೀಗಳ ಮೇಲೆ ತೇಜೋವಧೆಯ ಅಕ್ಷಮ್ಯ ನಡೆಯಾಗಿದೆ. ಒಂದು ವೇಳೆ ಶ್ರೀಗಳನ್ನು ಬಂಧಿಸಲು ಮುಂದಾದರೆ ರಾಜ್ಯಾದ್ಯಂತ ಸಂತರು ಸಮಾಜದ ಜೊತೆ ಸೇರಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಂದೋಲಾ ಗ್ರಾಮದಲ್ಲಿ ಅಂಗಡಿ ತೆರವಿಗೆ ಸಂಬಂಧಿಸಿದಂತೆ ನಡೆದಿರುವ ಬೀದಿ ಜಗಳಕ್ಕೂ ಆಂದೋಲಾ ಶ್ರೀಗಳಿಗೂ ಯಾವುದೇ ಸಂಬಂಧವಿಲ್ಲ. ಕೆಲ ಸಂಘಟನೆಗಳು ಆಂದೋಲಾ ಶ್ರೀಗಳ ಹೆಸರಿಗೆ ಮಸಿ ಬಳಿಯುವುದಕ್ಕೆ ಇಂತಹ ಕೆಲಸ ಮಾಡುತ್ತಿದ್ದಾರೆ. ಎಫ್ಐಆರ್’ನಲ್ಲಿ ಅವರ ಹೆಸರೂ ಸಹ ಇಲ್ಲ. ಕಾನೂನು ವಿರುದ್ಧವಾಗಿ ದುರುದ್ದೇಶದಿಂದ ಬಂಧನ ಮಾಡಲು ಹೊರಟಿದ್ದಾರೆ. ಸಿದ್ದಲಿಂಗ ಶ್ರೀಗಳು ಸಮಾಜದ್ರೋಹಿ ಕೆಲಸ ಮಾಡಿದರೆ ಸಾಕ್ಷಿಗಳನ್ನು ತೋರಿಸಿ ಬಂಧನ ಮಾಡಲಿ. ಆದರೆ ಶ್ರೀಗಳ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಬಂಧನದ ಹುನ್ನಾರ ನಡೆಯುವ ಕ್ರಮ ಸರಿಯಲ್ಲ ಎಂದು ಹೇಳಿದರು.
ಶಂಕರಾಚಾರ್ಯ, ಪರಮಾನಂದ ಸ್ವಾಮೀಜಿ, ಸಿದ್ದಾನಂದ ಸ್ವಾಮೀಜಿ, ಪ್ರಶಾಂತ ಸ್ವಾಮೀಜಿ, ಪಾಂಡುರಂಗ ಮಹಾರಾಜ, ಮುನೀಂದ್ರ ಶಿವಾಚಾರ್ಯ, ಬಳಿರಾಮ ಮಹಾರಾಜ, ಸಿದ್ದಲಿಂಗ ಶ್ರೀ, ರೇವಣಸಿದ್ದ ಶಿವಾಚಾರ್ಯ ಸರಡಗಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.