
ಬೆಂಗಳೂರು : ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ನೇತೃತ್ವದ ‘ಭಾರತೀಯ ಜನಶಕ್ತಿ ಕಾಂಗ್ರೆಸ್’ ಪಕ್ಷ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ 15 ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆಗೊಳಿಸಿದೆ. ಅನುಪಮಾ ಶೆಣೈ ಉಡುಪಿಯ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ನಗರದಲ್ಲಿ ಸೋಮವಾರ ಅಭ್ಯರ್ಥಿಗಳ ಪಟ್ಟಿಬಿಡುಗಡೆಗೊಳಿಸಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಮಹಾದೇವ ಉದಗಾವಿ, ಚುನಾವಣೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಮಹಿಳೆಯರು ಹಾಗೂ ಗ್ರಾಮೀಣ ಭಾಗದ ಜನರನ್ನು ತಲುಪುವ ಉದ್ದೇಶದಿಂದ ಪಕ್ಷಕ್ಕೆ ‘ಬೆಂಡೆಕಾಯಿ’ ಚಿಹ್ನೆ ಆರಿಸಿಕೊಳ್ಳಲಾಗಿದೆ ಎಂದರು.
ಸಿಎಂ ವಾಚ್ ಕುರಿತು ಪಿಐಎಲ್: ಪಕ್ಷದ ಪ್ರಧಾನ ಕಾರ್ಯದರ್ಶಿ ಅನುಪಮಾ ಶೆಣೈ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯೂಬ್ಲೋ ವಾಚ್ ಪ್ರಕರಣ ಕುರಿತು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದೇನೆ. ಸಿದ್ದರಾಮಯ್ಯ ಅವರಿಗೆ ವಾಚ್ ನೀಡಿದ್ದ ಗಿರೀಶ್ ಚಂದ್ರವರ್ಮ ಅವರು ಉಡುಪಿ ಮೂಲದ ಬಿ.ಆರ್.ಶೆಟ್ಟಿಅವರ ಎನ್ಎಂಸಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರ್ಮ ಅವರ ಸಹಕಾರದಿಂದ ಡಾ.ಬಿ.ಆರ್.ಶೆಟ್ಟಿಅವರು ನಿಯಮಬಾಹಿರವಾಗಿ ರಾಜ್ಯ ಸರ್ಕಾರದಿಂದ ಶಿವಮೊಗ್ಗ ಮತ್ತು ಉಡುಪಿಯಲ್ಲಿ ಎರಡು ಯೋಜನೆಗಳ ಗುತ್ತಿಗೆ ಪಡೆದಿದ್ದಾರೆ ಎಂದು ಆರೋಪಿಸಿದ್ದೇನೆ. ಈ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಯಾವುದೇ ಉತ್ತರ ಬಾರದ ಕಾರಣ ಮಾ.30ರಂದು ಕೇಂದ್ರ ಸರ್ಕಾರವನ್ನೇ ಪ್ರತಿವಾದಿಯಾಗಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ ಎಂದರು.
ಅಭ್ಯರ್ಥಿಗಳ ಪಟ್ಟಿ
ಅಭಿಷೇಕ್ ಗೌಡ (ಕನಕಪುರ), ಅಶ್ವಿನಿ ದೇಸಾಯಿ (ಬೀಳಗಿ), ಲಕ್ಷ್ಮಿ ರಾಮಯ್ಯ ಶೆಟ್ಟಿ(ಕೆ.ಆರ್.ಪುರ), ರಾಕೇಶ್ ತೇಲಿ (ವಿಜಯಪುರ), ವಸೀಮ್ ಅಹಮದ್ (ಬ್ಯಾಟರಾಯನಪುರ), ಶ್ಯಾಮಸುಂದರ್ ಕುಲಕರ್ಣಿ (ಚಿತ್ರದುರ್ಗ), ಬಸವರಾಜ್ ನಾಲವಾಡದ (ಹುನಗುಂದ), ವೆಂಕಟೇಶ್ ಉಪ್ಪಾರ್ (ರಾಯಚೂರು), ಹರೀಶ್ ನಾರಾಯಣ್ (ಚಾಮರಾಜಪæೕಟೆ), ದುರ್ಗೇಶ್ ಮೇಗಲಮನಿ (ಹಾವೇರಿ), ಪ್ರವೀಣ್ ಕುಮಾರ್ (ಚಾಮುಂಡೇಶ್ವರಿ), ಸೈಫುಲ್ಲ (ವಿಜಯನಗರ), ಮಲ್ಲಿಕಾರ್ಜುನ ಚೌಹಾಣ್ (ಬಾದಾಮಿ), ರಾಘವೇಂದ್ರ (ಸಿ.ವಿ.ರಾಮನ್ ನಗರ), ಶರಣಪ್ಪ ಭೀಮಶಾ ಝಳಕಿ (ಆಳಂದ).
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.