
ಬೆಂಗಳೂರು (ಆ.07): ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸದಲ್ಲಿನ ಕಾರ್ಯಕ್ರಮಗಳ ಪಟ್ಟಿ ಸಿದ್ಧವಾಗಿದೆ. ಮೂರು ದಿನಗಳ ತಮ್ಮ ಭೇಟಿ ವೇಳೆ ಪಕ್ಷದ ಕಾರ್ಯತರ ಜೊತೆ ಸಭೆ ಮಾತ್ರವಲ್ಲದೇ ಸೋಲುಂಡ ಲೋಕಸಭಾ ಕ್ಷೇತ್ರದ ಮುಖಂಡರ ಜೊತೆಯೂ ಶಾ ಸಭೆ ನಡೆಸಲಿದ್ದಾರೆ. ಇನ್ನೂ ವಿಶೇಷ ಅಂದ್ರೆ ಪ್ರಮುಖ ಎರಡು ಮಠದ ಶ್ರೀಗಳ ಜೊತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಸಂವಾದ ನಡೆಸಲಿದ್ದಾರೆ.
ಬಿಜೆಪಿ ಚಾಣಾಕ್ಷ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಸ್ಟ್ 12 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಮೂರು ದಿನಗಳ ಕಾರ್ಯಕ್ರಮ ಪಟ್ಟಿ ಸಿದ್ಧವಾಗಿದೆ. ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಕಾರ್ಯಕ್ರಮಗಳ ಮಾಹಿತಿ ನೀಡಿದರು. 12 ನೇ ತಾರೀಖು ಬೆಳಗ್ಗೆ 10.45 ಕ್ಕೆ ಅಮಿತ್ ಶಾ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು ಅಲ್ಲಿಂದಲೇ ಕಾರ್ಯಕರ್ತರು ಶಾರಿಗೆ ಭವ್ಯ ಸ್ವಾಗತ ನೀಡಲಿದ್ದಾರೆ. ಮೂರು ದಿನಗಳ ರಾಜ್ಯ ಪ್ರವಾಸದಲ್ಲಿ ಅಮಿತ್ ಶಾ ಒಟ್ಟು 25 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಪ್ರಮುಖವಾಗಿ ಭೇಟಿಯ ಮೊದಲ ದಿನವೇ ರಾಜ್ಯ ಕೋರ್ ಕಮಿಟಿ ಮೀಟಿಂಗ್ ಶಾ ನೇತೃತ್ವದಲ್ಲಿ ನಡೆಯಲಿದೆ. ಪ್ರವಾಸದ ಎರಡನೇ ದಿನ ಪ್ರಮುಖವಾಗಿ ಆದಿಚುಂಚನಗಿರಿ ಮಠಕ್ಕೆ ಭೇಟಿ ಬಳಿಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಆಶ್ರಮಕ್ಕೂ ಶಾ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ. ಅಮಿತ್ ಶಾರ ಈ ಎರಡು ಮಠದ ಭೇಟಿ ಭಾರಿ ಕುತೂಹಲ ಮೂಡಿಸಿದೆ.
ಭೇಟಿಯ ಕೊನೆಯ ದಿನ ಸೋತ 11 ಲೋಕಸಭಾ ಕ್ಷೇತ್ರಗಳ ಮುಖಂಡರ ಜೊತೆ ಚರ್ಚಿಸಲಿದ್ದಾರೆ. ಮಾತ್ರವಲ್ಲದೇ ಈಗಾಗಲೇ ಮುಕ್ತಾಯವಾದ ವಿಸ್ತಾರರ ಜೊತೆ ಶಾ ಸಭೆ ನಡೆಸಿ ವರದಿ ಪಡೆಯಲಿದ್ದಾರೆ. ಜೊತೆಗೆ ಮುಂದಿನ ವಿಸ್ತಾರಕ ಯೋಜನೆ ಬಗ್ಗೆ ಸೂಚನೆ ನೀಡಲಿದ್ದಾರೆ. ಇನ್ನು ಹಿಂದುಳಿದ ವರ್ಗಗಳ ಮುಖಂಡರು ಸೇರಿದಂತೆ ಪರಿಶಿಷ್ಟ ಜಾತಿ ಮುಖಂಡರ ಜೊತೆ ಸಭೆ ನಡೆಸಲು ಪ್ಲಾನ್ ಸಿದ್ದವಾಗಿದೆ.
ಒಟ್ಟಿನಲ್ಲಿ ಅಮಿತ್ ಶಾರ ರಾಜ್ಯ ಭೇಟಿ ಚುನಾವಣಾ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿದೆ. ಅಲ್ಲದೇ ಈಗಾಗಲೇ ಎರಡು ಸಮೀಕ್ಷೆಗಳು ಮುಕ್ತಾಯವಾದ್ರಿಂದ, ಆ ರಿಸಲ್ಟ್ ಮೇಲೆಯೆ ಶಾ ಚುನಾವಣಾ ಪೂರ್ವ ತಯಾರಿಗೆ ಪ್ಲಾನ್ ನೀಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.