ಆಸ್ಪತ್ರೆ ಹಿಂಬಾಗಿಲಿನಿಂದ ಮನೆಗೆ ಶವ ರವಾನೆ

By Web DeskFirst Published Nov 25, 2018, 7:14 AM IST
Highlights

ರೆಬೆಲ್ ಸ್ಟಾರ್ ಅಂಬರೀಷ್ ರಾಜ್ಯದಲ್ಲಿ ಗಳಿಸಿದ ಪ್ರೀತಿ ಅಪಾರ. ರಾಜಕಾರಣಿಯಾಗಿ ಗುರುತಿಸಿಕೊಂಡರೂ ಪಕ್ಷಾತೀತವಾಗಿ ಸ್ನೇಹಿತರನ್ನು ಹೊಂದಿದ್ದರು. ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ರೆಬೆಲ್ ಸ್ಟಾರ್ ನಿಧನ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆ ಅಪಾರ ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿದರು. ಈ ಹಿನ್ನೆಲೆಯಲ್ಲಿ ಶವವನ್ನು ರವಾನಿಸಿದ್ದು ಹೀಗೆ?

ಬೆಂಗಳೂರು:ರೆಬೆಲ್‌ಸ್ಟಾರ್‌ ಅಂಬರೀಷ್‌ ಅವರ ನಿಧನದ ಸುದ್ದಿ ತಿಳಿದ ಕೆಲವೇ ಕ್ಷಣಗಳಲ್ಲಿ ವಿಕ್ರಂ ಆಸ್ಪತ್ರೆಯ ಬಳಿ ಸಾವಿರಾರು ಮಂದಿ ಅಭಿಮಾನಿಗಳು ಜಮಾಯಿಸಿದ್ದರಿಂದ ಅವರ ಆಕ್ರಂದನ ಮುಗಿಲು ಮುಟ್ಟಿದೆ.

ತಮ್ಮ ನೆಚ್ಚಿನ ನಟನ ಕಳೆದುಕೊಂಡ ಅಭಿಮಾನಿಗಳು ದೇವರಿಗೆ ಹಿಡಿಶಾಪ ಹಾಕುತ್ತಾ, ಕಣ್ಣೀರು ಸುರಿಸುತ್ತಾ ರಸ್ತೆಯಲ್ಲೇ ಮಲಗಿ ತಮ್ಮ ಆಕ್ರಂದನ ಹೊರಹಾಕಿದರು. ಸುದ್ದಿವಾಹಿನಿಗಳಲ್ಲಿ ಅಂಬರೀಷ್‌ ನಿಧನದ ಸುದ್ದಿ ತಿಳಿಯುತ್ತಲೇ ಆಸ್ಪತ್ರೆಯತ್ತ ದೌಡಾಯಿಸಿದ ಅಭಿಮಾನಿಗಳು ಅಂಬಿ ನೋಡಲು ಆಸ್ಪತ್ರೆಗೆ ನುಗ್ಗಲು ಯತ್ನಿಸಿದರು.

Live Updates: ಕಂಠೀರವ ಸ್ಟೇಡಿಯಂನಲ್ಲಿ ಅಂಬಿ ಅಂತಿಮ ದರ್ಶನ

ಆದರೆ, ಅಷ್ಟರಲ್ಲಾಗಲೇ ಅಂಬಿ ನಿಧನದ ಸುದ್ದಿ ತಿಳಿದು ಆಸ್ಪತ್ರೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೂಡ ದೌಡಾಯಿಸಿ ಆಸ್ಪತ್ರೆಯ ಮುಖ್ಯ ದ್ವಾರ​ದಲ್ಲಿ ಪೋಲೀಸರ ಬಿಗಿ ಕಾವಲು ನಿಯೋಜಿಸಲಾಗಿತ್ತು. ಅಭಿಮಾನಿಗಳನ್ನು ನಿಭಾಯಿಸುವುದು ಕಷ್ಟವಾಗುವ ಹಿನ್ನೆಲೆಯಲ್ಲಿ ಅವರನ್ನು ತಪ್ಪಿಸಿ ಪಾರ್ಥಿವ ಶರೀರವನ್ನು ಆಸ್ಪತ್ರೆಯ ಹಿಂಬದಿ ಗೇಟ್‌ನಿಂದ ವಿಶೇಷ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿ ನಿವಾಸಕ್ಕೆ ಕೊಂಡೊಯ್ಯಲಾಯಿತು. ಈ ವೇಳೆ ವಿಕ್ರಂ ಆಸ್ಪತ್ರೆ ರಸ್ತೆಯನ್ನು ಸಂಪೂರ್ಣ ಬಂದ್‌ ಮಾಡಲಾಗಿತ್ತು. ಪೊಲೀಸರು ರಸ್ತೆಯಲ್ಲಿ ನಿಂತಿದ್ದ ವಾಹನಗಳನ್ನು ಸಂಪೂರ್ಣ ತೆರವುಗೊಳಿಸಿ ಅಭಿಮಾನಿಗಳನ್ನು ನಿಭಾಯಿಸಲು ತಕ್ಷಣ ಕ್ರಮ ವಹಿಸಿದರು.

ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿಯ ಎರಡು ತುಕಡಿಗಳನ್ನು ನಿಯೋಜಿಸಲಾಗಿತ್ತು. ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌, ಪೂರ್ವ ವಲಯ ಸಂಚಾರಿ ಡಿಸಿಪಿ ಜಗದೀಶ್‌, ಕೇಂದ್ರ ಡಿಸಿಪಿ ದೇವರಾಜ್‌ ಸೇರಿದಂತೆ ನಗರ ವ್ಯಾಪ್ತಿಯ ಎಲ್ಲಾ ಡಿಸಿಪಿಗಳು ಸ್ಥಳದಲ್ಲಿ ಠಿಕಾಣಿ ಹೂಡಿ ಯಾರನ್ನೂ ಆಸ್ಪತ್ರೆಯೊಳಗೆ ಬಿಡದೆ ಬಿಗಿ ಬಂದೋಬಸ್‌್ತ ವ್ಯವಸ್ಥೆ ಕೈಗೊಂಡರು.

ಅಭಿಮಾನಿಗಳ ಆಕ್ರಂದನ ಮತ್ತಷ್ಟುಜೋರಾಗಿ, ಮತ್ತೆ ಹುಟ್ಟಿಬಾ ಅಣ್ಣ, ನಿಮ್ಮ ಬದಲು ನಮ್ಮನ್ನು ಆ ದೇವರು ಕರೆದೊಯ್ಯಬಾರದಿತ್ತೇ, ದೇವರು ನಿಜವಾಗಲೂ ಎಲ್ಲಿದ್ದಾನೆ ಎಂದು ರಸ್ತೆಯಲ್ಲೇ ನಿಂತು ದುಃಖ ತೋಡಿಕೊಂಡರು. ನಾಡಧ್ವಜ ಹಿಡಿದು ಹಾರಿಸುತ್ತಾ ಅಂಬರೀಷ್‌ ಕರ್ನಾಟಕದ ಗಂಡು ಮತ್ತೆ ಹುಟ್ಟಿಬರಬೇಕೆಂದು ದೇವರಲ್ಲಿ ಮೊರೆ ಇಡುತ್ತಿದ್ದರು. ಅಭಿಮಾನಿಗಳಲ್ಲಿ ಆಕ್ರಂದನದ ಕಿಚ್ಚು ಹೆಚ್ಚಾಗುತ್ತಿರುವುದು ಕಂಡ ಪೊಲೀಸರು, ಧ್ವನಿವರ್ಧಕಗಳ ಮೂಲಕ ಸಹಕಾರ ನೀಡುವಂತೆ, ಸಮಾಧಾನ ಮಾಡಿಕೊಳ್ಳುವಂತೆ ಮನವಿ ಮಾಡುತ್ತಿದ್ದರು.

ಅಂಬರೀಷ್ ನಿಧನದ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Close

click me!