
ನವದೆಹಲಿ[ಜ.12]: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೇಲ್ವರ್ಗ ಮೀಸಲು ದಾಳ ಉರುಳಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹಾ ಯೋಜನೆ ಜಾರಿಗೆ ಮುಂದಾಗಿದೆ. ‘ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆ’ ಜಾರಿಗೆ ತರುವ ಸಾಧ್ಯಾಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಬ್ಯಾಂಕ್ ಖಾತೆಗೆ ಮಾಸಿಕ 2500 ರು. ಹಣವನ್ನು ನೇರ ವರ್ಗಾವಣೆ ಮಾಡುವ ‘ಸಾರ್ವತ್ರಿಕ ಕನಿಷ್ಠ ಆದಾಯ’ ಯೋಜನೆಯನ್ನು ಸರ್ಕಾರ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ. ಈ ಯೋಜನೆಯ ಫಲಾನುಭವಿಗಳಾಗಿ ಆಯ್ಕೆಯಾದವರಿಗೆ ಅಡುಗೆ ಅನಿಲ, ಆಹಾರ ಸಾಮಗ್ರಿಯಂ ತಹ ಸಬ್ಸಿಡಿಗಳು ಸ್ಥಗಿತಗೊಳ್ಳುತ್ತವೆ. ಬದಲಿಗೆ ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ನೇರವಾಗಿ 2500 ರು. ಬಂದು ಬೀಳುತ್ತದೆ ಎಂದು ಮೂಲಗಳು ವಿವರಿಸಿವೆ.
ಸರ್ಕಾರ ನೀಡಲು ಉದ್ದೇಶಿಸಿರುವ ಮೊತ್ತದಲ್ಲಿ ಗ್ರಾಮೀಣ ಪ್ರದೇಶದಲ್ಲಿ 5 ಮಂದಿಯ ಕುಟುಂಬದ ಅರ್ಧದಷ್ಟು ಪೌಷ್ಟಿಕ ಅಗತ್ಯ ಈಡೇರಲಿದೆ. ನಗರ ಪ್ರದೇಶಗಳಲ್ಲಿ ಕುಟುಂಬದ 3ನೇ 1ರಷ್ಟು ಕುಟುಂಬ ಸದಸ್ಯರ ಪೌಷ್ಟಿಕಾಂಶಕ್ಕೆ ಈ ಹಣ ಸಾಕಾಗುತ್ತದೆ. 2019ರ ಏಪ್ರಿಲ್- ಜೂನ್ ಅವಧಿಯಲ್ಲಿ ಯೋಜನೆಗೆ ೩೨ ಸಾವಿರ ಕೋಟಿ ರುಪಾಯಿ ಬೇಕಾಗುತ್ತದೆ ಎಂಬ ಅಂದಾಜಿದೆ.
ದೇಶದ ಜನಸಂಖ್ಯೆಯಲ್ಲಿ ಶೇ.27.5ರಷ್ಟು ಬಡವರು ಇದ್ದಾರೆ. ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆಗೆ ಸರ್ಕಾರ ಎಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂಬುದು ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಹೆಚ್ಚುವರಿ ಸಂಪನ್ಮೂಲದ ಮೇಲೆ ಅವಲಂಬನೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಅರ್ಹ ಕುಟುಂಬಗಳಿಗೆ ಸರ್ಕಾರದ ವತಿಯಿಂದಲೇ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಆದಾಯ ರೂಪದಲ್ಲಿ ನೀಡುವುದು ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆಯ ತಿರುಳು. ವಿಶ್ವಾದ್ಯಂತ ಈ ಯೋಜನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಹಲವು ದೇಶಗಳಲ್ಲಿ ಪ್ರಾಯೋಗಿಕವಾಗಿಯೂ ಯೋಜನೆ ಜಾರಿಗೆ ಬಂದು ಸ್ಥಗಿತಗೊಳಿಸಲಾಗಿದೆ. ಸಿಕ್ಕಿಂ ಸರ್ಕಾರ ಗುರುವಾರವಷ್ಟೇ ಈ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದೆ. ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಈ ಕುರಿತು ಭರವಸೆ ನೀಡಿತ್ತು.
ಏನಿದು ಯೋಜನೆ?
ಅರ್ಹ ಬಡವರಿಗೆ ತಿಂಗಳಿಗೆ 2500 ರುಪಾಯಿ ಜಮೆ
ಈ ಹಣ ಪಡೆಯುವ ವರಿಗೆ ಆಹಾರ, ಗ್ಯಾಸ್ ಸಬ್ಸಿಡಿ ಸಿಗಲ್ಲ
2500 ರು.ನಿಂದ ಆಹಾರ, ಇಂಧನ ಖರೀದಿಸಬಹುದು
35000 ಕೋಟಿ ರುಪಾಯಿ ಈ ಯೋಜನೆ ವೆಚ
ರೈತರಿಗೆ ವರ್ಷಕ್ಕೆ 8 ಸಾವಿರ ರು.?
ರೈತರ ಸಾಲವನ್ನು ಮನ್ನಾ ಮಾಡ ಬೇಕು ಎಂಬ ಕೂಗು ಎದ್ದಿರುವಾ ಗಲೇ, ಕೆ. ಚಂದ್ರಶೇಖರ ರಾವ್ (ಕೆಸಿಆರ್) ನೇತೃತ್ವದ ತೆಲಂಗಾಣ ಸರ್ಕಾರ ಜಾರಿಗೆ ತಂದಿರುವ ‘ರೈತ ಬಂಧು’ ಯೋಜನೆಯನ್ನು ದೇಶಾ ದ್ಯಂತ ಅಳವಡಿಸಲು ಸರ್ಕಾರ ಗಂಭೀರ ಚಿಂತನೆಯಲ್ಲಿದೆ. ರೈತರಿಗೆ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಎಕರೆಗೆ ತಲಾ 4 ಸಾವಿರ ರು. ನೀಡುವ ಯೋಜನೆ ಇದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ