
ಲಂಡನ್: 6 ವರ್ಷಗಳ ಹಿಂದೆ ಕನ್ನಡತಿ ಸವಿತಾ ಹಾಲಪ್ಪನವರ್ ಸಾವನ್ನಪ್ಪಲು ಕಾರಣವಾಗಿದ್ದ, ಗರ್ಭಪಾತಕ್ಕೆ ಅನುಮತಿ ನಿರಾಕರಿ ಸುವ ಐರ್ಲೆಂಡ್ ನ ವಿವಾದಿತ ಕಾನೂನು ರದ್ದಾಗುವ ಕ್ಷಣ ಕೊನೆಗೂ ಸನ್ನಿಹಿತವಾಗಿದೆ. ಈ ಮಾರಕ ಕಾನೂನಿನ ವಿರುದ್ಧ ಐರ್ಲೆಂಡ್ ನಲ್ಲಿ ನಡೆದ ಐತಿಹಾಸಿಕ ಜನಮತಗಣನೆಯಲ್ಲಿ ಶೇ.66.4ಕ್ಕೂ ಹೆಚ್ಚು ಜನ, ಸವಿತಾ ಸಾವಿಗೆ ಕಾರಣವಾದ ಕಾನೂನು ರದ್ದುಪಡಿಸಲು ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದೊಂದಿಗೆ ಈ ಮಾರಕ ಕಾನೂನಿನ ವಿರುದ್ಧ ಇತ್ತೀಚಿನ ದಿನಗಳಲ್ಲಿ ಐರ್ಲೆಂಡ್ನಲ್ಲಿ ದೊಡ್ಡಮಟ್ಟದಲ್ಲಿ ಬೀದಿಗೆ ಇಳಿದಿದ್ದ ‘ರೋಸಾ’ ಸಂಘಟನೆಯ ‘ಯಸ್’ ಎಂಬ ಆಂದೋಲನಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಶುಕ್ರವಾರ ನಡೆದ ಜನಮತಗಣನೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು ಅದನ್ನು ಭಾರತೀಯ ಮೂಲದ ಐರ್ಲೆಂಡ್ ಪ್ರಧಾನಿ ಲಿಯೋ ವರ್ಧಾಕರ್ ಸ್ವಾಗತಿಸಿದ್ದಾರೆ. ‘ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿ ಸಿದ್ದಾರೆ.
ಆಧುನಿಕ ದೇಶಕ್ಕೆ ಆಧುನಿಕ ಸಂವಿಧಾನದ ಅಗತ್ಯವಿದೆ ಎಂಬುದನ್ನು ಅವರ ಅಭಿಪ್ರಾಯ ಹೇಳಿದೆ’ ಎಂದು ಲಿಯೋ ಹೇಳಿದ್ದಾರೆ. ಇದರೊಂದಿಗೆ ತಾಯಿಯ ಹೊಟ್ಟೆಯಲ್ಲಿ ಭ್ರೂಣ ಜೀವಂತ ಸ್ಥಿತಿಯಲ್ಲಿದ್ದರೂ, ತಾಯಿಯ ಆರೋಗ್ಯಕ್ಕೆ ತೊಂದರೆ ಇದ್ದರೆ, ಅಂಥ ಸ್ಥಿತಿಯಲ್ಲಿ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಮುಂದಿನ ದಿನಗಳಲ್ಲಿ ಸಿಗಲಿದೆ.
ನಮ್ಮ ಮಗಳ ಸಾವಿನ ನಂತರದ ಐದು ವರ್ಷಗಳ ಹೋರಾಟ ಸಂಕಟಮಯವಾಗಿತ್ತು. ಈ ಹೋರಾಟಕ್ಕೆ ಅಲ್ಲಿನ ಜನ ನೀಡಿದ ಬೆಂಬಲ ಮರೆಯಲಾಗದು. ಮಾನವೀಯ ನೆಲೆಗಟ್ಟಿನಲ್ಲಿ ಗರ್ಭಪಾತಕ್ಕೆ ಅವಕಾಶ ನೀಡುವ ಆಗ್ರಹವನ್ನು ಅಲ್ಲಿನ ಪ್ರಧಾನಿ ಜನಮತಕ್ಕೆ ಇಟ್ಟಿದ್ದು, ಅದಕ್ಕೆ ಶೇ.74ರಷ್ಟು ಮಂದಿಯಿಂದ ಬೆಂಬಲ ಸಿಕ್ಕಿದ್ದು ಸಂತಸ ತಂದಿದೆ. ಐದು ವರ್ಷಗಳ ಹೋರಾಟಕ್ಕೆ ಗೆಲುವು ಸಿಕ್ಕಿದೆ ಎಂದು ದಿ.ಸವಿತಾ ಹಾಲಪ್ಪನವರ ತಂದೆ ಅಂದಾನಪ್ಪ ಯಾಳಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.