
ಮುಂಬೈ(ಜ.05): ಹೊಸವರ್ಷದಂದು ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ ಕಾಮುಕರಿಂದ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ದೇಶಾದ್ಯಂತ ಚರ್ಚೆಗೀಡಾಗಿದೆ. ಬೆಂಗಳೂರು ಇಡೀ ದೇಶದೆದುರು ತಲೆತಗ್ಗಿಸುವಂತೆ ಮಾಡಿದ ಪ್ರಕರಣವಿದು. ಪ್ರಕರಣದಲ್ಲಿ ಕಾಮುಕ ಯುವಕರ ವರ್ತನೆಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಯುವತಿಯರದ್ದೇ ತಪ್ಪು. ತಡ ರಾತ್ರಿ ಪಾರ್ಟಿಗೆ ಹೋಗಿದ್ದು ತಪ್ಪು, ಅಲ್ಲದೇ ಅವರ ಉಡುಪು ಕೂಡಾ ಕೆಟ್ಟದಾಗಿತ್ತು ಎಂದು ಠೀಕಿಸಿದ್ದರು. ಈ ಪರ ವಿರೋಧ ಕೂಗಿನ ನಡುವೆ ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಕುರಿತಾಗಿ ನೀಡಿದ ಹೇಳಿಕೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅಕ್ಕಿ ಹೇಳಿದ್ದೇನು? ಇಲ್ಲಿದೆ ವಿವರ
ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಘಟನೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಅಕ್ಷಯ್ ಕುಮಾರ್
"ತೀರಾ ನೇರವಾಗಿ ಮಾತನಾಡುವುದಾದರೆ, ಮನದಾಳದಿಂದ ಹೇಳುವುದಾದರೆ ಇಂದು ನಾನೊಬ್ಬ ಮನುಷ್ಯ ಎನ್ನುವುದಕ್ಕೆ ನಾಚಿಕೆಯಾಗುತ್ತದೆ. ಕೆಲ ದಿನಗಳ ರಜೆಯನ್ನು ನನ್ನ ಕುಟುಂಬದೊಂದಿಗೆ ಕೇಪ್ ಟೌನ್'ನಲ್ಲಿ ಖುಷಿ ಖುಷಿಯಾಗಿ ಕಳೆದು ಮರಳಿ ಹೃದಯಪೂರ್ವಕವಾಗಿ ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಷಯಗಳನ್ನು ತಿಳಿಸಿದ್ದೆ. ಇವೆಲ್ಲದರ ಬಳಿಕ ಖುಷಿಯಿಂದ ನನ್ನ ಮಗಳನ್ನು ಎತ್ತಿಕೊಂಡು ಏರ್'ಪೋರ್ಟ್'ನಿಂದ ಹೊರಡಬೇಕು ಎನ್ನುವಷ್ಟರಲ್ಲಿ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಯ ಮೇಲೆ ನನ್ನ ದೃಷ್ಟಿ ಬಿತ್ತು. ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಕೆಲ ಜನರ ಅಸಭ್ಯ ವರ್ತನೆ ನಾನು ನೋಡಿದೆ ಅದು ಕೂಡಾ ನಡುರಸ್ತೆಯಲ್ಲಿ. ಇದನ್ನು ನೋಡಿ ನಿಮಗೆ ಏನನಿಸಿತೋ ಗೊತ್ತಿಲ್ಲ ಆದರೆ ನನ್ನ ರಕ್ತ ಕುದಿಯಿತು. ನಾನೊಬ್ಬ ಹೆಣ್ಣು ಮಗುವಿನ ತಂದೆ, ಒಂದು ವೇಳೆ ಹೀಗಿರದಿದ್ದರೂ ಮಹಿಳೆಯರಿಗೆ ಗೌರವ ನೀಡದ ಸಮಾಜಕ್ಕೆ ತಮ್ಮನ್ನು ತಾವು ನಾಗರಿಕರು ಎಂದು ಬಣ್ಣಿಸಿಕೊಳ್ಳುವ ಹಕ್ಕು ಇಲ್ಲ ಎನ್ನುತ್ತೇನೆ. ಇದಕ್ಕೂ ಹೆಚ್ಚು ನಾಚಿಕೆಗೇಡಿನ ಸಂಗತಿ ಎಂದರೆ ಯುವತಿಯರ ಮೇಲೆ ನಡೆದ ಹಿಂಸೆಯನ್ನು ಸಮರ್ಥಿಸಿಕೊಳ್ಳುವ ಮನಸ್ಥಿತಿಯವರು ನಮ್ಮ ನಡುವೆ ಇರುವುದು. ಇವರೆಲ್ಲಾ ಯುವತಿಯರು ತುಂಡುಡುಗೆ ಧರಿಸಿದ್ದೇಕೆ? ಅವರು ತಡರಾತ್ರಿ ಮನೆಯಿಂದ ಹೊರಗೆ ಹೋಗಿದ್ದೇಕೆ? ಎಂದು ಕೇಳುತ್ತಾರೆ. ಅರೆ...! ಕೊಂಚ ಮಾರ್ಯಾದೆ ಇರಲಿ, ಯುವತಿಯರು ಧರಿಸಿದ ಬಟ್ಟೆ ಸಣ್ಣದಾಗಿರಲಿಲ್ಲ. ಬದಲಾಗಿ ಹೀಗೆ ಮಾತನಾಡುವವರ ಮನಸ್ಥಿತಿ ತುಂಬಾ ಸಣ್ಣದು. ಈ ರೀತಿ ಸಮರ್ಥಿಸಿಕೊಳ್ಳುತ್ತಿರುವವರ ಮಗಳು ಇಲ್ಲವೇ ಸಹೋದರಿಗೆ ಬೆಂಗಳೂರಿನ ಯುವತಿಯರಿಗೆ ಬಂದ ಪರಿಸ್ಥಿತಿ ಎದುರಾಗಿದ್ದರೆ ಆಗ ಅವರು ಇದೇ ರೀತಿ ಪ್ರತಿಕ್ರಿಯಿಸುತ್ತಿದ್ದರಾ?. ಯುವತಿಯರೊಂದಿಗೆ ಅಶ್ಲೀಲವಾಗಿ ವರ್ತಿಸಿದವರು ಬೇರೆ ಯಾವುದೋ ಗ್ರಹದಿಂದ ಬಂದವರಲ್ಲ, ಅವರೆಲ್ಲಾ ನಮ್ಮ ಸಮಾಜದಲ್ಲಿರುವವರು ಎಂಬುವುದು ಗಮನದಲ್ಲಿರಲಿ. ನಮ್ಮ ನಿಮ್ಮಂತಹವರಂತೆ ಅವರೂ ಒಂದು ಕುಟುಂಬದ ಸದಸ್ಯರು ಇಂತಹ ನೀಚರು ನಮ್ಮ ನಡುವೆ ಓಡಾಡಿಕೊಂಡಿರುತ್ತಾರೆ. ಇನ್ನೂ ಸಮಯವಿದೆ... ಇನ್ನಾದರೂ ಸುಧಾರಿಸಿಕೊಳ್ಳಿ. ನೆನಪಿಟ್ಟುಕೊಳ್ಳಿ ಯಾವತ್ತು ಈ ದೇಶದ ಹೆಣ್ಮಗಳು ಇಂತಹ ಕಿಡಿಗೇಡಿಗಳಿಗೆ ತಿರುಗಿ ಉತ್ತರಿಸುತ್ತಾಳೋ ಆಗ ಈ ನೀಚರ ಬುದ್ಧಿ ನೆಟ್ಟಗಾಗುತ್ತದೆ, ನೆಟ್ಟಗಾಗುವುದು ಬಿಡಿ ನೀವು ನೇರವಾಗಿ ಯಮಲೋಕಕ್ಕೇ ತಲುಪುತ್ತೀರಿ.
ಇನ್ನು ಹೆಣ್ಮಕ್ಕಳಿಗೂ ನಾನು ಕೆಲ ವಿಚಾರಗಳನ್ನು ಹೇಳಬೇಕು. ನಿಮ್ಮನ್ನು ನೀವು ಯಾವತ್ತೂ ಗಂಡು ಮಕ್ಕಳಿಗಿಂತ ಕಡಿಮೆ ಎಂದು ಭಾವಿಸಬೇಡಿ. ನಿಮ್ಮನ್ನು ನೀವು ರಕ್ಷಿಸಲು ಸಂಪೂರ್ಣವಾಗಿ ಸಶಕ್ತರಾಗಬಹುದು. ಮಾರ್ಷಲ್ ಆರ್ಟ್'ನಲ್ಲಿ ಇಂತಹ ಸರಳ ಹಾಗೂ ಚಿಕ್ಕ ಪುಟ್ಟ ಟೆಕ್ನಿಕ್'ಗಳಿವೆ. ಯಾವೊಬ್ಬ ಗಂಡಸಲ್ಲೂ ನಿಮ್ಮ ಅನುಮತಿ ಇಲ್ಲದೇ ನಿಮ್ಮನ್ನು ಮುಟ್ಟುವ ಧೈರ್ಯವಿಲ್ಲ. ನೀವು ಹೆದರಬಾರದು, ನೀವು ಯಾರಿಗಿಂತಲೂ ಕಡಿಮೆಯಲ್ಲ ಆದರೆ ಯಾವತ್ತೂ ಎಚ್ಚರದಿಂದಿರಿ. ಸ್ವ ರಕ್ಷಣೆ ಮಾಡುವುದನ್ನು ಕಲಿತುಕೊಳ್ಳಿ. ಇನ್ನು ಮುಖ್ಯವಾದ ವಿಚಾರವೆಂದರೆ ಯಾವತ್ತಾದರೂ ನೀವು ಧರಿಸಿದ ಬಟ್ಟೆಯ ವಿಚಾರವಾಗಿ ಯಾರಾದರೂ ಮಾತೆತ್ತಿದರೆ ನಿಮ್ಮ ಸಲಹೆಯನ್ನು ನಿಮ್ಮ ಬಳಿಯೇ ಇಟ್ಟುಕೊಂಡು, ನಿಮ್ಮ ಕೆಲಸವನ್ನು ನೋಡಿಕೊಳ್ಳಿ ಎಂದು ಧೈರ್ಯವಾಗಿ ಹೇಳಿ. ಧನ್ಯವಾದಗಳು, ಜೈ ಹಿಂದ್" -ಅಕ್ಷಯ್ ಕುಮಾರ್, ಬಾಲಿವುಡ್ ನಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.