
ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆಗಳನ್ನು ಮಾಡಿದ ನಾಡಿನ ಮಹಿಳೆಯರನ್ನು ಗುರುತಿಸಿ, ಗೌರವಿಸಲು ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್ ಸುದ್ದಿವಾಹಿನಿ ಸ್ಥಾಪಿಸಿರುವ ಪ್ರತಿಷ್ಠಿತ ‘ಮಹಿಳಾ ಸಾಧಕಿಯರು-2018’ ಪ್ರಶಸ್ತಿಯ ದ್ವಿತೀಯ ಆವೃತ್ತಿಗೆ ಸಾಧಕರ ಆಯ್ಕೆ ಗುರುವಾರ ನಡೆಯಿತು.
ಕೃಷಿ, ಕಲೆ ಮತ್ತು ಸಂಸ್ಕೃತಿ, ಕಾರ್ಪೊರೇಟ್, ಸಾಹಿತ್ಯ, ಅಂಗವಿಕಲ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜಸೇವೆ ಮತ್ತು ಕ್ರೀಡಾಕ್ಷೇತ್ರಗಳಲ್ಲಿ ಸಾಧನೆ ಮಾಡಿದ 8 ಮಹಿಳೆಯರನ್ನು ಆರಿಸಲಾಯಿತು. ಸುಮಾರು ಎರಡೂವರೆ ತಾಸುಗಳ ಕಾಲ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಮಾಜಿ ವಿಧಾನ ಪರಿಷತ್ ಸದಸ್ಯೆ ತಾರಾ ಅನೂರಾಧಾ, ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಆಯ್ಕೆಯಾದ ಸಾಧಕಿಯರಿಗೆ ಮುಂದಿನ ತಿಂಗಳ 6ನೇ ತಾರೀಖಿನಂದು (ಅಕ್ಟೋಬರ್ 6) ಬೆಂಗಳೂರಿನ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
500ಕ್ಕೂ ಹೆಚ್ಚು ನಾಮನಿರ್ದೇಶನ: ‘ಮಹಿಳಾ ಸಾಧಕಿಯರು-2018’ ಪ್ರಶಸ್ತಿಗೆ 500ಕ್ಕೂ ಹೆಚ್ಚು ನಾಮನಿರ್ದೇಶನಗಳು ಬಂದಿದ್ದವು. ವ್ಯಕ್ತಿಗತವಾಗಿಯೂ, ಕನ್ನಡಪ್ರಭ-ಸುವರ್ಣನ್ಯೂಸ್ ವರದಿಗಾರರ ಜಾಲದ ಮುಖಾಂತರವೂ ನಾಮನಿರ್ದೇಶನಗಳನ್ನು ಮಾಡಲಾಗಿತ್ತು. ನಾಮನಿರ್ದೇಶನಗೊಂಡ ಪ್ರತಿಯೊಬ್ಬರ ಕೆಲಸ, ಸಾಧನೆಗಳನ್ನು ಪರಾಮರ್ಶಿಸಿ ಅಂತಿಮವಾಗಿ 50 ಸಾಧಕರ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಈ ಎಲ್ಲಾ 50 ಸಾಧಕರ ವಿವರವನ್ನು ತೀರ್ಪುಗಾರರ ಮುಂದೆ ಪ್ರಸ್ತುತಪಡಿಸಲಾಯಿತು. ಪ್ರತಿಯೊಬ್ಬ ಮಹಿಳೆಯ ವಿವರವನ್ನು ಕೂಲಂಕುಷವಾಗಿ ಪರಿಶೀಲಿಸಿದ ತೀರ್ಪುಗಾರರು ಅಂತಿಮವಾಗಿ 8 ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.