
ಉಳ್ಳಾಲ (ಮೇ.04): ಸಮುದ್ರ ಪಾಲಾಗುತ್ತಿದ್ದ ಬೆಂಗಳೂರು ಮೂಲದ ಆರು ಸದಸ್ಯರನ್ನು ರಕ್ಷಿಸಿದ ಘಟನೆ ಉಳ್ಳಾಲ ಮೊಗವೀರಪಟ್ಣದಲ್ಲಿ ಗುರುವಾರ ಸಂಜೆ ನಡೆದಿದ್ದು, ರಕ್ಷಣೆಯಾದವರು ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು ವಿಲ್ಸನ್ ಗಾರ್ಡನ್ ನಿವಾಸಿಗಳ ಒಂದು ತಂಡ ಉಳ್ಳಾಲ ದರ್ಗಾ ವೀಕ್ಷಣೆ ನಡೆಸಿದ ಬಳಿಕ ಉಳ್ಳಾಲ ಬೀಚ್ಗೆ ಗುರುವಾರ ಸಂಜೆಯ ವೇಳೆಗೆ ಆಗಮಿಸಿದ್ದರು. ಸಮುದ್ರದ ಬದಿಯಲ್ಲಿ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ ದೊಡ್ಡದೊಂದು ಅಲೆಗೆ ಮಗು ತಾಯಿ ಸಹಿತ ಆರು ಮಂದಿ ಕೊಚ್ಚಿ ಹೋಗಿದ್ದು, ಇತರ ಕುಟುಂಬದ ಸದಸ್ಯರು ಬೊಬ್ಬೆ ಹಾಕಿದಾಗ ಸ್ಥಳೀಯ ಜೀವರಕ್ಷಕ ಈಜುಗಾರ ಸದಸ್ಯರು ಆಗಮಿಸಿ ಸಮುದ್ರ ಪಾಲಾಗುತ್ತಿದ್ದವರನ್ನು ರಕ್ಷಿಸಿದರು.
ಈ ಸಂದರ್ಭದಲ್ಲಿ ತಾಯಿಯೊಂದಿಗೆ ಸಮುದ್ರಪಾಲಾಗುತ್ತಿದ್ದ ಒಂದು ವರ್ಷದ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಸಮುದ್ರದ ದಡಕ್ಕೆ ತರುತ್ತಿದ್ದಂತೆ ಮಗುವಿನ ಹೊಟ್ಟೆಯಲ್ಲಿದ್ದ ನೀರನ್ನು ಸ್ಥಳೀಯ ಈಜುಗಾರರು ಪ್ರಥಮ ಚಿಕಿತ್ಸೆ ನೀಡಿ ಹೊರ ತೆಗೆದಿದ್ದು, ಬಳಿಕ ಮಗು ಚೇತರಿಸಿಕೊಂಡಿತು.
ಸಮುದ್ರಪಾಲಾಗುತ್ತಿದ್ದವರನ್ನು ಮೊಗವೀರಪಟ್ಣದ ಶಿವಾಜಿ ಜೀವರಕ್ಷಕ ಮತ್ತು ಜೀವರಕ್ಷಕ ಈಜುಗಾರರ ಸಂಘದ ಸದಸ್ಯರಾದ ಜೀವನ್ ಬಂಗೇರ, ವಾಸುದೇವ ಬಂಗೇರ ಯಾನೆ ಠಾಕೂರು, ವಸಂತ ಪುತ್ರನ್, ಕೇಶವ ಪಾಂಗಳ್, ಸ್ಥಳೀಯರಾದ ಖಾಸಿಂ ಮೇಲಂಗಡಿ, ಹಸೈನಾರ್, ಚೆರಿಯೋನು ರಕ್ಷಿಸಿದರು.
ಸ್ಥಳೀಯ ಈಜುಗಾರರು ಕಳೆದ ಹಲವು ವರ್ಷಗಳಿಂದ ಸಮುದ್ರ ಪಾಲಾಗುತ್ತಿದ್ದವರನ್ನು ರಕ್ಷಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರಕ್ಷಣೆ ಮಾಡಿದವರ ವಿರುದ್ಧವೇ ಪ್ರಕರಣ ದಾಖಲಾದ ಬಳಿಕ ರಕ್ಷಣೆಗೆ ಮುಂದಾಗುತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.