ಭಗವಾನ್‌ಗೆ ಸ್ಕೆಚ್‌ ಹಾಕಿದವರು ಗೌರಿ ಕೇಸಲ್ಲಿ ಅಂದರ್‌..!

First Published Jun 1, 2018, 11:18 AM IST
Highlights

ಗೋವಾದ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಮದ್ದೂರು ತಾಲೂಕಿನ ಕೆ.ಟಿ.ನವೀನ್‌ ಕುಮಾರ್‌ಗೆ ಶಿಕಾಪುರಿಪುರದ ಪ್ರವೀಣ್‌ ಪರಿಚಯವಾಗಿದೆ. ನಂತರ ಇನ್ನುಳಿದವರು ನವೀನ್‌ ಸಂಪರ್ಕಕ್ಕೆ ಬಂದಿದ್ದಾರೆ. ತಮ್ಮ ಸೈದ್ಧಾಂತಿಕ ವಿಚಾರಧಾರೆಗೆ ವಿರೋಧಿ ನಿಲುವು ತಾಳಿರುವವರ ವಿನಾಶಕ್ಕೆ ಅವರು ಸಂಚು ರೂಪಿಸಿದ್ದರು. ಅದರಂತೆ ಗೌರಿ ಲಂಕೇಶ್‌ ಅವರ ಕುರಿತು ಮಾಹಿತಿ ಕಲೆ ಹಾಕಿದ ಆರೋಪಿಗಳು, ಬಳಿಕ ಹತ್ಯೆ ಸಂಚು ರೂಪಿಸಿದ್ದರು. ಆದರೆ ಈ ಐವರು ಆರೋಪಿಗಳು ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬೆಂಗಳೂರು[ಜೂ.01]: ಇತ್ತೀಚೆಗೆ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್‌.ಭಗವಾನ್‌ ಹತ್ಯೆ ಯತ್ನದ ಸಂಚಿನಲ್ಲಿ ಬಂಧಿತರಾಗಿದ್ದ ಆರೋಪಿಗಳು, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಕೃತ್ಯದಲ್ಲಿ ಕೂಡಾ ಪಾತ್ರವಹಿಸಿರುವುದನ್ನು ನ್ಯಾಯಾಲಯದಲ್ಲಿ ಗುರುವಾರ ಎಸ್‌ಐಟಿ ಅಧಿಕೃತಗೊಳಿಸಿದೆ.
ಇದರೊಂದಿಗೆ ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದ್ದು, ಈಗ ಕೃತ್ಯದ ಶೂಟರ್ಸ್‌ಗಳ ಪತ್ತೆಗೆ ಎಸ್‌ಐಟಿ ತನ್ನ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಭಗವಾನ್‌ ಅವರ ಕೊಲೆ ಸಂಚು ಆರೋಪದಡಿ ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್‌ ಕುಮಾರ್‌ ಅಲಿಯಾಸ್‌ ಪ್ರವೀಣ್‌ (37), ಮಹಾರಾಷ್ಟ್ರದ ಅಮೋಲ್‌ ಕಾಳೆ ಅಲಿಯಾಸ್‌ ಬಾಯ್‌ ಸಾಬ್‌ (37), ಅಮಿತ್‌ ದೆಗ್ವೇಕರ್‌ ಅಲಿಯಾಸ್‌ ಪ್ರದೀಪ್‌ (38) ಹಾಗೂ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್‌ ದುಂಡಪ್ಪ ಯಡವೆ ಅಲಿಯಾಸ್‌ ಮನೋಜ್‌ (29) ಅವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದರು. ಇದಕ್ಕೂ ಮುನ್ನ ಮದ್ದೂರು ತಾಲೂಕಿನ ಹಿಂದೂ ಪರ ಸಂಘಟನೆ ಕಾರ್ಯಕರ್ತ ಕೆ.ಟಿ.ನವೀನ್‌ ಕುಮಾರ್‌ ಬಂಧನವಾಗಿತ್ತು.
ನಗರದ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಲಯದ ಅನುಮತಿ ಪಡೆದು ಭಗವಾನ್‌ ಸಂಚು ಪ್ರಕರಣದ ಆರೋಪಿಗಳನ್ನು 11 ದಿನಗಳ ಕಾಲ ವಶಕ್ಕೆ ಪಡೆದ ಎಸ್‌ಐಟಿ, ಈ ನಾಲ್ವರನ್ನು ಗೌರಿ ಹತ್ಯೆ ಪ್ರಕರಣದಲ್ಲೂ ಸಹ ಆರೋಪಿಗಳಾಗಿದ್ದಾರೆ ಎಂದು ಘೋಷಿಸಿದೆ. ಗೌರಿ ಹತ್ಯೆ ಕೃತ್ಯದ ಸಂಚಿನಲ್ಲಿ ಮದ್ದೂರು ತಾಲೂಕಿನ ಕೆ.ಟಿ.ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆಮಂಜನ ಜೊತೆ ಈ ನಾಲ್ವರು ಪಾಲ್ಗೊಂಡಿದ್ದಾರೆ. ಈ ಆರೋಪ ಸಂಬಂಧ ಅವರ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳು ತನಿಖೆಯಲ್ಲಿ ಲಭಿಸಿವೆ. ಹೀಗಾಗಿ ಈ ಹತ್ಯೆ ಕೃತ್ಯದ ಬಹುತೇಕ ಸಂಚುಕೋರರು ಪತ್ತೆಯಾಗಿದ್ದು, ಇನ್ನುಳಿದ ಇಬ್ಬರು ಶೂಟ​ರ್ಸ್’ಗಳಿಗೆ ಹುಡುಕಾಟ ನಡೆಸಲಾಗಿದೆ. ಈ ವಿಚಾರಣೆ ವೇಳೆ ಆರೋಪಿಗಳಿಂದ ಮಾಹಿತಿ ಸಿಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಗೋವಾದ ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಮದ್ದೂರು ತಾಲೂಕಿನ ಕೆ.ಟಿ.ನವೀನ್‌ ಕುಮಾರ್‌ಗೆ ಶಿಕಾಪುರಿಪುರದ ಪ್ರವೀಣ್‌ ಪರಿಚಯವಾಗಿದೆ. ನಂತರ ಇನ್ನುಳಿದವರು ನವೀನ್‌ ಸಂಪರ್ಕಕ್ಕೆ ಬಂದಿದ್ದಾರೆ. ತಮ್ಮ ಸೈದ್ಧಾಂತಿಕ ವಿಚಾರಧಾರೆಗೆ ವಿರೋಧಿ ನಿಲುವು ತಾಳಿರುವವರ ವಿನಾಶಕ್ಕೆ ಅವರು ಸಂಚು ರೂಪಿಸಿದ್ದರು. ಅದರಂತೆ ಗೌರಿ ಲಂಕೇಶ್‌ ಅವರ ಕುರಿತು ಮಾಹಿತಿ ಕಲೆ ಹಾಕಿದ ಆರೋಪಿಗಳು, ಬಳಿಕ ಹತ್ಯೆ ಸಂಚು ರೂಪಿಸಿದ್ದರು. ಆದರೆ ಈ ಐವರು ಆರೋಪಿಗಳು ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಗೌರಿ ಅವರ ಮೇಲೆ ಗುಂಡು ಹಾರಿಸಿರುವ ವ್ಯಕ್ತಿಗಳಿಗೆ ಕಾರ್ಯಾಚರಣೆ ನಡೆಸಲಾಗಿದೆ. ಹೀಗಾಗಿ ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ ಹಾಗೂ ಗೋವಾ ಸೇರಿದಂತೆ ಮತ್ತಿರರ ಕಡೆ ತನಿಖಾ ತಂಡಗಳು ಶೋಧ ನಡೆಸಿವೆ. ಗೌರಿ ಲಂಕೇಶ್‌ ಕೊಲೆ ಪ್ರಕರಣದ ತನಿಖೆ ವೇಳೆ 40ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಚಿಂತಕ ಪ್ರೊ.ಕೆ.ಎಸ್‌.ಭಗವಾನ್‌ ಅವರ ಕೊಲೆ ಸಂಚು ಬಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!