
ನವದೆಹಲಿ(ಸೆ.16): ‘ವಿಐಪಿ ಸಂಸ್ಕೃತಿ’ ತೊರೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರು ಸಾಕಷ್ಟು ಬಾರಿ ಕರೆ ನೀಡಿದ್ದರೂ, ಅವರದ್ದೇ ಸರ್ಕಾರದಲ್ಲಿ ಈ ಹಿಂದಿನ ಸರ್ಕಾರಗಳಿಗಿಂತ ಅತಿ ಹೆಚ್ಚಿನ ಸಂಖ್ಯೆಯ ಜನರಿಗೆ ‘ವಿಐಪಿ ಭದ್ರತಾ ಸ್ಥಾನಮಾನ’ ಸಿಗುತ್ತಿದೆ ಎಂಬ ಅಚ್ಚರಿಯ ಅಂಕಿ-ಅಂಶಗಳು ಈಗ ಲಭ್ಯವಾಗಿವೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ 350 ಮಂದಿಗೆ ವಿಶೇಷ ಭದ್ರತೆ ಒದಗಿಸಲಾಗುತ್ತಿದ್ದರೆ, ಪ್ರಸ್ತುತ ಮೋದಿ ಸರ್ಕಾರದಲ್ಲಿ 475 ಮಂದಿಗೆ ‘ವಿಶೇಷ ಭದ್ರತಾ ಸ್ಥಾನಮಾನ’ ಸಿಗುತ್ತಿದೆ ಎಂಬ ವಿಷಯ ಈಗ ಗೊತ್ತಾಗಿದೆ.
ಕೇಂದ್ರ ಗೃಹ ಸಚಿವಾಲಯದ ಈ ಭದ್ರತಾ ಪಟ್ಟಿ ಈ ಹಿಂದೆಂದಿಗಿಂತಲೂ ದೊಡ್ಡದಾಗುತ್ತಿರುವ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಂತಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಪಟ್ಟಿಯನ್ನು ಪುನರ್ ಪರಿಶೀಲಿಸುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ‘ಕೆಲವರು ಎನ್'ಎಸ್'ಜಿ ಹಾಗೂ ಅರೆಸೇನೆ- ಹೀಗೆ ಎರಡೂ ದರ್ಜೆಯ ಭದ್ರತೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಅನಗತ್ಯವಾಗಿ ಭದ್ರತೆ ಪಡೆಯುತ್ತಿದ್ದಾರೆ. ಇಂಥ ಎಲ್ಲಾ ಭದ್ರತಾ ಸೌಲಭ್ಯಗಳನ್ನು ಮರುಪರಿಶೀಲಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಭದ್ರತೆ ಪಡೆವವರ ಸಂಖ್ಯೆ ಹೆಚ್ಚಳ:
35ರಿಂದ 40ರಷ್ಟು ಭದ್ರತಾ ಸಿಬ್ಬಂದಿಯನ್ನು ಸೇವೆಗೆ ನಿಯೋಜಿಸಲಾಗುವ ಝಡ್ ಪ್ಲಸ್ ಭದ್ರತೆಯನ್ನು ಈ ಹಿಂದೆ (ಯುಪಿಎ ಅವಧಿಯಲ್ಲಿ) 26 ಮಂದಿಗೆ ನೀಡಲಾಗುತಿತ್ತು, ಈಗ ಅದರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಒಟ್ಟು 140 ಹೆಚ್ಚುವರಿ ಮಂದಿಗೆ ವಿಐಪಿ ಮಾನ್ಯತೆ ನೀಡಲಾಗಿದೆ. ಎನ್ಎಸ್ಜಿ ಮತ್ತು ಸಿಆರ್ಪಿಎಫ್ ಭದ್ರತೆ ಎರಡೂ ಸೇವೆಗಳನ್ನು ಪಡೆಯುತ್ತಿರುವರ ಪಟ್ಟಿಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಉ.ಪ್ರ. ಮಾಜಿ ಸಿಎಂ ಅಖಿಲೇಶ್ ಯಾದವ್, ಛತ್ತೀಸ್ಗಢ ಸಿಎಂ ರಮಣ ಸಿಂಗ್, ಡಿಎಂಕೆ ನಾಯಕ ಎಂ. ಕರುಣಾನಿಧಿ ಸೇರಿದ್ದಾರೆ. ಇವರ ಭದ್ರತೆ ಮರುಪರಿಶೀಲನೆಯಾಗುವ ಸಾಧ್ಯತೆಯಿದೆ. ಅಧ್ಯಾತ್ಮಿಕ ಗುರುಗಳಾದ ಬಾಬಾ ರಾಮ್ ದೇವ್, ಮಾತಾ ಅಮೃತಾನಂದ ಮಯಿಗೆ 30 ಭದ್ರತಾ ಸಿಬ್ಬಂದಿಯ ಸೇವೆಯನ್ನು ಝಡ್ ದರ್ಜೆ ಭದ್ರತಾ ಶ್ರೇಣಿಯಡಿ ನೀಡಲಾಗುತ್ತಿದೆ.
ಬಿಜೆಪಿಯ ವಿವಾದಿತ ಸಂಸದ ಸಾಕ್ಷಿ ಮಹಾರಾಜ್, ರಾಮಜನ್ಮಭೂಮಿ ನ್ಯಾಸ್ ಸಮಿತಿ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್ಗೆ 11 ಮಂದಿ ಸಿಬ್ಬಂದಿಯ ವೈ ಕೆಟಗರಿ ಭದ್ರತೆ ನೀಡಲಾಗುತ್ತಿದೆ. ಗೃಹ ಸಚಿವ ರಾಜನಾಥ ಸಿಂಗ್ ಮಗ ಪಂಕಜ್ ಸಿಂಗ್, ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ಸೇರಿದಂತೆ 15 ಮಂದಿ ರಾಜಕಾರಣಿಗಳಿಗೆ ಎನ್ಎಸ್ಜಿ ಬ್ಲ್ಯಾಕ್ ಕಮಾಂಡೋಗಳು ಭದ್ರತೆ ನೀಡುತ್ತಿದ್ದಾರೆ. ಕಾಂಗ್ರೆಸ್ನ ತರುಣ್ ಗೊಗೋಯ್ ಅಸ್ಸಾಂ ಸಿಎಂ ಆಗಿದ್ದಾಗ ಎನ್ಎಸ್ಜಿ ಭದ್ರತೆ ಹಿಂಪಡೆಯಲಾಗಿತ್ತು, ಆದರೆ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸೋನೊವಾಲ್ಗೆ ಎನ್ಎಸ್ಜಿ ಭದ್ರತೆ ನೀಡಲಾಗಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ 75 ವಿವಿಐಪಿಗಳಿಗೆ ಸಿಆರ್ಪಿಎ್ ಭದ್ರತೆಯಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಸಚಿವ ಕಿರಣ್ ರಿಜಿಜು ಸಹಿತ 75 ಮಂದಿಗೆ ಸಿಐಎಸ್ಎಫ್ ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಗೆ ಝಡ್ ಕೆಟಗರಿ ಮತ್ತು ಅವರ ಪತ್ನಿ ನೀತಾ ಅಂಬಾನಿಗೆ ವೈ ಕೆಟಗರಿ ಭದ್ರತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.