
ನವದೆಹಲಿ(ಅ.01): ದೇಶೀಯ ಕಪ್ಪುಹಣ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ಆದಾಯ ಘೋಷಣೆ ಯೋಜನೆ (ಐಡಿಎಸ್ 2016) ಶುಕ್ರವಾರ ಮಧ್ಯರಾತ್ರಿ ಅಂತ್ಯವಾಗಿದ್ದು ಸುಮಾರು 25,000 ಕೋಟಿ ಕಪ್ಪು ಹಣವನ್ನು ಘೋಷಿಸಿಕೊಳ್ಳಲಾಗಿದೆ.
ಇದು ಪ್ರಾಥಮಿಕ ಅಂದಾಜು, ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರ ಆದಾಯ ಇಲಾಖೆ ಅಂಕಿ ಅಂಶಗಳನ್ನು ಪ್ರಕಟಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ನಡುವೆ, ಆದಾಯ ತೆರಿಗೆ ಇಲಾಖೆ ತಕ್ಷಣದಿಂದಲೇ ಆದಾಯ ಘೋಷಿಸಿಕೊಳ್ಳದ ಭಾರಿ ಕುಳಗಳ ಮೇಲೆ ದಾಳಿ ಆರಂಭಿಸುವ ನಿರೀಕ್ಷೆ ಇದೆ. ಇಲಾಖೆ ಈಗಾಗಲೇ ಮಾಹಿತಿ ಸಂಗ್ರಹಿಸಿದ್ದು, ದಾಳಿಗಾಗಿ ಪ್ರಾಥಮಿಕ ಸಿದ್ದತೆಯನ್ನೂ ನಡೆಸಿದೆ.
ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಆದಾಯ ಘೋಷಣೆ ಯೋಜನೆಗೆ ಕೇಂದ್ರ ಸರ್ಕಾರ ನಿರೀಕ್ಷಿಸಿದಷ್ಟು ಉತ್ತಮ ಸ್ಪಂದನೆ ವ್ಯಕ್ತವಾಗಿಲ್ಲ. ಕೇಂದ್ರ ಸುಮಾರು 60,000 ಕೋಟಿ ಆದಾಯ ನಿರೀಕ್ಷೆ ಮಾಡಿತ್ತು. ಆದರೆ, ನಿರೀಕ್ಷಿತ ಗುರಿಯ ಶೇ.50ರಷ್ಟು ಗುರಿ ಮುಟ್ಟಲು ಸಾಧ್ಯವಾಗಿದೆ.
ಐಡಿಎಸ್ 2016 ಯೋಜನೆ ಬಗ್ಗೆ ಭಾರಿಪ್ರಚಾರ ನೀಡಲಾಗಿದೆ. ಅದಕ್ಕಾಗಿ 100 ಕೋಟಿ ರುಪಾಯಿ ವಿನಿಯೋಗಿಸಲಾಗಿದೆ. ಆದಾಯ ಘೋಷಣೆ ಮಾಡಿಕೊಂಡವರ ಗೌಪ್ಯತೆ ಕಾಪಾಡುವ ಭರವಸೆ ನೀಡಲಾಗಿತ್ತು. ಘೋಷಿಸಿಕೊಂಡ ಆದಾಯದ ಮೇಲೆ ವಿಸುವ ಶೇ.45ರಷ್ಟು ದಂಡವನ್ನು ಕಂತುಗಳಲ್ಲಿ ಪಾವತಿಸುವ ಅವಕಾಶ ನೀಡಿತ್ತು. ಜತೆಜತೆಗೆ ಆದಾಯ ಘೋಷಣೆ ಮಾಡಿಕೊಳ್ಳದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತು. ಈಗ ಆದಾಯ ಇಲಾಖೆ ನಡೆಸುವ ದಾಳಿವೇಳೆ ಸಿಕ್ಕಿ ಬಿದ್ದವರಿಗೆ ದಂಡದ ಜೈಲು ಶಿಕ್ಷೆಯೂ ಗ್ಯಾರಂಟಿ.
1997ರಲ್ಲಿ ಘೋಷಿಸಿದ್ದ ಸ್ವಯಂ ಆದಾಯ ಘೋಷಣೆ ಯೋಜನೆಯಡಿ 33000ಕೋಟಿ ಕಪ್ಪು ಹಣ ಘೋಷಣೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.