
ಚಿತ್ರದುರ್ಗ(ಸೆ.23): ‘ಸುಮ್ಮನೆ ಭಾಷಣ ಮಾಡಿ ಹೋಗ್ಬೇಡಿ. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಿ. ನಾನು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಸೇರುತ್ತೇನೆ. ಇದು ನಿಮ್ಮ ಕೈಲಿ ಸಾಧ್ಯವಾ?’ ಹೀಗೆಂದು ಚಿತ್ರದುರ್ಗದ ವಿದ್ಯಾ ವಿಕಾಸ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ನಯನಾ ಜೋಗಿ ಸಚಿವ ಆಂಜನೇಯ ಅವರಿಗೆ ಸವಾಲು ಹಾಕಿದ್ದಾಳೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಹೇಳಿದ್ದಾಳೆ. ವಿದ್ಯಾರ್ಥಿನಿಯ ಸವಾಲಿಗೆ ಉತ್ತರಿಸಿದ ಸಚಿವ ಆಂಜನೇಯ, ‘ನೀನು ಕೇಳಿದ ಎಲ್ಲ ಸೌಲಭ್ಯಗಳೂ ಸರ್ಕಾರಿ ಕಾಲೇಜಿನಲ್ಲಿವೆ. ಅಲ್ಲಿಗೆ ಹೋಗಿ ಸೇರಿಕೋ’ ಎಂದು ಸಲಹೆ ನೀಡಿದ್ದಾರೆ. ಈ ಘಟನೆ ನಡೆದಿದ್ದು, ಚಿತ್ರದುರ್ಗದ ವಿದ್ಯಾವಿಕಾಸ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ.
ನಡೆದದ್ದಿಷ್ಟು:
ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಆಂಜನೇಯ, ಸರ್ಕಾರಿ ಶಾಲೆ ಗಳಿಗೆ ಸೇರು ವಂತೆ ಮನವಿ ಮಾಡಿದರು. ಸಚಿವರು ಭಾಷಣ ಮುಗಿಸಿ ಕೊಂಡು ವೇದಿಕೆಯಿಂದ ಕೆಳಗೆ ಇಳಿದು ಹೋಗುವಾಗ ಅಡ್ಡ ಹಾಕಿದ ವಿದ್ಯಾರ್ಥಿನಿ ‘ನಾನು ಪಿಯುಸಿಯ ನ್ನು ಸರ್ಕಾರಿ ಶಾಲೆಯಲ್ಲಿಯೇ ಓದಲು ಸಿದ್ಧಳಿದ್ದೇನೆ. ಅಲ್ಲಿ ಸರಿಯಾದ ಕೊಠಡಿ ಇಲ್ಲ, ಓದಲು ಸೂಕ್ತ ವಾತಾವರಣವಿಲ್ಲ. ಇಂತಹದ್ದನ್ನೆಲ್ಲ ಕಲ್ಪಿಸಿಕೊಡಿ. ಖಾಸಗಿ ಶಾಲೆಗೆ ಹೋಗುವುದು ಬಿಟ್ಟು ಅಲ್ಲಿಗೆ ಸೇರುತ್ತೇನೆ. ಜತೆಗೆ 30 ವಿದ್ಯಾರ್ಥಿಗಳನ್ನು ಸೇರಿಸುತ್ತೇನೆ.
ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ವಿಚಾರವಾಗಿ ಮನವರಿಕೆ ಮಾಡಿಕೊಟ್ಟಿದ್ದೆ. ಅದು ಈಡೇರಿಲ್ಲ’ ಎಂದು ದೂರಿದಳು. ವಿದ್ಯಾರ್ಥಿನಿಯ ಮಾತುಗಳನ್ನು ಮೌನವಾಗಿ ಆಲಿಸಿದ ಸಚಿವ ಆಂಜನೇಯ ‘ನೀನು ಕೇಳಿದ ಎಲ್ಲ ಸೌಲಭ್ಯಗಳು ಈಗ ಸರ್ಕಾರಿ ಕಾಲೇಜುಗಳಲ್ಲಿವೆ. ಅಲ್ಲಿಗೆ ಹೋಗಿ ಸೇರಿಕೋ’ ಎಂದು ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.