ಗಣರಾಜ್ಯೋತ್ಸವಕ್ಕೆ 10 ಆಸಿಯಾನ್ ಗಣ್ಯರ ಮೆರಗು

By Suvarna Web DeskFirst Published Jan 26, 2018, 8:49 AM IST
Highlights

ಇದೇ ಮೊದಲ ಬಾರಿ 10 ಆಸಿಯಾನ್ ದೇಶಗಳ ನಾಯಕರ ಸಮ್ಮುಖದಲ್ಲಿ ಶುಕ್ರವಾರ ದೇಶದ 69ನೇ ಗಣರಾಜ್ಯೋತ್ಸವ ವೈಭವದಿಂದ ನಡೆಯುತ್ತಿದೆ. ಈ ನಿಮಿತ್ತ ಮುಖ್ಯ ರಾಜಪಥದ ಸುತ್ತಮುತ್ತ ಭಾರಿ ಸರ್ಪಗಾವಲು ಏರ್ಪಡಿಸಲಾಗಿದೆ.

ನವದೆಹಲಿ: ಇದೇ ಮೊದಲ ಬಾರಿ 10 ಆಸಿಯಾನ್ ದೇಶಗಳ ನಾಯಕರ ಸಮ್ಮುಖದಲ್ಲಿ ಶುಕ್ರವಾರ ದೇಶದ 69ನೇ ಗಣರಾಜ್ಯೋತ್ಸವ ವೈಭವದಿಂದ ನಡೆಯುತ್ತಿದೆ. ಈ ನಿಮಿತ್ತ ಮುಖ್ಯ ರಾಜಪಥದ ಸುತ್ತಮುತ್ತ ಭಾರಿ ಸರ್ಪಗಾವಲು ಏರ್ಪಡಿಸಲಾಗಿದೆ.

ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರ ಸಂಘಟನೆ) ದೇಶಗಳಾದ ಥಾಯ್ಲೆಂಡ್, ಇಂಡೋನೇಷ್ಯಾ, ಸಿಂಗಾಪುರ, ಬ್ರೂನಿ, ಲಾವೋಸ್, ಮ್ಯಾನ್ಮಾರ್, ಕಾಂಬೋಡಿಯಾ, ಮಲೇಷ್ಯಾ, ಫಿಲಿಪ್ಪೀನ್ಸ್ ಹಾಗೂ ವಿಯೆಟ್ನಾಂಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.  ಈ ನಾಯಕರು ರಾಜಪಥದಲ್ಲಿ ನಡೆಯಲಿರುವ ಸೇನಾಪಡೆಗಳ ತಾಲೀಮು, ಪಥಸಂಚಲನ, ಭಾರತದ ಸೇನಾ ಶಕ್ತಿ ಪ್ರದರ್ಶನ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಅನಾವರಣಗೊಳಿಸಯವ ಸ್ತಬ್ಧಚಿತ್ರಗಳನ್ನು ವೀಕ್ಷಿಸಲಿದ್ದಾರೆ. ಪ್ರತಿ ಸಲ ವಿದೇಶದ ಓರ್ವ ಗಣ್ಯರು ಗಣರಾಜ್ಯೋತ್ಸವ ಅತಿಥಿಯಾಗಿ ಭಾರತಕ್ಕೆ ಬರುತ್ತಿದ್ದರು. ಆದರೆ ಈ ಸಲ 10 ದೇಶಗಳ ಗಣ್ಯರು ಭಾಗವಹಿಸಿದ್ದಾರೆ.

ಭಾರಿ ಭದ್ರತೆ: ಇಷ್ಟೊಂದು ಪ್ರಮಾಣದಲ್ಲಿ ಗಣ್ಯರು ಒಂದೆಡೆ ಸೇರಿರುವ ಕಾರಣ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ. ದಿಲ್ಲಿಯಾದ್ಯಂತ 50 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಹಾಗೂ ಗಗನಚುಂಬಿ ಕಟ್ಟಡಗಳಲ್ಲಿ ಆ್ಯಂಟಿ ಏರ್‌ಕ್ರಾಫ್ಟ್ ಗನ್ ಅಳವಡಿಸಲಾಗಿದೆ. ಪಥ ಸಂಚಲನದ ವೇಳೆ ವಿಮಾನ ಹಾರಾಟವನ್ನೂ ನಿರ್ಬಂಧಿಸಲಾಗಿದೆ.

ರಾಹುಲ್‌ಗೆ 4ನೇ ಸಾಲಿನಲ್ಲಿ ಆಸನ : ನವದೆಹಲಿ: ರಾಜಪಥದ ಗಣರಾಜ್ಯೋತ್ಸವದ ಪಥ ಸಂಚಲನ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಗಣ್ಯರ ಸಾಲಿನಲ್ಲಿ 4ನೇ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕೆಟ್ಟ ರಾಜಕೀಯ ಎಂದು ಹೆಸರು ಹೇಳಿಕೊಳ್ಳಲಿಚ್ಚಿಸಿದ ಕಾಂಗ್ರೆಸ್ ನಾಯಕರೊಬ್ಬರು ದೂರಿದ್ದಾರೆ.

click me!