ರಾಹುಲ್ ಗಾಂಧಿಗೆ ಬಿಗ್ ಶಾಕ್

Published : Jun 27, 2018, 11:27 AM IST
ರಾಹುಲ್ ಗಾಂಧಿಗೆ ಬಿಗ್  ಶಾಕ್

ಸಾರಾಂಶ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಇದೀಗ ಬಿಗ್ ಶಾಕ್ ಒದಗಿದೆ.  ಹೊಸ ಭರವಸೆಯಲ್ಲಿ ಇದ್ದ ಅವರ ಆಸೆಗೆ ಇದೀಗ ತಣ್ಣೀರೆರಚಿದಂತಾಗಿದೆ.  2019ಕ್ಕೆ ಮುನ್ನ ಮಹಾಮೈತ್ರಿಕೂಟ ರಚಿಸಿಕೊಂಡು ಬಿಜೆಪಿಯನ್ನು ಮಣಿಸಿ ಅಧಿಕಾರ ಗಿಟ್ಟಿಸಿಕೊಳ್ಳುವ ಹವಣಿಕೆಯಲ್ಲಿರುವ ವಿಪಕ್ಷಗಳ ಯತ್ನಕ್ಕೆ ರಾಷ್ಟ್ರವಾದಿ ಕಾಂಗ್ರೆಸ್‌ (ಎನ್‌ಸಿಪಿ) ನಾಯಕ ಶರದ್‌ ಪವಾರ್‌ ನಿರಾಸೆ ಮಾಡಿದ್ದಾರೆ. 

ಮುಂಬೈ :  2019ಕ್ಕೆ ಮುನ್ನ ಮಹಾಮೈತ್ರಿಕೂಟ ರಚಿಸಿಕೊಂಡು ಬಿಜೆಪಿಯನ್ನು ಮಣಿಸಿ ಅಧಿಕಾರ ಗಿಟ್ಟಿಸಿಕೊಳ್ಳುವ ಹವಣಿಕೆಯಲ್ಲಿರುವ ವಿಪಕ್ಷಗಳ ಯತ್ನಕ್ಕೆ ರಾಷ್ಟ್ರವಾದಿ ಕಾಂಗ್ರೆಸ್‌ (ಎನ್‌ಸಿಪಿ) ನಾಯಕ ಶರದ್‌ ಪವಾರ್‌ ತಣ್ಣೀರೆರಚಿದ್ದಾರೆ. 2019ಕ್ಕೂ ಮುನ್ನ ಮಹಾಮೈತ್ರಿಕೂಟವು ಕಾರ್ಯಸಾಧುವಲ್ಲ ಎಂದು ಪವಾರ್‌ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ವಿಪಕ್ಷಗಳÜ ಒಕ್ಕೂಟದ ನೇತೃತ್ವವಹಿಸಿಕೊಂಡು ಪ್ರಧಾನಿ ಹುದ್ದೆ ಏರುವ ಸಿದ್ಧತೆಯಲ್ಲಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಪವಾರ್‌ ಶಾಕ್‌ ನೀಡಿದ್ದಾರೆ.

ಸಿಎನ್‌ಎನ್‌ ನ್ಯೂಸ್‌-18 ಸುದ್ದಿವಾಗಿನಿಗೆ ಸಂದರ್ಶನ ನೀಡಿದ ಅವರು, ಮಾಧ್ಯಮಗಳಲ್ಲಿ ಇಂದು ಮಹಾಮೈತ್ರಿಕೂಟದ ಬಗ್ಗೆ ಸಾಕಷ್ಟುವದಂತಿಗಳು ಚರ್ಚೆಯಾಗುತ್ತಿವೆ. ಆದರೆ ಮಹಾಮೈತ್ರಿಕೂಟದ ಸಾಧ್ಯತೆಗಳಿವೆ ಎಂದು ನನಗೆ ಅನ್ನಿಸುತ್ತಿಲ್ಲ. ನನ್ನ ಅನೇಕ ಸ್ನೇಹಿತರು ಮಹಾಗಠಬಂಧನ ರಚನೆಯನ್ನು ಬಯಸುತ್ತಿದ್ದಾರೆ. ಆದರೆ ಅದು ಕಾರ್ಯಸಾಧುವಾಗುತ್ತದೆ ಎಂದು ನನಗೆ ಎನ್ನಿಸುತ್ತಿಲ್ಲ ಎಂದು ಹೇಳಿದರು.

2019ರಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿ ಹೊರಹೊಮ್ಮಲಿವೆ. ರಾಜ್ಯವಾರು ಪ್ರಬಲ ಪಕ್ಷಗಳಾದ ತೃಣಮೂಲ ಕಾಂಗ್ರೆಸ್‌, ತೆಲುಗುದೇಶಂ, ತೆಲಂಗಾಣ ರಾಷ್ಟ್ರ ಸಮಿತಿ, ಡಿಎಂಕೆ- ಇತ್ಯಾದಿಗಳು ಆಯಾ ರಾಜ್ಯಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಜನರು ಮಹಾಮೈತ್ರಿಕೂಟವನ್ನು ನೋಡಿ ಮತ ಹಾಕಲ್ಲ. ತಮ್ಮತಮ್ಮ ರಾಜ್ಯಗಳ ಪ್ರಬಲ ಪಕ್ಷಗಳನ್ನು ನೋಡಿ ಮತ ಹಾಕುತ್ತಾರೆ ಎಂದು ಪವಾರ್‌ ಮಾರ್ಮಿಕವಾಗಿ ನುಡಿದರು. ಆದರೆ ಲೋಕಸಭೆ ಚುನಾವಣೆ ಮುಗಿದ ನಂತರ ಈ ಎಲ್ಲ ನಾಯಕರು ಬಿಜೆಪಿ ವಿರುದ್ಧ ಒಟ್ಟಾಗುತ್ತಾರೆ. ಆದರೆ ಅದಕ್ಕೂ ಮುನ್ನ ಮಹಾಮೈತ್ರಿಕೂಟ ರಚನೆ ಆಗದು ಎಂದು ಪವಾರ್‌ ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಇತ್ತೀಚೆಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾದ ಬಳಿಕ ಸ್ವತಃ ಕಾಂಗ್ರೆಸ್‌ ನಾಯಕರೇ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟ ರಚಿಸುವ ಪ್ರಸ್ತಾಪ ಮಾಡಿದ್ದರು. ಆದರೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಅದಕ್ಕೆ ನಾಯಕನೊಬ್ಬನನ್ನು ಘೋಷಿಸಿದರೆ ಅದು ಪ್ರಧಾನಿಯಾಗುವ ತಮ್ಮ ಸಾಧ್ಯತೆಯನ್ನು ದೂರ ಮಾಡುತ್ತದೆ ಎಂಬುದು ಹಲವು ಪ್ರಾದೇಶಿಕ ಪಕ್ಷಗಳ ನಾಯಕರ ಅಳುಕು. ಹೀಗಾಗಿಯೇ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಈಗಾಗಲೇ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ಸಿಂಗ್‌ ಯಾದವ್‌, ಬಿಎಸ್ಪಿ ಅಧ್ಯಕ್ಷೆ ಮಾಯಾವತಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಟಿಎಸ್‌ಆರ್‌ ನಾಯಕ ಚಂದ್ರಶೇಖರರಾವ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಅದರ ಬೆನ್ನಲ್ಲೇ ಇದೀಗ ಪವಾರ್‌ ಇಂಥ ಹೇಳಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರದ ಒಪ್ಪಿಗೆ ಸಿಕ್ರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಪೂರ್ಣಕ್ಕೆ ಬದ್ಧ: ಡಿ.ಕೆ.ಶಿವಕುಮಾರ್‌
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!