ಕೆ.ಬಿ ಕೋಳಿವಾಡಗೆ ಎದುರಾಯ್ತು ಸಂಕಷ್ಟ

First Published Jun 27, 2018, 11:17 AM IST
Highlights

ಕರ್ನಾಟಕ ವಿಧಾನಸಭಾ ಸಚಿವಾಲಯದ ವಿವಿಧ ಹುದ್ದೆಗಳ ನೇರ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ನಿಯಮಗಳನ್ನು ಪಾಲಿಸದೆ ನೇಮಕ ಪ್ರಕ್ರಿಯೆ ನಡೆಸಿರುವ ಆರೋಪದ ಮೇಲೆ ವಿಧಾನಸಭೆಯ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಮತ್ತು ವಿಧಾನಸಭಾ ಕಾರ್ಯದರ್ಶಿ ಎಸ್‌. ಮೂರ್ತಿ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು : ಕರ್ನಾಟಕ ವಿಧಾನಸಭಾ ಸಚಿವಾಲಯದ ವಿವಿಧ ಹುದ್ದೆಗಳ ನೇರ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ನಿಯಮಗಳನ್ನು ಪಾಲಿಸದೆ ನೇಮಕ ಪ್ರಕ್ರಿಯೆ ನಡೆಸಿರುವ ಆರೋಪದ ಮೇಲೆ ವಿಧಾನಸಭೆಯ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಮತ್ತು ವಿಧಾನಸಭಾ ಕಾರ್ಯದರ್ಶಿ ಎಸ್‌. ಮೂರ್ತಿ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ. ಆರ್‌ಟಿಐ ಕಾರ್ಯಕರ್ತ ಪ್ರಸನ್ನಕುಮಾರ್‌ ಎಂಬುವವರು ಮಂಗಳವಾರ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸಂಜಯ್‌ ಸಹಾಯ್‌ ಅವರಿಗೆ ದೂರು ನೀಡಿದ್ದಾರೆ.

2018ರಲ್ಲಿ ವಿಧಾನಸಭಾ ಸಚಿವಾಲಯದಲ್ಲಿ 107 ಹುದ್ದೆಗಳನ್ನು ನಿಯಮಗಳನ್ನು ಪಾಲಿಸದೆ ನೇಮಕಾತಿ ಮಾಡಲಾಗಿದೆ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದೆ. ಇದಲ್ಲದೇ, 2017ರ ಫೆ.23 ರಿಂದ 25ರವರೆಗೆ ತರಾತುರಿಯಲ್ಲಿ ಸಂದರ್ಶನ ನಡೆಸಿ 191 ಮಂದಿಯನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಈ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಹುದ್ದೆಗಳನ್ನು ಸೃಷ್ಟಿಸುವಂತಿಲ್ಲ. ಆದರೆ, 2018ರ ವಿಧಾನಸಭೆ ಚುನಾವಣೆಗೆ ಒಂದು ವಾರದ ಮೊದಲು ಹೊಸದಾಗಿ 107 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ವ್ಯಾಪಕ ಭ್ರಷ್ಟಾಚಾರ ನಡೆಸಿ ನೇಮಕಾತಿ ಹಗರಣ ಮಾಡಿದ್ದಾರೆ. ಸಿಬ್ಬಂದಿಯ ಅಗತ್ಯತೆ ನೋಡಿಕೊಂಡು ನಿಯಮಾವಳಿಗಳಿಗೆ ಅನುಗುಣವಾಗಿಯೇ ನೇಮಕಾತಿ ನಡೆಯಬೇಕು. ಆದರೆ, ಇಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈಗ ನಡೆಸಿರುವ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತಕ್ಷಣವೇ ಇದನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಲಾಗಿದೆ.

ಸ್ಪೀಕರ್‌ ಅಕ್ರಮ:

ಸ್ಪೀಕರ್‌ ಆಗಿದ್ದ ಕೋಳಿವಾಡ ಅವರು ತಮ್ಮ ಪರಮಾಧಿಕಾರವನ್ನು ದುರುಪಯೋಗಪಡಿಸಿಕೊಂಡು ಅರ್ಹ ಅಭ್ಯರ್ಥಿಗಳನ್ನು ಬಿಟ್ಟು, ಹಣ ಕೊಟ್ಟಅರ್ಹರಲ್ಲದ ಅಭ್ಯರ್ಥಿಗಳಿಗೆ ಮಣೆಹಾಕಿ ಅವರನ್ನು ನೇರ ನೇಮಕಾತಿ ಮಾಡಿದ್ದಾರೆ. ನೇಮಕಾತಿಯಲ್ಲಿ ಅಕ್ರಮ ನಡೆದಿರುವುದರಿಂದ ನೇಮಕಾತಿ ಪ್ರಕ್ರಿಯೆಗೆ ತಡೆಹಿಡಿಯಬೇಕು. ವಿಧಾನಸಭಾ ಸಚಿವಾಲಯದ ಬಿ, ಸಿ ಮತ್ತು ಡಿ ದರ್ಜೆಯ 90 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದೆ. ಇದರಲ್ಲಿ ರೋಸ್ಟರ್‌ ಪದ್ಧತಿಯನ್ನು ಸರಿಯಾಗಿ ಪಾಲಿಸಿಲ್ಲದಿರುವುದು ಕಂಡು ಬಂದಿದೆ. ನಿಯಮ ಮೀರಿ ಅಗತ್ಯಕ್ಕಿಂತ ಹೆಚ್ಚುವರಿ ಹುದ್ದೆಗಳನ್ನು ಇಲ್ಲಿ ನೇಮಕ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಕೋಳಿವಾಡ, ಎಸ್‌.ಮೂರ್ತಿ, ಸ್ಪೀಕರ್‌ ವಿಶೇಷ ಅಧಿಕಾರಿಯಾಗಿದ್ದ ತಿಪ್ಪೇಸ್ವಾಮಿ ಇವರುಗಳ ವಿರುದ್ಧ ಅಧಿಕಾರ ದುರುಪಯೋಗ ನಡೆಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕರಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

click me!