ಜಂಬೂ ಸವಾರಿ ವೀಕ್ಷಕರಿಂದ ಅರಮನೆಗೆ ಪ್ಲಾಸ್ಟಿಕ್‌ ಗಿಫ್ಟ್‌..!

By Kannadaprabha NewsFirst Published Oct 10, 2019, 8:01 AM IST
Highlights

ದೇಶ ವಿದೇಶಗಳಿಂದ ದಸರಾ ನೋಡಲು ಆಗಮಿಸಿದ್ದ ಜನಜಂಗುಳಿ ಜತೆಯಲ್ಲಿಯೇ ತಂದಿದ್ದ ಬಿಸ್ಕೆಟ್‌ ಕವರ್‌, ನೀರಿನ ಬಾಟಲು, ಇನ್ನಿತರ ವಸ್ತುಗಳನ್ನು ಕೂತಲ್ಲಿಯೇ ಬಿಟ್ಟು ದಸರಾ ಮುಗಿಸಿ ಮನೆಗೆ ತೆರಳಿದ್ದಾರೆ. ಹಬ್ಬದಂತೆ ಕಂಗೊಳಿಸಿದ್ದ ಅರಮನೆ ಆವರಣ ಮಾರನೆ ದಿನವಾದ ಇಂದು ತ್ಯಾಜ್ಯಗಳಿಂದ ತುಂಬಿದ್ದ ಪ್ಲಾಸ್ಟಿಕ್‌ ವಾಸಸ್ಥಾನವಾಗಿ ಮಾರ್ಪಟ್ಟಿದೆ.

ಮೈಸೂರು(ಅ.10): ಗಾಂಧಿ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ‘ಸ್ವಚ್ಛ ಹೀ ಸೇವಾ’ ಅಭಿಯಾನ ಆರಂಭವಾದ ಮೇಲೂ ಪ್ಲಾಸ್ಟಿಕ್‌ ನರ್ತಿಸತೊಡಗಿದೆ. ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೂ ಅದರ ಉಡುಗೊರೆ ಸಾಕಷ್ಟುಸಂದಿದೆ!

ದೇಶ ವಿದೇಶಗಳಿಂದ ದಸರಾ ನೋಡಲು ಆಗಮಿಸಿದ್ದ ಜನಜಂಗುಳಿ ಜತೆಯಲ್ಲಿಯೇ ತಂದಿದ್ದ ಬಿಸ್ಕೆಟ್‌ ಕವರ್‌, ನೀರಿನ ಬಾಟಲು, ಇನ್ನಿತರ ವಸ್ತುಗಳನ್ನು ಕೂತಲ್ಲಿಯೇ ಬಿಟ್ಟು ದಸರಾ ಮುಗಿಸಿ ಮನೆಗೆ ತೆರಳಿದ್ದಾರೆ. ಹಬ್ಬದಂತೆ ಕಂಗೊಳಿಸಿದ್ದ ಅರಮನೆ ಆವರಣ ಮಾರನೆ ದಿನವಾದ ಇಂದು ತ್ಯಾಜ್ಯಗಳಿಂದ ತುಂಬಿದ್ದ ಪ್ಲಾಸ್ಟಿಕ್‌ ವಾಸಸ್ಥಾನವಾಗಿ ಮಾರ್ಪಟ್ಟಿತ್ತು.

ಪೊಲೀಸರ ಕ್ಷಮೆ ಕೇಳಿದ ಸಂಸದ ಪ್ರತಾಪ್ ಸಿಂಹ, ಯಾವ ವಿಚಾರ?

ಇಂತಹ ವಾತಾವರಣ ಪ್ರತಿ ವರ್ಷ ದಸರಾ ಮುಗಿದ ಮಾರನೆ ದಿನ ಕಾಣಿಸಿಕೊಂಡರೂ, ಇವತ್ತಿಗೂ ಜನರಲ್ಲಿ ಮಾತ್ರ ಸ್ವಚ್ಛತೆಯ ಅರಿವು ಬಾರದಿರುವುದು ಎದ್ದು ಕಾಣುತ್ತಿತ್ತು. ಅಷ್ಟೇ ಅಲ್ಲ ಆಡಳಿತರೂಢ ಬಿಜೆಪಿ ಸರ್ಕಾರ ಕೂಡ ಮುನ್ನಚ್ಚರಿಕೆಯಾಗಿ ಪ್ಲಾಸ್ಟಿಕ್‌ ನಿಷೇಧಕ್ಕೆ ಯಾವುದೇ ಕ್ರಮ ಕೈಗೊಳ್ಳದಿದ್ದದ್ದೂ ಬಹಿರಂಂಗವಾಗಿದೆ.

ತಕ್ಷಣ ಫೀಲ್ಡಿಗಿಳಿದ ಪೌರಕಾರ್ಮಿಕರು:

ದಸರಾ ಹಬ್ಬ ನಡೆಯುವವರೆಗೂ ಎಲ್ಲರಿಗೂ ಸಂಭ್ರಮವಾದರೆ, ಹಬ್ಬ ಆದ ನಂತರ ದಿನ ಪೌರಕಾರ್ಮಿಕರಿಗೆ ಶ್ರಮ ಸಂಭ್ರಮವಾಗಿದೆ. ಕಳೆದ 9 ದಿನಗಳೂ ಅವಿರತವಾಗಿ ದುಡಿದಿದ್ದ ಪೌರಕಾರ್ಮಿಕರು ದಸರಾ ಮುಗಿದ ಮಾರನೆ ದಿನವಾದ ಬುಧವಾರ ಬೆಳಗ್ಗೆಯೇ ಕಾಯಕ ಆರಂಭಿಸಿದರು. ಊರ ಜನರು ದಸರಾ ಹಬ್ಬ ಮುಗಿಸಿ ವಿರಾಮಕ್ಕೆ ಒರಗಿದ್ದರೆ ಪೌರಕಾರ್ಮಿಕರು ಮಾತ್ರ ತಮ್ಮ ವಿರಾಮವನ್ನೂ ಲೆಕ್ಕಿಸದೆ ನಗರದ ಸ್ವಚ್ಛತೆಯ ಕಾಪಾಡಲು ತಮ್ಮ ಕೈಂಕರ್ಯ ಆರಂಭಿಸಿದರು.

ಫೋಟೋ ಫ್ಲ್ಯಾಶ್‌ಗೆ ಬೆದರಿದ ಅಂಬಾರಿ ಹೊತ್ತಿದ್ದ ಅರ್ಜುನ!

ಅಂಬಾ ವಿಲಾಸ ಅರಮನೆ ಆವರಣದಲ್ಲಿ ರಾಶಿಗೊಂಡಿದ್ದ ಕಸವನ್ನು ವಿಲೇವಾರಿ ಮಾಡಿ ಎಂದಿನಂತೆ ಅರಮನೆ ಆವರಣ ಸ್ವಚ್ಛವಾಗಿಡಲು ತಮ್ಮ ಶ್ರಮದಾನ ವ್ಯಯಿಸಿದುರ. ನಗರಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿಯೇ ನಿಂತು ಪೌರಕಾರ್ಮಿಕರಿಗೆ ಸಲಹೆ ಸೂಚನೆ ನೀಡಿ ಸ್ವಚ್ಛ ಕಾಣುವಂತೆ ಮಾಡಿದರು.

ಕಾಣಿಸಿಕೊಳ್ಳದ ಎನ್‌ಜಿಒಗಳು!

ಇಷ್ಟುದಿನ ಸ್ವಚ್ಛತಾ ಅಭಿಯಾನದಲ್ಲಿ ಪೊರಕೆ ಹಿಡಿದು ಫೋಟೋಗಳಿಗಾಗಿ ಪೋಸು ನೀಡುತ್ತಿದ್ದ ಎನ್‌ಜಿಒ (ಸರ್ಕಾರೇತರ ಸಂಸ್ಥೆಗಳು) ಅರಮನೆ ಆವರಣದಲ್ಲಿ ಬಿದ್ದಿದ್ದ ಕಸದ ರಾಶಿ ವಿಲೇವಾರಿಗೊಳಿಸಲು ತಿರುಗಿಯೂ ನೋಡದ ಪ್ರಸಂಗ ನಡೆದಿದೆ. ಅಷ್ಟರ ಮಟ್ಟಿಗೆ ಎನ್‌ಜಿಒಗಳು ಸ್ವಚ್ಛತಾ ಅಭಿಯಾನದ ಬದ್ಧತೆ ಕಾಪಾಡಿಕೊಂಡು ಬಂದಿವೆ!

ನನ್ನ ಕಾರಣದಿಂದಾಗಿ ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದ ಅನರ್ಹ ಶಾಸಕ

ತಾವು ಸ್ವಚ್ಛತಾ ರೂವಾರಿಗಳೆನಿಸಿಕೊಂಡ ಮುಖಂಡರೂ ಕೂಡ ತಾವು ನಡೆಸುವ ಸಂಸ್ಥೆಗಳ ಸ್ವಯಂ ಸೇವಕರನ್ನಾಗಲಿ ಅಥವಾ ಪ್ರವಾಸೋದ್ಯಮ ಜಪ ಮಾಡುವ ಇನ್ನಿತರ ‘ಪ್ರಚಾರ ವ್ಯಕ್ತಿಗಳು’ ಕಸದತ್ತ ತಿರುಗಿಯೂ ಬಾರದ ತಾತ್ಸಾರಕ್ಕೆ ಒಳಗಾಗಿದ್ದಾರೆ. ಎಂದಿದ್ದರೂ ಪೌರಕಾರ್ಮಿಕರೇ ಮುಖ್ಯವೆಂಬುದು ಮತ್ತೊಮ್ಮೆ ಸಾಬೀತಾಗಿದೆ.

-ಉತ್ತನಹಳ್ಳಿ ಮಹದೇವ

click me!