ಬಿಜೆಪಿ ಸೇರಲ್ಲ, ಸೇರೋದಾದ್ರೆ ಮಾಧ್ಯಮಕ್ಕೆ ಹೇಳಿಯೇ ಸೇರ್ತೇನೆ ಎಂದ್ರು ಸುಮಲತಾ

By Kannadaprabha NewsFirst Published Oct 10, 2019, 10:19 AM IST
Highlights

ಬಿಜೆಪಿಗೆ ಸೇರೋದಾದ್ರೆ ಮಾಧ್ಯಮಕ್ಕೆ ಹೇಳಿಯೇ ಸೇರುತ್ತೇನೆ, ಸದ್ಯ ಬಿಜೆಪಿಗೆ ಸೇರಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಬುಧವಾರ ಬೆಳಗ್ಗೆಯಿಂದ ಕೇಳಿಬರುತ್ತಿದ್ದ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ವದಂತಿಗೆ ಸ್ವತಃ ಸಂಸದೆಯೇ ತೆರೆ ಎಳೆದಿದ್ದಾರೆ.

ಮಂಡ್ಯ(ಅ.10): ಬುಧವಾರ ಬೆಳಗ್ಗೆಯಿಂದ ಕೇಳಿಬರುತ್ತಿದ್ದ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ವದಂತಿಗೆ ಸ್ವತಃ ಸಂಸದೆಯೇ ತೆರೆ ಎಳೆದಿದ್ದಾರೆ.

ನಾನು ಬಿಜೆಪಿ ಸೇರುವುದಾದರೆ ಗೌಪ್ಯತೆ ಕಾಪಾಡಲು ಸಾಧ್ಯವೇ? ಆಂತಹ ವಿಚಾರವೇನಾದರೂ ಇದ್ದರೆ ಮೊದಲು ಮಾಧ್ಯಮದವರ ಮುಂದೆ ನಿರ್ಧಾರ ಪ್ರಕಟಿಸಿ, ಬಳಿಕ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಸಂಸದೆ ಸುಮಲತಾ ಬುಧವಾರ ಸ್ಪಷ್ಟಪಡಿಸಿದರು.

ಅಚ್ಚರಿಗೆ ಕಾರಣವಾದ ಸುಮಲತಾ ನಡೆ : ಬಿಜೆಪಿ ಸೇರುತ್ತಾರಾ ಸುಮಲತಾ?

ಮಂಡ್ಯ ಬಿಜೆಪಿ ಕಚೇರಿಗೆ ಆಗಮಿಸಿ ಬಿಜೆಪಿ ಜಿಲ್ಲಾ ಕೋರ್‌ ಕಮಿಟಿ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಸಭೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ, ವದಂತಿಗಳಿಗೆ ಕಿವಿಗೊಡಬೇಡಿ. ನಂಗೆ ಜಿಲ್ಲಾ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಚುನಾವಣೆಯಲ್ಲಿ ಸಾಕಷ್ಟುಸಹಾಯ ಮಾಡಿದ್ದಾರೆ. ಗೆಲುವಿಗೆ ಅವರುಗಳೂ ನೆರವಾಗಿದ್ದಾರೆ. ಹೀಗಾಗಿ ನಾನು ಬಿಜೆಪಿ ಸಭೆಗೆ ಬಂದು ಕೃತಜ್ಞತೆ ಹೇಳಿದ್ದೇನೆ. ಇದರ ಹೊರತು ಬೇರೆ ಯಾವುದೇ ರಾಜಕೀಯ ಬೆಳವಣಿಗೆಗಳು ಇಲ್ಲ ಎಂದು ಹೇಳಿದರು.

ಟೀಕಿಸಿದವರಿಗೆ ಮಾತಿನೇಟು

ಸಂಸದೆ ಸುಮಲತಾ ಫಾರಿನ್‌ ಟೂರ್‌ ಇನ್ನೂ ಮುಗಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀರಾ ವ್ಯಂಗ್ಯವಾಗಿ ಟೀಕಿಸಿದ್ದು ನನ್ನ ಗಮನಕ್ಕೆ ಬಂದಿದೆ. ಹೊರ ದೇಶಕ್ಕೆ ಹೋದವರು ಯಾರು? ಅಲ್ಲಿ ಹೇಗಿದ್ದರು ಎಂಬುದು ಫೋಟೋ ಸಾಕ್ಷಿ ಸಮೇತ ರಿಲೀಸ್‌ ಆಗಿದೆ. ಜನರಿಗೆ ಯಾರು ಏನು ಎಂಬುದು ಗೊತ್ತಾಗಿದೆ. ವ್ಯಕ್ತಿಗತ ಟೀಕೆ ಬೇಡ ಎಂದರು. ಈವರೆಗೂ ಕಾಂಗ್ರೆಸ್‌- ಬಿಜೆಪಿ ಸೇರಿದಂತೆ ಯಾವ ಪಕ್ಷದವರೂ ನನ್ನನ್ನು ಆಹ್ವಾನಿಸಿಲ್ಲ. ಕೇಂದ್ರದಲ್ಲಿ 330 ಮಂದಿ ಬಿಜೆಪಿ ಸಂಸದರಿದ್ದಾರೆ. ಸಾಕಷ್ಟುಬಹುಮತ ಇದೆ. ನನ್ನ ಅಗತ್ಯ ಬಿಜೆಪಿಗೆ ಖಂಡಿತಾ ಇಲ್ಲ ಎಂದರು.

ಮಂಡ್ಯ ಮಳೆಗೆ ಕುಸಿಯುತ್ತಿರುವ ಮನೆಗಳು

ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆ ನಿನ್ನೆ, ಮೊನ್ನೆಯದಲ್ಲ ಹಿಂದಿನಿಂದಲೂ ಇದ್ದೇ ಇದೆ. ಈ ಹಿಂದೆ ಅಧಿಕಾರದಲ್ಲಿದ್ದವರ ನಿರ್ಲಕ್ಷದಿಂದ ಕಬ್ಬು ಬೆಳೆಗಾರರು ಇಂದು ಬೀದಿಗೆ ಬಂದಿದ್ದಾರೆ. ಸಮಸ್ಯೆಗೆ ಸಿಲುಕಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಗೆದ್ದವರು ಏನು ಮಾಡಿಲ್ಲ ಎಂದು ಟೀಕೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಜೋಡೆತ್ತುಗಳು ಎಲ್ಲಿ ಹೋದರು ಎಂಬ ಎಲ್‌ಆರ್‌ಎಸ್‌ ಟೀಕೆ ಪ್ರತಿಕ್ರಿಯೆ ನೀಡಿದ ಸಂಸದೆ, ಜಿಲ್ಲೆಯಲ್ಲಿ ಜೆಡಿಎಸ್‌ನ 8 ಮಂದಿ ಶಾಸಕರಿದ್ದಾರೆ. ಅಧಿಕಾರದಲ್ಲಿರುವ ಶಾಸಕರನ್ನು ಒತ್ತಾಯಿಸುವ ಬದಲು ಜೋಡೆತ್ತುಗಳ ಮೇಲೆ ಏಕೆ ಟೀಕೆ ಮಾಡುತ್ತಾರೆ?. ನಾನು ಒಬ್ಬಳು ಗೆದ್ದ ಮೇಲೆ ಉಳಿದವರ ಜವಾವ್ದಾರಿ ಮುಗಿದಿದೆಯೇ ಹೋಯಿತೆ? 8 ಮಂದಿ ಶಾಸಕರ ಸೌಲಭ್ಯಗಳು ಕಡಿತವಾಗಿವೆಯೇ ಎಂದು ಖಾರವಾಗಿ ಪ್ರಶ್ನೆ ಮಾಡಿದರು.

ಆಟೋ ಡ್ರೈವರ್ ಕೊಲೆ ಮಾಡಿ ಜಮೀನಿಗೆ ಎಸೆದು ಪರಾರಿ

ಇದು ರಾಜಕಾರಣಿಗಳ ರಾಜಕೀಯ ಆಟ ಅಷ್ಟೆ. ಈಗಿನ ಸಿಎಂ ಸಂಸದರ ಸಭೆ ಕರೆದಾಗ ರೈತರ ಪರ ಮೊದಲು ಧ್ವನಿ ಎತ್ತಿದ್ದು ನಾನು. ನಾವೆಲ್ಲರೂ ಸೇರಿ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗೋಣ ಎಂದರು. ಮೀಡಿಯಾ ಮುಂದೆ, ಸ್ಟುಡಿಯೋದಲ್ಲಿ ಕುಳಿತು ವೇದಿಕೆ ಸಿಕ್ಕಿದೆ ಅಂತ ಮಾತನಾಡುವುದಲ್ಲ. ರೈತರ ಬಳಿ ತೆರಳಿ ವಾಸ್ತವ ಸ್ಥಿತಿ ಅರಿಯಬೇಕು. ಆಗ ಮಾತ್ರ ನಿಮ್ಮ ಧ್ವನಿಗಳಿಗೆ ಬೆಲೆ ಸಿಗುತ್ತೆ. ಪಕ್ಷ ರಾಜಕಾರಣದಿಂದ ರೈತರಿಗೆ ತೊಂದರೆ ಆಗಬಾರದು ಎಂದು ಶಿವರಾಮೇಗೌಡರಿಗೆ ಸುಮಲತಾ ತಿರುಗೇಟು ನೀಡಿದರು.

ಕಾಂಗ್ರೆಸ್‌ ಅಲ್ಲ, ಕಾರ‍್ಯಕರ್ತರು ಬೆಂಬಲಿಸಿದ್ದು

ಸಿದ್ದರಾಮಯ್ಯ ಬೆಂಬಲದಿಂದ ಸುಮಲತಾ ಗೆಲುವು ಸಾಧಿಸಿದರು ಎಂದು ಜೆಡಿಎಸ್‌ನವರು ನೇರ ಆರೋಪ ಮಾಡಿದ್ದಾರೆ. ಜೆಡಿಎಸ್‌- ಕಾಂಗ್ರೆಸ್‌ನ ರಾಜಕೀಯಕ್ಕೆ ನನ್ನನ್ನು ಎಳೆದು ತರಬೇಡಿ. ನನಗೆ ಕಾಂಗ್ರೆಸ್‌ ಪಕ್ಷ ಯಾವುದೇ ಸಪೋರ್ಟ್‌ ಮಾಡಿಲ್ಲ. ನನ್ನನ್ನು ಬೆಂಬಲಿಸಿದ್ದು ಕಾಂಗ್ರೆಸ್‌ ಕಾರ್ಯಕರ್ತರು. ಅವರಿಗೆ ಈಗಾಗಲೇ ಹಲವಾರು ವೇದಿಕೆಗಳಲ್ಲಿ ಕೃತಜ್ಞತೆ ಹೇಳಿದ್ದೇನೆ. ಈಗ ಬಿಜೆಪಿ ನಾಯಕರಿಗೂ ಹಾಗೂ ಕಾರ್ಯಕರ್ತರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.

ಮಂಡ್ಯ: ಜಿಲ್ಲಾದ್ಯಂತ ಮಳೆ, ಜಮೀನು, ರಸ್ತೆ ಜಲಾವೃತ

click me!