‘ಮನಸ್ಸಲ್ಲಿ ನೋವಿದ್ದರೂ ನಿವೃತ್ತಿ ಪಡೆಯಲ್ಲ’

By Kannadaprabha NewsFirst Published Oct 15, 2019, 10:33 AM IST
Highlights

ನನ್ನ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಸಹ ನಾನು ರಾಜಕೀಯದಲ್ಲಿ ಮುಂದುವರಿಯುತ್ತೇನೆ ಎಂದು ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. 

ಮಂಡ್ಯ [ಅ.15]:  ನಾನು ರಾಜಕೀಯ ನಿವೃತ್ತಿ ಪಡೆಯಲಾರೆ. ನನ್ನ ಮನಸ್ಸಿನಲ್ಲಿ ನೋವು ಎಷ್ಟೇ ಇದ್ದರೂ ಸಮಸ್ಯೆಗಳನ್ನು ಹೇಳಿಕೊಂಡು ಬರುವ ಜನರಿಗೆ ಪರಿಹಾರ ಕೊಡುವ ಸಲುವಾಗಿ ನಾನು ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ  ಹೇಳಿದರು.

ಪಾಂಡವಪುರ ತಾಲೂಕಿನ ಮಹದೇಶ್ವರ ಪುರ ಗ್ರಾಮದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತಮಾಡಿದ ಕುಮಾರಸ್ವಾಮಿ, ಅಧಿಕಾರದ ಸಹವಾಸವೇ ಸಾಕು. ಬಿಟ್ಟು ಬಿಡಬೇಕು, ರಾಜಕೀಯ ಬೇಡ ಎಂಬ ನಿರ್ಧಾರಕ್ಕೆ ಬಂದವನು. ಆದರೆ ಹಲವಾರು ಜನರು ಸಮಸ್ಯೆಗಳನ್ನು ಹೊತ್ತು ಕೊಂಡು ನನ್ನ ಬಳಿ ಬರುತ್ತಾರೆ. ಇಂತಹವರಿಗಾಗಿ ನನ್ನ ಮನಸ್ಸಲ್ಲಿ ನೋವು ಎಷ್ಟೇ ಇದ್ದರೂ ಅನಿವಾರ್ಯವಾಗಿ ನಾನು ರಾಜಕೀಯದಲ್ಲಿ ಮುಂದುವರೆಯಬೇಕಾಗಿದೆ ಎಂದರು.

ಕೇವಲ 14 ತಿಂಗಳ ಅಧಿಕಾರ ಅವಧಿಯಲ್ಲಿ 25 ಸಾವಿರ ಕೋಟಿ ಹಣವನ್ನು ರೈತರ ಸಾಲ ಮನ್ನಾಕ್ಕೆ ಬಳಕೆ ಮಾಡಿದ್ದೇನೆ. ಮೈತ್ರಿ ಸರ್ಕಾರ ಮಂಡ್ಯದಲ್ಲೇ 95 ಸಾವಿರ ಕುಟುಂಬಗಳಿಗೆ ಸಾಲಮನ್ನಾ ಮಾಡಿದೆ. ಮೇಲುಕೋಟೆ ಕ್ಷೇತ್ರದಲ್ಲೇ 12 ಸಾವಿರ ಕುಟುಂಬಗಳ ಸಾಲ ಮನ್ನಾ ಆಗಿದೆ. ಉತ್ತರ ಕರ್ನಾಟಕದ 3 ಲಕ್ಷ ಕುಟುಂಬಗಳಿಗೆ ಸಾಲಮನ್ನಾದ ಲಾಭ ಸಿಕ್ಕಿದೆ ಎಂದು ವಿವರಣೆ ನೀಡಿದರು.

ನಾನು ಇಷ್ಟೆಲ್ಲಾ ಮಾಡಿದರೂ ಉತ್ತರ ಕರ್ನಾಟಕದ ಜನ ನನಗೆ ಮತ ನೀಡ್ತಾರೋ ಇಲ್ವೋ ಅದು ಮುಖ್ಯಅಲ್ಲ. ನನಗೆ ಅಧಿಕಾರ ಮುಖ್ಯ ಅಲ್ಲ, ಜನರ ಪ್ರೀತಿ ಮುಖ್ಯ. ಅದಕ್ಕಾಗಿ ಯಾವುದೇ ಭಾಗದ ಜನ ಎಂದು ವಿಂಗಡನೆ ಮಾಡಿದೇ ಸಮಗ್ರ ರಾಜ್ಯದ ದೃಷ್ಟಿಕೋನದಿಂದ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾರಾಯಣಗೌಡರಿಗೆ ಟಾಂಗ್‌:  1800 ಕೋಟಿ ರು. ಮೇಲುಕೋಟೆಗೆ ಕೊಟ್ಟು ಕೆ.ಆರ್‌.ಪೇಟೆಗೆ ಒಂದು ರು.ಅನುದಾನ ಕೊಟ್ಟಿಲ್ಲ ಎಂದ ನಾರಾಯಣಗೌಡರು ಹೇಳಿದ್ದಾರೆ. ಕೆ.ಆರ್‌.ಪೇಟೆಗೂ ಕೂಡ 1 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಅವರು ಯಾವ ಬಾಯಲ್ಲಿ ಕೊಟ್ಟಿಲ್ಲ ಅಂತಾರೋ ಗೊತ್ತಿಲ್ಲ ಎಂದು ನಾರಾಯಣಗೌಡರಿಗೆ ತಿರುಗೇಟು ನೀಡಿದರು.

ನನ್ನನ್ನ ಮನೆಗೆ ಕಳುಹಿಸಿದ್ದೀರಿ, ನೀವು ಕೊಟ್ಟಅಧಿಕಾರ ನೀವೆ ಕಿತ್ತುಕೊಂಡಿದ್ದೀರಿ.. ಈಗ ಕಬ್ಬು ಬೆಳೆಗಾರರ ಸಮಸ್ಯೆಗೆ ನಾನು ಹೊಣೆ ಅಂದ್ರೆ ಹೇಗೆ ಪಾಂಡವಪುರ ಕಾರ್ಖಾನೆ ಮುಚ್ಚಲು ಯಾರು ಕಾರಣ..? ರೈತಸಂಘದವರು ನಾಟಕ ಆಡಿಕೊಂಡು ಕಾರ್ಖಾನೆ ಮುಚ್ಚುವ ಹಾಗೇ ಮಾಡಿದರು.

ಹೊಸ ಕಾರ್ಖಾನೆ ಆರಂಭಿಸಿಲು ತೀರ್ಮಾನಿಸಿದ್ರೆ ನನ್ನನ್ನೇ ಅಧಿಕಾರದಿಂದ ಕೆಳಗೆ ಇಳಿಸಿದರು. ನೆರೆ ಸಂತ್ರಸ್ತರಿಗೆ ರಾಜ್ಯದಿಂದಲೇ ನೆರವು ಕೊಡಬಹುದು ಎಂದು ಸಿಎಂಗೆ ಸಲಹೆ ನೀಡಿದ್ದೆ. ನಾನು ರೈತರ ಸಾಲಮನ್ನಾಕ್ಕೆ ಹಣ ಹೊಂದಿಸಿದ ರೀತಿ ನೆರೆ ಸಂತ್ರಸ್ತರಿಗೂ ಪರಿಹಾರ ಕೊಡಲು 10-15ಸಾವಿರ ಕೋಟಿ ಹೊಂದಿಸಬಹುದು. ಈ ವಿಚಾರದಲ್ಲಿ ನಾವು ನಿಮಗೆ ಬೆಂಬಲ ನೀಡುತ್ತೇವೆ. ಆದರೆ ಯಡಿಯೂರಪ್ಪನವರಿಗೆ ನಮ್ಮ ಚಿಂತನೆ ಅಗತ್ಯವಿಲ್ಲ ಎಂದು ಕಾಣುತ್ತದೆ ಎಂದು ವ್ಯಂಗ್ಯವಾಗಿ ಹೇಳಿದರು.

ಐಟಿ ದಾಳಿ ಅನುಮಾನ ಹುಟ್ಟಿಸುತ್ತಿದೆ: ಈ ದೇಶದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿ ಐಟಿ ಇಲಾಖೆ ಇದೆ. ಅವರಿಗೆ ಬಂದ ಮಾಹಿತಿ- ದಾಖಲೆಯ ಮೇಲೆ ಪರಿಶೀಲನೆ ಮಾಡೋದು ಸಹಜ. ಆದರೆ ಆಯ್ದ ವ್ಯಕ್ತಿಗಳ ಮೇಲೆ ದಾಳಿ ಮಾಡುತ್ತಿರೋದು ಅನುಮಾನ ಮೂಡಿಸಿದೆ. ವಿರೋಧಿಗಳನ್ನು ಅವರ ಕಂಟ್ರೋಲ್‌ಗೆ ತೆಗೆದುಕೊಳ್ಳಲು ಈ ರೀತಿ ಕೆಲಸವಾಗುತ್ತಿದೆ ಎಂದು ಪರಮೇಶ್ವರ ನಿವಾಸದ ಮೇಲಿನ ಐಟಿ ದಾಳಿಗೆ ಪ್ರತಿಕ್ರಿಯೆ ನೀಡಿದರು.

click me!