ಕೊಪ್ಪಳದ ಇಂದಿರಾ ಕ್ಯಾಂಟೀನ್‌ಗೆ 1 ವರ್ಷ: ಹಸಿವು ನೀಗಿಸಿಕೊಂಡ 5 ಲಕ್ಷ ಜನ

By Web DeskFirst Published Nov 3, 2019, 8:48 AM IST
Highlights

ಇಂದಿರಾ ಕ್ಯಾಂಟೀನ್‌ನಲ್ಲಿ 5 ಲಕ್ಷ ಜನರಿಗೆ ಊಟ, ಉಪಾಹಾರ| ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಪಾಲಿಗಂತೂ ಇಂದಿರಾ ಕ್ಯಾಂಟೀನ್ ದೇವರೇ ತೆರೆದಿರುವ ಪ್ರಸಾದ ನಿಲಯದಂತೆ ಆಗಿದೆ| ಬಹುತೇಕ ಇಲ್ಲಿಯೇ ಹಸಿವು ಇಂಗಿಸಿಕೊಂಡು ನಿತ್ಯವೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ| ದುಡಿಯಲು ಬರುವ ಕಾರ್ಮಿಕರು ಹಾಗೂ ಓದಲು ಬರುವ ವಿದ್ಯಾರ್ಥಿಗಳಿಗೆ ಆಹಾರಕ್ಕೆ ಇದುವೆ ಆಸರೆಯಾಗಿದೆ| ಲಕ್ಷಾಂತರ ಜನರ ಹಸಿವು ನೀಗಸಿದೆ|

ಸೋಮರಡ್ಡಿ ಅಳವಂಡಿ

ಕೊಪ್ಪಳ[ನ.3]: ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿರುವ ಏಕೈಕ ಇಂದಿರಾ ಕ್ಯಾಂಟೀನನಲ್ಲಿ ವರ್ಷವೊಂದರಲ್ಲಿ ಉಂಡವರ ಸಂಖ್ಯೆ ಬರೋಬ್ಬರಿ 5 ಲಕ್ಷ! ಇನ್ನು ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಿದ್ದರೆ ಈ ಸಂಖ್ಯೆ ಹತ್ತು ಲಕ್ಷವಾಗುತ್ತಿತ್ತು. ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಪಾಲಿಗಂತೂ ಇಂದಿರಾ ಕ್ಯಾಂಟೀನ್ ದೇವರೇ ತೆರೆದಿರುವ ಪ್ರಸಾದ ನಿಲಯದಂತೆ ಆಗಿದೆ. ಬಹುತೇಕ ಇಲ್ಲಿಯೇ ಹಸಿವು ಇಂಗಿಸಿಕೊಂಡು ನಿತ್ಯವೂ ನೆಮ್ಮದಿಯ ಜೀವನನ ಡೆಸುತ್ತಿದ್ದಾರೆ. ದುಡಿಯಲು ಬರುವ ಕಾರ್ಮಿಕರು ಹಾಗೂ ಓದಲು ಬರುವ ವಿದ್ಯಾರ್ಥಿಗಳಿಗೆ ಆಹಾರಕ್ಕೆ ಇದುವೆ ಆಸರೆಯಾಗಿದೆ. ಲಕ್ಷಾಂತರ ಜನರ ಹಸಿವು ನೀಗಸಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತದೆ. 

ಬರೋಬ್ಬರಿ ಒಂದು ವರ್ಷ: 

ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಶಾಸಕರ ಮಾದರಿ ಶಾಲೆಯ ಕಾಂಪ್ಲೆಕ್ಸ್‌ನಲ್ಲಿ 2018 ನ.1 ರಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ್ದರು. ಅಂದಿನಿಂದ ಇಂದಿನವರೆಗೆ ಬರೋಬ್ಬರಿ ಒಂದು ವರ್ಷಕ್ಕೆ ಸರಿಸುಮಾರು 5 ಲಕ್ಷಕ್ಕೂ ಅಧಿಕ ಜನರು ಹಸಿವು ನೀಗಿಸಿಕೊಂಡಿದ್ದಾರೆ. ಬೆಳಗ್ಗೆ ಉಪಾಹಾರಕ್ಕೆ 450-500 ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಇದೇ ಸಂಖ್ಯೆಯಲ್ಲಿಆಗಮಿಸುತ್ತಾರೆ. ಈ ಕ್ಯಾಂಟಿನಿನ ಗರಿಷ್ಠ ಸಂಖ್ಯೆಯೂ ಒಂದು ಬಾರಿಗೆ 500 ಆಗುತ್ತದೆ. ಹೀಗೆ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಜನರು ಉಪಹಾರ ಮತ್ತು ಊಟ ಸ್ವೀಕಾರ ಮಾಡಿದ್ದಾರೆ.

ಬೇಡಿಕೆ ಇದೆ: 

ಇಂದಿರಾ ಕ್ಯಾಂಟೀನ್ ಬೇಡಿಕೆ ಇನ್ನೂ ಇದೆ. ಈಗ ನಿಗದಿ ಮಾಡಿರುವ ಗರಿಷ್ಠ ಸಂಖ್ಯೆಯಿಂದ ಅನೇಕರು ಉಪಾಹಾರ ಮತ್ತು ಊಟ ಸಿಗದೆ ವಾಪಸ್ಸಾಗುತ್ತಾರೆ. ನಿತ್ಯವೂ ಬೆಳಗ್ಗೆ ಉಪಹಾರಕ್ಕೆ 500-600 ಕ್ಕೂ ಅಧಿಕ ಜನರು ಆಗಮಿಸುತ್ತಾರೆ. ಆದರೆ, ಇಲ್ಲಿ ಗರಿಷ್ಠ ಸಂಖ್ಯೆ ನಿಗದಿ ಮಾಡಿರುವುದರಿಂದ ಮೊದಲ ಬಂದವರಿಗೆ ಸಿಗುತ್ತದೆಯೇ ಹೊರತು ಎಲ್ಲರಿಗೂ ಸಿಗುವುದಿಲ್ಲ. ಹೀಗಾಗಿ, ಇದರ ಗರಿಷ್ಠ ಮಿತಿ ಸಂಖ್ಯೆಯನ್ನು ತೆಗೆದು ಹಾಕಬೇಕು ಹಾಗೂ ಇತರ ಕಡೆಯೂ ಇಂತಹ ಕ್ಯಾಂಟೀನ್‌ ತೆರೆಯಬೇಕು ಎನ್ನುವ ಒತ್ತಾಯವೂ ಇದೆ. ಬೆಳಗ್ಗೆಯೇ ನಗರಕ್ಕೆ ಬರುವ ಕಾರ್ಮಿಕರಿಗೆ ಮನೆಯಲ್ಲಿಊಟ ಮಾಡಿ ಬರಲು ಸಮಸ್ಯೆಯಾಗುತ್ತಿತ್ತು. ಆದರೆ, ಈಗ ಇಂದಿರಾ ಕ್ಯಾಂಟೀನ್ ಇರುವುದರಿಂದ ನೇರವಾಗಿ ಅಲ್ಲಿಗೆ ಬಂದು ಉಪಾಹಾರ ಮಾಡುತ್ತಾರೆ. 

ಜಿಲ್ಲಾ ಕೇಂದ್ರಕ್ಕೆ ಏನೋ ಕೆಲಸದ ನಿಮಿತ್ತ ಆಗಮಿಸುವ ಬಡವರು ಮಧ್ಯಾಹ್ನ ಊಟಕ್ಕೆ ಇಂದಿರಾ ಕ್ಯಾಂಟೀನ್‌ ನೆಚ್ಚಿಕೊಂಡಿದ್ದಾರೆ. ಉಪಾಹಾರಕ್ಕೆ 5, ಊಟಕ್ಕೆ ಕೇವಲ 10 ಮಾತ್ರ. ಗರಿಷ್ಠ ಸಂಖ್ಯೆಯ ಮಿತಿಯನ್ನು ಹೆಚ್ಚಿಸಬೇಕು. ಹೆಚ್ಚಿನ ಜನರಿಗೆ ಊಟ, ಉಪಾಹಾರದ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ. ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ, ಇನ್ನು ಕೆಲವು ಕಡೆ ಶುರುವಾಗಬೇಕು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಂದಿರಾ ಕ್ಯಾಂಟೀನ್ ನಿಜಕ್ಕೂ ಬಡವರ ಪಾಲಿಗೆ ವರ ಇದ್ದಂತೆ. ಹಸಿದು ಬಂದವರಿಗೆ ಕಡಿಮೆ ದರದಲ್ಲಿ ಉಪಾಹಾರ ಮತ್ತುಊಟ ನೀಡಲಾಗುತ್ತದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಡವರ ಹಸಿವು ನೀಗಿಸುವುದಕ್ಕಾಗಿಯೇ ಇವುಗಳನ್ನು ತೆರೆದಿದ್ದರು. 
ಕೊಪ್ಪಳ ಒಂದೇ ಕ್ಯಾಂಟೀನಿನಲ್ಲೇ 5 ಲಕ್ಷ ಊಟ, ಉಪಹಾರ ಬಳಕೆಯಾಗಿರುವುದು ನಿಜಕ್ಕೂ ಗ್ರೇಟ್ ಎಂದು  ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹೇಳಿದ್ದಾರೆ.  

ಕೊಪ್ಪಳ ಇಂದಿರಾ ಕ್ಯಾಂಟೀನ್ ಅನೇಕ ಕಾರ್ಮಿಕರ ಮತ್ತು ವಿದ್ಯಾರ್ಥಿಗಳ ಹಸಿವು ನೀಗಿಸಿದೆ. ಇದರ ಸಂಖ್ಯೆಯನ್ನು ಹೆಚ್ಚಳ ಮಾಡಿ ಬೇರೆ ಬೇರೆ ಕಡೆ ಇನ್ನು ತೆರೆಯಬೇಕು ಎಂದು ಕೊಪ್ಪಳ  ನಗರಸಭೆಯ ಮಾಜಿ ಸದಸ್ಯ ಮಾನ್ವಿ ಪಾಷಾ ಅವರು ತಿಳಿಸಿದ್ದಾರೆ. 

click me!