ಕುಡಿಯುವ ನೀರನ್ನ ಅಕ್ರಮವಾಗಿ ಜಮೀನಿಗೆ ಹರಿಸಿಕೊಂಡ ರೈತರು.. ಕೊಪ್ಪಳದಲ್ಲಿ ಅಸಲಿಗೆ ಆಗಿದ್ದೇನು?

Published : Jul 31, 2026, 10:10 AM IST
Farmers Accused Of Illegally Diverting Canal Water In Dasanala, Gangavathi

ಸಾರಾಂಶ

ಗಂಗಾವತಿ ತಾಲೂಕಿನ ಬಸಾಪಟ್ಟಣ, ಹಿರೇಬೆಣಕಲ್ ಹಾಗೂ ದಾಸನಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೀರು ಹರಿಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಡಿಸ್ಟ್ರುಬ್ಯೂಟರ್ (Distributor) 14, 15, 16 ಮತ್ತು 17 ರಲ್ಲಿ ರೈತರು ಮುಖ್ಯ ಕಾಲುವೆಯಿಂದ (Main Canal) ಸಣ್ಣ ಕಾಲುವೆಗಳು ಹಾಗೂ ಉಪ-ಕಾಲುವೆಗಳ ಮೂಲಕ ಜಮೀನುಗಳಿಗೆ ಅಕ್ರಮವಾಗಿ ನೀರನ್ನು ಹರಿಸಿಕೊಳ್ಳುತ್ತಿದ್ದಾರೆ.

ಗಂಗಾವತಿ: ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜನರ ಕುಡಿಯುವ ನೀರಿಗಾಗಿ ಮೀಸಲಿಟ್ಟಿದ್ದ ಕಾಲುವೆ ನೀರನ್ನು ಕೆಲವು ರೈತರು ಅಕ್ರಮವಾಗಿ ತಮ್ಮ ಜಮೀನುಗಳಿಗೆ ಹರಿಸಿಕೊಳ್ಳುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶವಿದ್ದಾಗ್ಯೂ, ಗಂಗಾವತಿ ತಾಲೂಕಿನ ದಾಸನಾಳ ಸೇರಿದಂತೆ ಹಲವೆಡೆ ರಾಜಾರೋಷವಾಗಿ ಅಕ್ರಮ ನೀರು ಬಳಕೆ ನಡೆಯುತ್ತಿದೆ. ಆದರೂ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಕುಡಿಯುವ ನೀರಿಗಾಗಿ ಬಿಟ್ಟಿದ್ದ ನೀರು ಕೃಷಿಗೆ ಬಳಕೆ!

ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೊಂದರೆ ನೀಗಿಸಲು ತುಂಗಭದ್ರಾ ಎಡದಂಡೆ ಕಾಲುವೆಗೆ (TLBC) ನೀರು ಹರಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ರೈತರು ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ಅಥವಾ ಜಮೀನುಗಳಿಗೆ ಬಳಸಬಾರದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಕೆಲವು ರೈತರು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ.

ಎಲ್ಲೆಲ್ಲಿ ನಡೆಯುತ್ತಿದೆ ಅಕ್ರಮ?

ಗಂಗಾವತಿ ತಾಲೂಕಿನ ಬಸಾಪಟ್ಟಣ, ಹಿರೇಬೆಣಕಲ್ ಹಾಗೂ ದಾಸನಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೀರು ಹರಿಸಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಡಿಸ್ಟ್ರುಬ್ಯೂಟರ್ (Distributor) 14, 15, 16 ಮತ್ತು 17 ರಲ್ಲಿ ರೈತರು ಮುಖ್ಯ ಕಾಲುವೆಯಿಂದ (Main Canal) ಸಣ್ಣ ಕಾಲುವೆಗಳು ಹಾಗೂ ಉಪ-ಕಾಲುವೆಗಳ ಮೂಲಕ ಜಮೀನುಗಳಿಗೆ ಅಕ್ರಮವಾಗಿ ನೀರನ್ನು ಹರಿಸಿಕೊಳ್ಳುತ್ತಿದ್ದಾರೆ.

ಅಧಿಕಾರಿಗಳ ಶಾಮೀಲು ಶಂಕೆ?

ಹಲವು ಗ್ರಾಮಗಳಲ್ಲಿ ಬಹಿರಂಗವಾಗಿಯೇ ಅಕ್ರಮವಾಗಿ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದರೂ, ಸಂಬಂಧಪಟ್ಟ ನೀರಾವರಿ ಇಲಾಖೆ ಹಾಗೂ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಅಕ್ರಮ ಕೃತ್ಯಕ್ಕೆ ಅಧಿಕಾರಿಗಳೇ ರೈತರೊಂದಿಗೆ ಶಾಮೀಲಾಗಿದ್ದಾರೆಯೇ ಎಂಬ ದಟ್ಟ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಭೀತಿ ಇದ್ದರೂ, ಜವಾಬ್ದಾರಿಯುತ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಕ್ಷಣವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಕ್ರಮವಾಗಿ ನೀರು ಹರಿಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕುಡಿಯುವ ನೀರನ್ನು ರಕ್ಷಿಸಬೇಕು ಎಂದು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಜನತೆ ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಸಚಿವ ಸಂಪುಟ ಕಸರತ್ತಿನಲ್ಲಿ ನೀರಾವರಿ ಯೋಜನೆ ನಿರ್ಲಕ್ಷ: ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪ
ವಿಜಯನಗರ ಕಾಲುವೆಗೆ ನೀರು ಬಿಡುಗಡೆಗೆ ರೈತರ ಹೋರಾಟ: ಜುಲೈ 31ರಂದು ತುಂಗಭದ್ರಾ ಜಲಾಶಯಕ್ಕೆ ಮುತ್ತಿಗೆ