ಮಡಿಕೇರಿ: ಹಿಂದೂಪರ ಸಂಘಟನೆಗಳ ಹತ್ತಿಕ್ಕಲು ಇಲ್ಲಸಲ್ಲದ ಕೇಸ್ : ವಕೀಲರ ಅಸಮಾಧಾನ

By Suvarna NewsFirst Published Feb 7, 2023, 9:39 PM IST
Highlights

ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಹತ್ತಿಕ್ಕಲು ಪೊಲೀಸರು ಇಲ್ಲ ಸಲ್ಲದ ಸುಳ್ಳು ಕೇಸುಗಳನ್ನು ದಾಖಲಿಸಿದ್ದಾರೆ ಎಂದು ವಕೀಲ ಮೋಹನ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು: ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಹತ್ತಿಕ್ಕಲು ಪೊಲೀಸರು ಇಲ್ಲ ಸಲ್ಲದ ಸುಳ್ಳು ಕೇಸುಗಳನ್ನು ದಾಖಲಿಸಿದ್ದಾರೆ ಎಂದು ವಕೀಲ ಮೋಹನ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಮ್ಯುನಲ್ ಗೂಂಡಾ ಕಾಯ್ದೆಯಡಿ (Communal Goon Act) ಮಡಿಕೇರಿಯ ನಿವಾಸಿಗಳಾದ ಹಿಂದೂಪರ ಸಂಘಟನೆಗಳ ಇಬ್ಬರು ಮುಖಂಡರನ್ನು ಗಡಿಪಾರು ಮಾಡಲು ಎಸಿ ಕೋರ್ಟಿಗೆ ವರದಿ ನೀಡಿರುವ ಕೊಡಗು ಪೊಲೀಸರು ಎರಡು ಬಾರಿಯ ಕೋರ್ಟ್ ವಿಚಾರಣೆಯಲ್ಲೂ ನಮ್ಮ ಕಕ್ಷಿದಾರರ ವಿರುದ್ಧ ಗಡಿಪಾರು ಮಾಡಲು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ ಎಂದು ಪೊಲೀಸರ ವಿರುದ್ಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಪರ ವಕೀಲ ಮೋಹನ್ ಕುಮಾರ್ (Mohan Kumar) ಅಸಮಾಧಾನ ವ್ಯಕ್ತಪಡಿಸಿದರು.

ಫೆಬ್ರವರಿ ಎರಡರಂದು ಇಬ್ಬರ ಪರವಾಗಿ ವಕೀಲ ಮೋಹನ್ ಕುಮಾರ್ ಕೋರ್ಟಿಗೆ ಹಾಜರಾಗಿ ವಕಲಾತ್ತು ವಹಿಸಿದ್ದರು. ನಂತರ ಎಸಿ ಕೋರ್ಟಿನಲ್ಲಿ ನ್ಯಾಯಾಧೀಶರಾದ ಯತೀಶ್ ಉಳ್ಳಾಲ್ ಅವರು ಫೆಬ್ರವರಿ 7 ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದ್ದರು. ಮಂಗಳವಾರ ತಮ್ಮ ವಕೀಲರೊಂದಿಗೆ ಹಿಂದೂ ಯುವ ವಾಹಿನಿಯ (Hindu Yuva vahini) ಜಿಲ್ಲಾ ಸಂಚಾಲಕ ವಿನಯ್ (Vinay) ಮತ್ತು ಮಡಿಕೇರಿ ನಗರಸಭೆಯ ನಾಮನಿರ್ದೇಶಿತ ಬಿಜೆಪಿ ಸದಸ್ಯ ಕವನ್ ಕಾವೇರಪ್ಪ (Kavan kaverappa) ಅವರು ಕೋರ್ಟಿಗೆ ಹಾಜರಾಗಿ ಅಬ್ಜೆಕ್ಷನ್ ಸಲ್ಲಿಸಿದರು. ಆದರೆ ಪೊಲೀಸರು ಮಂಗಳವಾರವೂ ಹಿಂದೂಪರ ಸಂಘಟನೆಗಳ ಇಬ್ಬರನ್ನು ಗಡಿಪಾರು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಲ್ಲಿಸಲಿಲ್ಲ. 

Udupi: ಸಂಕಷ್ಟದಲ್ಲಿದ್ದ ಕಾರ್ಯಕರ್ತನಿಗೆ ಮನೆ ನಿರ್ಮಿಸಿಕೊಟ್ಟ ಹಿಂದೂ ಸಂಘಟನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಬ್ಜೆಕ್ಷನ್ ಸಲ್ಲಿಸಲು ವಕೀಲರೊಂದಿಗೆ ವಿನಯ್ ಮತ್ತು ಕವನ್ ಕಾವೇರಪ್ಪ ಇಬ್ಬರೂ ಹಾಜರಾಗಿದ್ದರೂ ಕೂಡ ಪೊಲೀಸರೇ ಸರಿಯಾದ ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದ ಎಸಿ ಕೋರ್ಟ್ ಪುನಃ ಫೆಬ್ರವರಿ 28 ಕ್ಕೆ ವಿಚಾರಣೆ ಮುಂದೂಡಿದೆ. ಹಿಂದೂ ಯುವವಾಹಿನಿ ಜಿಲ್ಲಾ ಸಂಚಾಲಕ ವಿನಯ್ ಮತ್ತು ಮಡಿಕೇರಿ ನಗರಸಭೆ ನಾಮನಿರ್ದೇಶಿತ ಬಿಜೆಪಿ ಸದಸ್ಯ ಕವನ್ ಕಾವೇರಪ್ಪ ವಿರುದ್ಧ ಚುನಾವಣೆ ಸಮೀಪಿಸುತ್ತಿರುವುದರಿಂದ ಗಡಿಪಾರು ಮಾಡುವಂತೆ ಮಡಿಕೇರಿ ನಗರ ಪೊಲೀಸರು ಎಸಿ ಕೋರ್ಟಿಗೆ ವರದಿ ನೀಡಿದ್ದರು. ಹೀಗಾಗಿ ಯಾಕೆ ಗಡಿಪಾರು ಮಾಡಬಾರದು ಎಂಬುದನ್ನು ತಿಳಿಸಿ ಎಂದು ಕಾರಣ ಕೇಳಿ ಫೆಬ್ರವರಿ ಎರಡರಂದು ಎಸಿ ಕೋರ್ಟ್‌ಗೆ ಹಾಜರಾಗುವಂತೆ ಕೊಡಗು ಎಸಿ ಕೋರ್ಟ್ ನೋಟಿಸ್ ನೀಡಿತ್ತು. 

ಮಂಗಳವಾರ ಕೋರ್ಟ್‌ಗೆ ಹಾಜರಾದ ಬಳಿಕ ಪೊಲೀಸರು ಸರಿಯಾದ ದಾಖಲೆಗಳನ್ನು ಸಲ್ಲಿಸಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಕೀಲ ಮೋಹನ್ ಕುಮಾರ್ ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಗಡಿಪಾರಿಗೆ ಪೊಲೀಸರು ಕೋರ್ಟಿಗೆ ವರದಿ ನೀಡಿದ್ದಾರೆ. ವಿನಯ್ ಮತ್ತು ಕವನ್ ಕಾವೇರಪ್ಪ ಅವರು ಯಾವುದೇ ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿಲ್ಲ. ಅವರ ವಿರುದ್ಧ ಪ್ರಕರಣಗಳನ್ನು ಈ ಹಿಂದೆ ನ್ಯಾಯಾಲಯವೇ ಖುಲಾಸೆಗೊಳಿಸಿದೆ. ಹೀಗಿದ್ದರೂ ಕಮ್ಯುನಲ್ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದರ ಹಿಂದೆ ಯಾರದ್ದೋ ಕೈವಾಡವಿದೆ. ಯಾರೋ ಪೊಲೀಸರಿಗೆ ಒತ್ತಡ ಹಾಕಿ ಹೀಗೆ ಮಾಡಿಸುತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 

ಹಿಂದೂ ಸಂಘಟನೆಗಳ ಎಚ್ಚರಿಕೆಗೆ ಬೆದರಿ ಬಣ್ಣ ಬದಲಿಸಿದ ರೈಲ್ವೇ ಇಲಾಖೆ!

ಚುನಾವಣೆ ಸಂದರ್ಭ ಗಲಾಟೆ ಮಾಡುತ್ತಾರೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಾರೆ ಎನ್ನುವ ಸುಳ್ಳು ವರದಿಗಳನ್ನು ನೀಡಿದ್ದಾರೆ. ಆದರೆ ಇಬ್ಬರ ಮೇಲೆ ಇದ್ದ ಪ್ರಕರಣಗಳನ್ನು ಈ ಹಿಂದೆ ನ್ಯಾಯಾಲಯವೇ ಖುಲಾಸೆಗೊಳಿಸಿದೆ. ಆದರೂ ಮತ್ತೆ ಪ್ರಕರಣ ದಾಖಲಿಸಿರುವುದರ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಫೆಬ್ರವರಿ 28 ಕ್ಕೆ ಮತ್ತೆ ವಿಚಾರಣೆ ಇದ್ದು ಆಗಲಾದರೂ ಪೊಲೀಸರು ಸೂಕ್ತ ದಾಖಲೆಗಳನ್ನು ಸಲ್ಲಿಸುತ್ತಾರಾ ಕಾದು ನೋಡಬೇಕಾಗಿದೆ.

click me!