ಯುವ ದಸರಾ ಕಾರ್ಯಕ್ರಮ : ರಂಗು ರಂಗಿನ ಸಂಭ್ರಮ

By Kannadaprabha NewsFirst Published Oct 21, 2023, 8:53 AM IST
Highlights

ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕರಾದ ಸಲೀಂ- ಸುಲೈಮಾನ್ ಜೋಡಿಯ ಸಂಗೀತ ಗಾಯನದ ಮೋಡಿ..., ಕನ್ನಡದ ಆಲ್ ಓಕೆ ರ್ಯಾಪ್ ಗಾಯನ..., ರೂಪದರ್ಶಿಯರ ಕ್ಯಾಟ್ ವಾಕ್ ಫ್ಯಾಷನ್ ಶೋಗೆ ನೆರೆದಿದ್ದ ಯುವಸಮೂಹ ಮನಸೋತವು.

 ಬಿ. ಶೇಖರ್ ಗೋಪಿನಾಥಂ

  ಮೈಸೂರು :  ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕರಾದ ಸಲೀಂ- ಸುಲೈಮಾನ್ ಜೋಡಿಯ ಸಂಗೀತ ಗಾಯನದ ಮೋಡಿ..., ಕನ್ನಡದ ಆಲ್ ಓಕೆ ರ್ಯಾಪ್ ಗಾಯನ..., ರೂಪದರ್ಶಿಯರ ಕ್ಯಾಟ್ ವಾಕ್ ಫ್ಯಾಷನ್ ಶೋಗೆ ನೆರೆದಿದ್ದ ಯುವಸಮೂಹ ಮನಸೋತವು.

ದಸರಾ ಮಹೋತ್ಸವ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಯುವ ದಸರಾ ಕಾರ್ಯಕ್ರಮದ 3ನೇ ದಿನದಾ ಶುಕ್ರವಾರ ಯುವ ಮನಸ್ಸುಗಳ ಸಂಭ್ರಮಕ್ಕೆ ಅಡ್ಡಿ ಇಲ್ಲದಷ್ಟು ರಂಗು ರಂಗಿನ ಕಾರ್ಯಕ್ರಮಗಳು ಜರುಗಿದವು. ನಟಿ ಮತ್ತು ನಿರೂಪಕಿ ಅನುಶ್ರೀ ಅವರ ನಿರೂಪಣೆ, ಮಾತುಗಾರಿಕೆಯು ಒಂದಷ್ಟು ಮನರಂಜನೆ ಒದಗಿಸಿತು.

ರ್ಯಾಪರ್ ಆಲ್ ಓಕೆ (ಅಲೋಕ್) ಅವರು ಹಾಡಿದ ನಾವು ಲಾಸ್ಟ್ ಬೆಂಚು ಬಾಯ್ಸ್, ಕನಕದಾಸರ ನಾನಲ್ಲ ನನ್ನದಲ್ಲ, ಯಾಕ್ ಹಿಂಗೆ ಮಗಾ, ಡೋಂಟ್ ವರಿ, ಆರ್ ಸಿಬಿ ತಂಡದ ಹಾಡನ್ನು ರ್ಯಾಪ್ ಮಿಶ್ರಿತವಾಗಿ ಹಾಡಿ ರಸದೌತಣ ನೀಡಿದರು. ಡಾ. ಪುನೀತ್ ರಾಜ್ ಕುಮಾರ್ ಅವರಿಗಾಗಿ ಹ್ಯಾಪಿ ಆಗಿದೆ ಹ್ಯಾಪಿ ಆಗಿದೆ ಹಾಗೂ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡಿದರು.

ಗಾಯಕ ಪಂಚಮ್ ಅವರು, ಯುವ ದಸರಾ ಕುರಿತು ರಚಿಸಿದ್ದ ಸಂಜೆ ಭಾನು ಕೆಂಪಾಗಿದೆ ಎಂಬ ಹಾಡನ್ನು ಹೇಳಿ ಯುವಕರ ಮೈ ಮನ ಮಾರುಹೋಗುವಂತೆ ಹಾಡಿದರು. ಗಾಯಕ ಅಜಯ್ ಅವರು ಶರಣ್ ಚಿತ್ರದ ಕಾಲಿ ಕ್ವಾಟ್ರು ಬಾಟ್ಲು ಅಂಗೆ ಲೈಫು ಗೀತೆಯನ್ನು ಹಾಡುವ ಮೂಲಕ ಮನರಂಜಿಸಿದರು.

ತತ್ಸಮ ತದ್ಭವ ಚಿತ್ರದ ನಿರ್ದೇಶಕ ಪನ್ನಗಾಭರಣ ಅವರು ತಮ್ಮ ಚಿತ್ರವನ್ನಲ್ಲದೆ ಕನ್ನಡ ಚಿತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಮೈಸೂರು ಡ್ಯಾನ್ಸ್ ಅಸೋಷಿಯನ್ ತಂಡದವರು ವಿವಿಧ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು. ಪುರುಷೋತ್ತಮ್ ತಂಡ ತಿಂಗಳು ಮುಳುಗಿದವೋ..., ರಂಗೋಲಿ ಬೆಳಗಿದವೋ.., ತನುಶ್ರೀ ಅವರು ಸೋಜುಗಾದ ಸೂಜಿ ಮಲ್ಲಿಗೆ ಹಾಡನ್ನು ಹಾಡಿದರು.

ಬೆಡಗಿಯರ ರ್ಯಾಂಪ್ ವಾಕ್:

ಪಾಲ್ಗುಣಿ ಗೌಡ ಮತ್ತು ಕೊಲೆಷ್ಟ್ ಬಿಡ್ಡಪ್ಪ ಅವರ ಕಂಪನಿಯ ಉಡುಗೆ ತೊಟ್ಟ ನಟಿ ಅಧಿತಿ ಶೆಟ್ಟಿ, ಮನೋಜ್ ಗೌಡ, ಪಾಲ್ಗುಣಿ ಗೌಡ, ಪ್ರಜ್ವಲ್ ಪೂವಯ್ಯ ಸೇರಿದಂತೆ ಪ್ಯಾಷನ್ ಲೋಕದ ರೂಪದರ್ಶಿಯರು ರ್ಯಾಂಪ್ ವಾಕ್ ಯುವ ಮನಸ್ಸುಗಳನ್ನು ರೋಮಾಂಚನಗೊಳಿಸಿತು.

5 6 7 8 ತಂಡದ ಸದಸ್ಯರು ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದೆ ಎಂಬುದನ್ನು ಸಾರುವ ಸಲುವಾಗಿ ದೇಶದ ವಿವಿಧ ರಾಜ್ಯಗಳ ಉಡುಗೆಗಳನ್ನು ತೊಟ್ಟು ನೃತ್ಯಗಳನ್ನು ಮಾಡುವ ಮೂಲಕ ದೇಶದ ಇತಿಹಾಸವನ್ನು ಹಾಗೂ ರಾಜ್ಯಗಳ ನೃತ್ಯಗಳನ್ನು ಪ್ರದರ್ಶಿಸಿದರು.

click me!