ಅಸಹಾಯಕರ ನೆರವಿಗೆ ಉಚಿತ ಸಂಚಾರ ಸೇವೆ ಘೋಷಿಸಿದ ಯುವಕ!

By Kannadaprabha NewsFirst Published Jul 22, 2020, 10:06 AM IST
Highlights

ಲಾಕ್‌ಡೌನ್‌ ಅವಧಿಯಲ್ಲಿ ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು ಹಾಗೂ ಗರ್ಭಿಣಿಯರು ಸಂಚಾರಕ್ಕೆ ಪಡುವ ಬವಣೆ ಕಂಡು ಮಂಗಳೂರು ಯುವಕನೊಬ್ಬ ಸ್ವಯಂ ಆಗಿ ಉಚಿತ ವಾಹನ ವ್ಯವಸ್ಥೆ ರೂಪಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಮಂಗಳೂರು(ಜು.22): ಲಾಕ್‌ಡೌನ್‌ ಅವಧಿಯಲ್ಲಿ ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು ಹಾಗೂ ಗರ್ಭಿಣಿಯರು ಸಂಚಾರಕ್ಕೆ ಪಡುವ ಬವಣೆ ಕಂಡು ಮಂಗಳೂರು ಯುವಕನೊಬ್ಬ ಸ್ವಯಂ ಆಗಿ ಉಚಿತ ವಾಹನ ವ್ಯವಸ್ಥೆ ರೂಪಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಇಲ್ಲಿನ ಕುದ್ರೋಳಿ ನಿವಾಸಿ ಅರ್ಷದ್‌ ಪೋಪಿ ಉಚಿತ ವಾಹನ ವ್ಯವಸ್ಥೆ ರೂಪಿಸಿದವರು. ಸೋಮವಾರದಿಂದ ಇವರ ಉಚಿತ ವಾಹನ ವ್ಯವಸ್ಥೆ ಆರಂಭವಾಗಿದೆ. ಆದರೆ ಇದು ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು ಹಾಗೂ ಗರ್ಭಿಣಿಯರಿಗೆ ಮಾತ್ರ. ಅಲ್ಲದೆ ಪರವೂರಿನಿಂದ ಬಂದು ಮಂಗಳೂರಿನಲ್ಲಿ ಸಿಲುಕಿಕೊಂಡವರಿಗೂ ಈ ಉಚಿತ ಸೇವೆ ಅನ್ವಯವಾಗುತ್ತದೆ.

ಕೊರೋನಾ ಮಧ್ಯೆ ಫೀಲ್ಡ್‌ಗಿಳಿದ ಡಿಸಿ: ಮಾಸ್ಕ್ ಧರಿಸದವರಿಗೆ ದಂಡ

ಅರ್ಷದ್‌ ಅವರಲ್ಲಿ ಆರು ವಾಹನ ಇದೆ. ಅದರಲ್ಲಿ ಮೂರು ಕಾರು ಹಾಗೂ ಒಂದು ಆಟೋರಿಕ್ಷಾವನ್ನು ಉಚಿತ ಸಂಚಾರ ವ್ಯವಸ್ಥೆಗೆ ಮೀಸಲಿಟ್ಟಿದ್ದಾರೆ. ಕಾರು ಹತ್ತಲಾಗದವರಿಗೆ ಆಟೋ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ವಾಹನಗಳಿಗೆ ಅವರದೇ ಚಾಲಕರಿದ್ದಾರೆ. ಹೆಚ್ಚಾಗಿ ಅವಕಾಶ ಇದ್ದಾಗ ಇವರೇ ಚಾಲಕರಾಗಿ ಹೋಗುತ್ತಾರೆ. ಇವರ ಮೊಬೈಲ್‌ಗೆ ಕರೆ ಮಾಡಿದರೆ ಸಾಕು, ಕರೆದಲ್ಲಿಗೆ ಬಂದು ಪಿಕಪ್‌ ಮಾಡಿ ಆಸ್ಪತ್ರೆಗೆ ಹಾಗೂ ಅಲ್ಲಿಂದ ಮನೆಗೆ ಬಿಟ್ಟು ಬರುತ್ತಾರೆ. ಎಲ್ಲವೂ ಉಚಿತ, ಹಣ ಪಡೆಯುವುದಿಲ್ಲ ಎನ್ನುತ್ತಾರೆ ಅವರು.

ಇತ್ತೀಚೆಗೆ ಉತ್ತರ ಕರ್ನಾಟಕದ ಕುಟುಂಬವೊಂದು ಧಾರಾಕಾರ ಮಳೆಗೆ ಅಸಹಾಯಕರಾಗಿ ನೆನದುಕೊಂಡು ಹೋಗುತ್ತಿದ್ದ ದೃಶ್ಯವೇ ಇವರ ಈ ಸೇವಾ ಕಾರ್ಯಕ್ಕೆ ಪ್ರೇರಣೆ.

ಈ ವ್ಯವಸ್ಥೆ ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ಎಂಬ ನಿಬಂಧನೆಯನ್ನು ಹಾಕಿದ್ದಾರೆ. ಆದರೆ ಕಳೆದ ಎರಡು ದಿನಗಳಲ್ಲಿ ಕ್ಷೇತ್ರ ಬಿಟ್ಟು ಕೂಡ ಅನಿವಾರ್ಯವಾಗಿ ತುರ್ತು ಕರೆಗಳಿಗೆ ಸ್ಪಂದಿಸಿದ್ದಾಗಿ ಹೇಳುತ್ತಾರೆ. ಈ ಸೇವೆ ಲಾಕ್‌ಡೌನ್‌ ನಂತರವೂ ಮುಂದುವರಿಯಲಿದೆ.

ಅಂಧನ 'ಮನೆ' ಬೆಳಗಿದ ಯುವ ಬ್ರಿಗೇಡ್: ಮನೆ ಹಸ್ತಾಂತರಿಸಿದ ಸೂಲಿಬೆಲೆ

ಕುದ್ರೋಳಿ ವಾರ್ಡ್‌ ನಿವಾಸಿಯಾದ ಅರ್ಷದ್‌ ಬಿಜೆಪಿ ಕಾರ್ಯಕರ್ತ. ಕಳೆದ 12 ವರ್ಷಗಳಿಂದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕುದ್ರೋಳಿ ವಾರ್ಡ್‌ನಿಂದ ಬಿಜೆಪಿಯಲ್ಲಿ ಸ್ಪರ್ಧಿಸಿ ಸೋತಿದ್ದರು. ಅರ್ಷದ್‌ ಪೋಪಿ ಸಂಪರ್ಕ- 9731008008. ಈ ಸೇವೆ ಲಾಕ್ಡೌನ್‌ ನಂತರವೂ ಮುಂದುವರಿಯಲಿದೆ.

click me!