ಯಕ್ಷಗಾನ ವೀಕ್ಷಣೆಗೆ ಈಗ ಯುವ ಪಡೆಯ ಟ್ರೆಂಡ್‌..!

By Kannadaprabha NewsFirst Published Dec 5, 2019, 8:05 AM IST
Highlights

ರಾಜ್ಯದ ಕರಾವಳಿ ನೆಲದಲ್ಲಿ ಈಗ ಹೊಸತೊಂದು ಟ್ರೆಂಡ್‌ ಸೃಷ್ಟಿಯಾಗಿದೆ. ನಿತ್ಯವೂ ರಾತ್ರಿಯಿಂದ ಬೆಳಗ್ಗಿನ ವರೆಗೆ ನಡೆಯುವ ಯಕ್ಷಗಾನ ಮೇಳಗಳ ಪ್ರದರ್ಶನ ಸ್ಥಳಗಳಿಗೆ ಯುವ ಪಡೆಯೊಂದು ಹಠಾತ್ತನೆ ಭೇಟಿ ನೀಡಿ ಆಟವನ್ನು ಆಸ್ವಾದಿಸಿ ಹೊರಡುತ್ತದೆ. ಹೌದು, ಯಕ್ಷಗಾನಕ್ಕೆ ಯುವ ಜನತೆಯ ಆಕರ್ಷಣೆ ಕಡಿಮೆಯಾಗುತ್ತಿದೆ ಎಂಬ ಕೂಗಿನ ಬೆನ್ನಲ್ಲೇ ಇಂಥದ್ದೊಂದು ಹೊಸ ಪ್ರಯತ್ನ ಶುರುವಾಗಿದೆ. ಇದು ಯಕ್ಷಗಾನಕ್ಕೆ ಮತ್ತಷ್ಟುಪ್ರೇಕ್ಷಕರನ್ನು ಸೆಳೆದೊಯ್ಯುವ ಹವಾ ಸೃಷ್ಟಿಸಲಿದೆ.

ಮಂಗಳೂರು(ಡಿ.05): ರಾಜ್ಯದ ಕರಾವಳಿ ನೆಲದಲ್ಲಿ ಈಗ ಹೊಸತೊಂದು ಟ್ರೆಂಡ್‌ ಸೃಷ್ಟಿಯಾಗಿದೆ. ನಿತ್ಯವೂ ರಾತ್ರಿಯಿಂದ ಬೆಳಗ್ಗಿನ ವರೆಗೆ ನಡೆಯುವ ಯಕ್ಷಗಾನ ಮೇಳಗಳ ಪ್ರದರ್ಶನ ಸ್ಥಳಗಳಿಗೆ ಯುವ ಪಡೆಯೊಂದು ಹಠಾತ್ತನೆ ಭೇಟಿ ನೀಡಿ ಆಟವನ್ನು ಆಸ್ವಾದಿಸಿ ಹೊರಡುತ್ತದೆ.

ಹೌದು, ಯಕ್ಷಗಾನಕ್ಕೆ ಯುವ ಜನತೆಯ ಆಕರ್ಷಣೆ ಕಡಿಮೆಯಾಗುತ್ತಿದೆ ಎಂಬ ಕೂಗಿನ ಬೆನ್ನಲ್ಲೇ ಇಂಥದ್ದೊಂದು ಹೊಸ ಪ್ರಯತ್ನ ಶುರುವಾಗಿದೆ. ಇದು ಯಕ್ಷಗಾನಕ್ಕೆ ಮತ್ತಷ್ಟುಪ್ರೇಕ್ಷಕರನ್ನು ಸೆಳೆದೊಯ್ಯುವ ಹವಾ ಸೃಷ್ಟಿಸಲಿದೆ.

Latest Videos

ಕರಾವಳಿಯಲ್ಲಿ ಇನ್ನೂ ಎರಡ್ಮೂರು ದಿನ ಮಳೆ..!

ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ನಿತ್ಯವೂ ಸುಮಾರು 30ಕ್ಕೂ ಅಧಿಕ ಯಕ್ಷಗಾನ ಮೇಳಗಳು ರಾತ್ರಿಯಿಂದ ಬೆಳಗ್ಗಿನವರೆಗೆ ಯಕ್ಷಗಾನ ಪ್ರದರ್ಶನ ನೀಡುತ್ತಿವೆ. ಇವುಗಳಲ್ಲಿ ಟೆಂಟ್‌ ಮಾತ್ರವಲ್ಲ ಬಯಲಾಟ ಮೇಳಗಳೂ ಯಕ್ಷಗಾನ ಪ್ರದರ್ಶನ ನೀಡುತ್ತಿವೆ. ಇವುಗಳಿಗೆ ಕೆಲವೊಮ್ಮೆ ಪ್ರೇಕ್ಷಕರ ಕೊರತೆಯೂ ತಟ್ಟುವುದು ಮಾಮೂಲು. ಇದನ್ನು ತಪ್ಪಿಸಲು, ಇನ್ನಷ್ಟುಮಂದಿಯನ್ನು ಅದರಲ್ಲೂ ಯುವ ಸಮುದಾಯವನ್ನು ಯಕ್ಷಗಾನದತ್ತ ಸೆಳೆಯಲು ಯುವಕರ ತಂಡ ಕಂಡುಕೊಂಡ ಉಪಾಯ ಹೊಸ ಟ್ರೆಂಡ್‌ ಸೃಷ್ಟಿಸುವುದು.

ಏನಿದು ಹೊಸ ಟ್ರೆಂಡ್‌?:

ಮಂಗಳೂರಿನ ಬಜಪೆ, ಕುಪ್ಪೆಪದವು, ಕುಕ್ಕಟ್ಟೆಪರಿಸರದ ಯುವಕರು ಪ್ರತ್ಯೇಕ ತಂಡವನ್ನು ಹುಟ್ಟುಹಾಕಿದ್ದಾರೆ. ‘ಕಲಾಭಿಮಾನಿ ಬಳಗ’ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ಈಗ 22 ಮಂದಿಗೂ ಅಧಿಕ ಮಂದಿ ಸದಸ್ಯರನ್ನು ಸೇರಿಸಿದ್ದಾರೆ. ಈ ಸದಸ್ಯರು ಕಪ್ಪು ಮಿಶ್ರಿತ ಕ್ರೀಮ್‌ ಬಣ್ಣದ ಟೀ ಶರ್ಟ್‌ ಧರಿಸಿ ಬೈಕ್‌ ಹಾಗೂ ಕಾರನ್ನು ಹತ್ತಿಕೊಂಡು ಯಕ್ಷಗಾನ ಪ್ರದರ್ಶನ ಇರುವಲ್ಲಿಗೆ ತೆರಳುತ್ತಾರೆ. ಒಂದಷ್ಟುಹೊತ್ತು ಯಕ್ಷಗಾನ ನೋಡಿ, ಮತ್ತೆ ಇನ್ನೊಂದು ಮೇಳದ ಪ್ರದರ್ಶನಕ್ಕೆ ತೆರಳುತ್ತಾರೆ.

ಮಂಗಳೂರಿನಲ್ಲಿ ವಿಹಿಂಪ ಕೇಂದ್ರೀಯ ಬೈಠಕ್‌, ವಿದೇಶದಿಂದಲೂ ಜನ ಭಾಗಿ

ಒಂದು ರಾತ್ರಿಯಿಂದ ಬೆಳಗಿನ ವರೆಗೆ ಏನಿಲ್ಲವೆಂದರೂ ಮೂರ್ನಾಲ್ಕು ಕಡೆ ಯಕ್ಷಗಾನ ಪ್ರದರ್ಶನಕ್ಕೆ ಭೇಟಿ ನೀಡುತ್ತಾರೆ. ರಾತ್ರಿ ಯಕ್ಷಗಾನಕ್ಕೆ ದಿಢೀರನೆ ಪ್ರತ್ಯಕ್ಷವಾಗುವ ಈ ಸಮವಸ್ತ್ರಧಾರಿ ಯುವ ಪಡೆಯನ್ನು ನೋಡಿ ಕುತೂಹಲಗೊಳ್ಳುವ ಸರದಿ ಪ್ರೇಕ್ಷಕರದ್ದು. ಈ ಯುವ ಪಡೆಗೆ ಎಲ್ಲ ಮೇಳಗಳ ಕಲಾವಿದರ ಪರಿಚಯ ಇದೆ. ಚೌಕಿಯಲ್ಲಿ ಕಲಾವಿದರನ್ನು ಮಾತನಾಡಿಸಿ, ಬಳಿಕ ಮೇಳದ ಮೇಲ್ವಿಚಾರಕರಿಗೆ, ಆಟ ಆಡಿಸುವವರಿಗೆ, ಪ್ರೇಕ್ಷಕರಿಗೆ ತಮ್ಮ ಉದ್ದೇಶವನ್ನು ತಿಳಿಸುತ್ತಾರೆ. ಇದು ಯುವ ಪಡೆಯ ದೈನಂದಿನ ರಾತ್ರಿ ಪಾಳಿಯ ದಿನಚರಿ.

‘ಆಟಿಡೊಂಜಿ ದಿನ’ ತುಳು ಸಿನಿಮಾ 6ರಂದು ತೆರೆಗೆ

ಹೊಸ ಪ್ರಸಂಗವಾದರೆ ಬೆಳಗಿನ ವರೆಗೆ ವೀಕ್ಷಿಸುತ್ತಾರೆ, ಹಳೆ ಪ್ರಸಂಗವಾದರೆ, ಕೆಲವು ಗಂಟೆ ಹೊತ್ತು ವೀಕ್ಷಿಸಿ ಮತ್ತೆ ಬೇರೆ ಮೇಳಗಳ ಯಕ್ಷಗಾನಕ್ಕೆ ತೆರಳುತ್ತಾರೆ. ಇವರು ದ.ಕ. ಮಾತ್ರವಲ್ಲ ಉಡುಪಿ, ಉತ್ತರ ಕನ್ನಡಕ್ಕೂ ತೆರಳುತ್ತಾರೆ. ಒಂದೇ ತಂಡವಾಗಿ ತೆರಳುವುದಕ್ಕೆ ಒತ್ತು ನೀಡುತ್ತಾರೆ.

ಕಾರ್ಮಿಕರಿಂದ ಐಟಿ ವರೆಗೆ:

ಈ ತಂಡದಲ್ಲಿ ಹೊಟೇಲ್‌ ಕಾರ್ಮಿಕರು, ಐಟಿ ಕಂಪನಿ ಉದ್ಯೋಗಿಗಳು, ಬ್ಯಾಂಕ್‌ನವರು, ಸ್ವಉದ್ಯೋಗಿಗಳು ಇದ್ದಾರೆ. ಹಗಲು ಕೆಲಸ ಮಾಡಿ, ರಾತ್ರಿ ಯಕ್ಷಗಾನ ವೀಕ್ಷಿಸಲು ತಿರುಗಾಟ ನಡೆಸುತ್ತಾರೆ. ಬೆಳಗ್ಗೆ ಬಂದು 8 ಗಂಟೆ ವರೆಗೆ ಮಿಶ್ರಾಂತಿ ಮಾಡಿ ಮತ್ತೆ ಎಂದಿನಂತೆ ಕೆಲಸಕ್ಕೆ ತೆರಳುತ್ತಾರೆ. ಇವರೆಲ್ಲರೂ ಸ್ವಂತ ವೆಚ್ಚದಲ್ಲಿ ಯಕ್ಷಗಾನ ವೀಕ್ಷಣೆಗೆ ತೆರಳುತ್ತಿರುವುದು ಗಮನಾರ್ಹ.

ಇವರಿಗೆ ಯಕ್ಷಗಾನ ಅಭಿಮಾನ ಮಾತ್ರ..

ಈ ಯುವ ಪಡೆಯ ಟೀ ಶರ್ಟ್‌ನ ಮುಂಭಾಗದಲ್ಲಿ ‘ಯಕ್ಷಗಾನಂ ಗೆಲ್ಗೆ’ ಹಾಗೂ ಹಿಂಭಾಗದಲ್ಲಿ ‘ಕಲಾಭಿಮಾನಿ’ ಎಂದಷ್ಟೆಬರೆಯಲಾಗಿದೆ. ಈ ತಂಡದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಯುವಕರು ಇದ್ದರೂ ಎಲ್ಲಯೂ ಯಾವುದೇ ಊರಿನ ಹೆಸರು ನಮೂದಿಸಿಲ್ಲ. ಈ ಮೂಲಕ ತಾವೆಲ್ಲ ಅಪ್ಪಟ ಕಲಾಭಿಮಾನಿಗಳು ಮಾತ್ರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇವರಿಗೆ ತೆಂಕು-ಬಡಗು ಎರಡೂ ತಿಟ್ಟಿನ ಯಕ್ಷಗಾನ ಮೇಳ ಪಥ್ಯ. ಒಂದು ಮೇಳ, ಪ್ರಸಂಗ ಅಥವಾ ಕಲಾವಿದರ ಪರವಾಗಿ ಎಂಬ ಪ್ರತ್ಯೇಕತೆ ಇವರಲಿಲ್ಲ. ಕೇವಲ ಯಕ್ಷಗಾನದತ್ತ ಯುವ ಜನತೆಯನ್ನು ಸೆಳೆಯಲು ಮಾತ್ರ ಈ ಪರಿಯ ಕಸರತ್ತು ಮಾಡುತ್ತಿದ್ದಾರೆ.

ಮಂಗಳೂರಿಗೆ ಬಂತು ವಿದೇಶಿ ಆನಿಯನ್..! ಅರ್ಧ ಕೆಜಿಗೂ ಹೆಚ್ಚು ತೂಗುತ್ತೆ ಒಂದು ಈರುಳ್ಳಿ

ಸದ್ಯ ಯಕ್ಷಗಾನ ಪ್ರದರ್ಶನ ಇರುವಲ್ಲಿಗೆ ಭೇಟಿ ನೀಡುತ್ತೇವೆ. ಸಮವಸ್ತ್ರ ಮೂಲಕ ಇತರರನ್ನೂ ಯಕ್ಷಗಾನಕ್ಕೆ ಸೆಳೆಯುವ ಪ್ರಯತ್ನ ನಡೆಸುತ್ತಿದ್ದೇವೆ. ಮುಂದೆ ಯಕ್ಷಗಾನ ಕಲಾವಿದರಿಗೆ ಯಾವ ರೀತಿಯಲ್ಲಿ ನೆರವಾಗಬೇಕು ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಕುಪ್ಪೆಪದವು ಚೇತನ್‌ ಹೇಳಿದ್ದಾರೆ.

ನಮ್ಮ ದಿರಿಸು ನೋಡಿ ಯಕ್ಷಗಾನದತ್ತ ಯುವ ಜನತೆ ಇನ್ನಷ್ಟುಬರಬೇಕು ಎಂಬುದು ಅಪೇಕ್ಷೆ. ನಮ್ಮ ತಂಡವನ್ನು ವಿಸ್ತರಿಸುತ್ತಿದ್ದು, ಎಕ್ಕಾರಿನ ನೂರು ಮಂದಿ ಸೇರ್ಪಡೆಗೆ ಮುಂದೆ ಬಂದಿದ್ದಾರೆ. ಅವರನ್ನು ಸಮವಸ್ತ್ರ ಮೂಲಕ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಕುಪ್ಪೆಪದವು ಪ್ರಕಾಶ್‌ ಕೋಟ್ಯಾನ್‌ ಹೇಳಿದ್ದಾರೆ.

-ಆತ್ಮಭೂಷಣ್‌

click me!